ಇಲ್ಲಿನ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾದ ಭಟ್ಕಳ ಎಂಪ್ಲಾಯೀಸ್ ಲೀಗ್–2026 (ಸೀಸನ್–2) ಲೀಗ್ ಮಾದರಿಯ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿ.ಎಚ್.ಎಸ್. ಮುಂಡಳ್ಳಿ ಶಾಲೆಯ ಶಿಕ್ಷಕ ವೆಂಕಟರಮಣ ಮೊಗೇರ ಮಾಲೀಕತ್ವದ ದುರ್ಗಾ ದೇವಿ ಕ್ರಿಕೆಟರ್ಸ್ ತಂಡ ಶ್ರೇಷ್ಠ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿನ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾದ ಭಟ್ಕಳ ಎಂಪ್ಲಾಯೀಸ್ ಲೀಗ್–2026 (ಸೀಸನ್–2) ಲೀಗ್ ಮಾದರಿಯ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿ.ಎಚ್.ಎಸ್. ಮುಂಡಳ್ಳಿ ಶಾಲೆಯ ಶಿಕ್ಷಕ ವೆಂಕಟರಮಣ ಮೊಗೇರ ಮಾಲೀಕತ್ವದ ದುರ್ಗಾ ದೇವಿ ಕ್ರಿಕೆಟರ್ಸ್ ತಂಡ ಶ್ರೇಷ್ಠ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.ಒಟ್ಟೂ ಎಂಟು ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಮೊದಲ ಸೆಮಿಫೈನಲ್‌ನಲ್ಲಿ ಶಿಕ್ಷಕ ವೆಂಕಟೇಶ್ ನಾಯ್ಕ ಮಾಲೀಕತ್ವದ ಮಾನವಿ ಕ್ರಿಕೆಟಿಗರು ತಂಡ, ಪೊಲೀಸ್ ಹವಾಲ್ದಾರ್ ಶ್ರೀಧರ್ ತಾಡೇಲ್ ಮಾಲೀಕತ್ವದ ರವಿ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತು. 2ನೇ ಸೆಮಿಫೈನಲ್‌ನಲ್ಲಿ ದುರ್ಗಾ ದೇವಿ ಕ್ರಿಕೆಟರ್ಸ್ ತಂಡ ರವಿ ರಾಯಲ್ಸ್ ವಿರುದ್ಧ ಜಯ ಸಾಧಿಸಿ ಅಂತಿಮ ಪಂದ್ಯಕ್ಕೆ ಲಗ್ಗೆ ಇಟ್ಟಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಾನವಿ ಕ್ರಿಕೆಟಿಗರು ತಂಡ 8 ಓವರ್‌ಗಳಲ್ಲಿ 65 ರನ್‌ಗಳಿಗೆ ಸೀಮಿತವಾಯಿತು. 66 ರನ್‌ಗಳ ಗುರಿ ಬೆನ್ನಟ್ಟಿದ ದುರ್ಗಾ ದೇವಿ ಕ್ರಿಕೆಟರ್ಸ್ ತಂಡ 7 ಓವರ್‌ಗಳಲ್ಲೇ ಗುರಿ ತಲುಪಿ ರೋಚಕ ಜಯ ದಾಖಲಿಸಿತು.

ವೈಯಕ್ತಿಕ ಪ್ರಶಸ್ತಿ:

ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಹೀರೋ ಸೈಕಲ್ ಅನ್ನು ದುರ್ಗಾ ದೇವಿ ಕ್ರಿಕೆಟರ್ಸ್ ತಂಡದ ರಾಜ್ಯ ಗುಪ್ತ ವಾರ್ತೆಯ ಗಿರೀಶ್ ಮೊಗವೀರ್ ತಮ್ಮದಾಗಿಸಿಕೊಂಡರು.

ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಅತ್ಯುತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ರವಿ ರಾಯಲ್ಸ್ ತಂಡದ ಉಸ್ಮಾನ್ ಉಸ್ತಾದ್ ಪಡೆದರು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಸಂದೀಪ್ ನಾಯ್ಕ ತಮ್ಮದಾಗಿಸಿಕೊಂಡರು.

ಬಹುಮಾನ ವಿತರಣೆ:ಚಾಂಪಿಯನ್ ದುರ್ಗಾ ದೇವಿ ಕ್ರಿಕೆಟರ್ಸ್ ತಂಡಕ್ಕೆ ₹33,333 ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್-ಅಪ್ ಮಾನವಿ ಕ್ರಿಕೆಟಿಗರು ತಂಡಕ್ಕೆ ₹22,222 ನಗದು ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ರವಿ ರಾಯಲ್ಸ್ ತಂಡಕ್ಕೆ ₹7,777 ನಗದು ಹಾಗೂ ಟ್ರೋಫಿ ನೀಡಲಾಯಿತು. ಈ ಸಂದರ್ಭ ವಿಶ್ವವಿದ್ಯಾಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಯಾದ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ದೇವು ನಾಯ್ಕ ಅವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು. ಜಾಲಿ ಪಪಂ ಸದಸ್ಯೆ ಶಾಹಿನ್ ಶೇಖ, ರಂಜನ್ ಇಂಡಿಯನ್ ಗ್ಯಾಸ್ ಮಾಲೀಕ ಶಿವಾನಿ ಶಾಂತರಾಮ್, ಪಿಎಸ್‌ಐ ರನ್ನ ಗೌಡ, ಸಮಿತಿ ಅಧ್ಯಕ್ಷ ಗಣೇಶ್ ಹೆಗಡೆ, ಉಪಾಧ್ಯಕ್ಷ ವಿಶಾಲ್ ಮುಂತಾದವರಿದ್ದರು.