ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಬಡ ವಿದ್ಯಾಥಿಗಳಿಗೆ ದಾರಿ ದೀಪವಾಗಿರುವ ಭಾರತೀ ಶಿಕ್ಷಣ ಸಂಸ್ಥೆ ಮುಂದಿನ ದಿನಗಳಲ್ಲಿ ಬಹು ದೊಡ್ಡ ವಿಶ್ವ ವಿದ್ಯಾನಿಲಯವಾಗಿ ರೂಪುಗೊಳ್ಳಲಿದೆ ಎಂದು ಮಂಡ್ಯ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಶಿವಚಿತ್ತಪ್ಪ ಭವಿಷ್ಯ ನುಡಿದರು.ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಗಂಣದಲ್ಲಿ ಭಾರತೀ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವತಿಯಿಂದ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿ, ಭಾರತೀ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಆದ್ಯತೆ ನೀಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತಮ ವಾತಾವರಣ ಕಲ್ಪಿಸಿದೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಜೊತೆಗೆ ಕೌಶಲ್ಯ ಪಡೆದುಕೊಂಡರೇ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ. ಪದವೀಧರರು ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಾಗಿ ಪಡೆದುಕೊಳ್ಳಬೇಕು. ಸ್ವತಂತ್ರ ಚಿಂತನೆಗಳನ್ನು ಮೂಲಕ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಭಾರತಿ ಶಿಕ್ಷಣ ಸಂಸ್ಥೆಗೆ ವಿದೇಶಗಳಿಂದ ವಿದ್ಯಾರ್ಥಿಗಳು ಸಂಶೋಧನೆ ಮಾಡಲು ಬರುತ್ತಿರುವುದು ಹೆಮ್ಮೆ ತರುವ ವಿಷಯ. ಪದವೀಧರರು ತಾಳ್ಮೆಯ ಗುಣ ಹೊಂದಿ ಗುರಿಯೊಂದಿಗೆ ಪರಿಶ್ರಮ ಹಾಕಿದರೆ ಯಶಸ್ಸು ಸಾಧಿಸಬಹುದು ಎಂದರು.
ವಿಧಾನ ಪರಿಷತ್ ಸದಸ್ಯ, ಭಾರತೀ ಶಿಕ್ಷಣ ಸಂಸ್ಥೆ ಚೇರ್ಮನ್ ಮಧು ಜಿ.ಮಾದೇಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಬಹಳಷ್ಟು ಪ್ರಗತಿ ಸಾಧಿಸಿದ್ದು, ಎಐ (ಕೃತಕ ಬುದ್ಧಿ ಮತ್ತೆ) ನಿಂದ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯುವ ಸಾರ್ಮಥ್ಯ ಹೊಂದಿದ್ದೇವೆ. ಎಐನಿಂದ ವಿದ್ಯಾರ್ಥಿ ತನ್ನ ಅಂಗೈಯಲ್ಲಿ ಎಲ್ಲವನ್ನು ಸುಲಭವಾಗಿ ಕಲಿಯಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ, ಕಲಿಕೆ ಮತ್ತು ಶ್ರಮ ಎಲ್ಲವೂ ನಿರಂತರವಾಗಿ ಸಾಗಬೇಕು. ಕಂಪ್ಯೂಟರ್ ಶಿಕ್ಷಣವು ಅತಿ ಮುಖ್ಯ ಎಂದರು.
ವಿದ್ಯಾರ್ಥಿಯು ಹೇಗೆ ಓದಬೇಕು, ಯಾವ ರೀತಿ ಅಧ್ಯಯನ ಮಾಡಬೇಕು ಎಂಬುದನ್ನು ತಿಳಿದರೆ ಉದ್ಯೋಗ ದೊರೆಯಲಿದೆ. ಉನ್ನತ ಶಿಕ್ಷಣ ಪಡೆಯುವಾಗ ತಾಂತ್ರಿಕತೆಗೆ ಹೆಚ್ಚಿನ ಗಮನ ನೀಡಬೇಕು. ಈ ಬಗ್ಗೆ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಮೈಸೂರು ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ನಾಗರಾಜು ಮಾತನಾಡಿ, ಉತ್ತಮ ಗುರಿಯೊಂದಿಗೆ ಸೂಕ್ತ ನಿರ್ಧಾರ ಪಡೆದು ಕಲಿಕೆಯನ್ನು ನಿರಂತರವಾಗಿಸಿಕೊಳ್ಳಬೇಕು. ಇದರಿಂದ ಯಶಸ್ಸಿನ ಹಾದಿ ಕಂಡುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.ಈ ವೇಳೆ ಪದವಿ ವಿಭಾಗದ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಗಣಕಯಂತ್ರ ವಿಭಾಗದಿಂದ 205 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 297 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಪದವಿ ಸ್ವೀಕರಿಸಲು ಆಗಮಿಸಿದ್ದ ವಿದ್ಯಾಥಿಗಳು ಶ್ವೇತವರ್ಣದಲ್ಲಿ ಕಂಗೊಳಿಸುತ್ತಿದ್ದರು. ಕಾಲೇಜಿನ ಆವರಣದಲ್ಲಿ ಸೆಲ್ಫಿ ಕ್ರೇಜ್ ಜೋರಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಕಪ್ಪು ಗೌನ್ ಧರಿಸಿ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಸಂಭ್ರಮದಿಂದ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.ಈ ವೇಳೆ ಮೈಸೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ನಾಗರಾಜು, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಜಿ.ಡಿ.ಹಳ್ಳಿ ಸಿದ್ದೇಗೌಡ, ಟ್ರಸ್ಟಿ ಕಾರ್ಕಹಳ್ಳಿ ಬಸವೇಗೌಡ, ಜಯರಾಮು, ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ನಾಗರಾಜು. ಪ್ರಾಂಶುಪಾಲ ಸಿ.ವಿ ಮಲ್ಲಿಕಾರ್ಜುನ್, ಪರೀಕ್ಷಾ ನಿಯಂತ್ರಕ ಕೆ.ಸಿ. ಸುಂದ್ರೇಶ್, ಉಪ ಪರೀಕ್ಷಾ ನಿಯಂತ್ರಕ ಡಾ. ಕೆ.ಟಿ.ಗಣೇಶ್ ಸೇರಿದಂತೆ ಮತ್ತಿತರಿದ್ದರು.