ಭಟ್ಕಳ: ನಾಮಫಲಕದ ಕಂಬ ತೆರವು, ಜಾಲಿ ಪಟ್ಟಣ ಪಂಚಾಯಿತಿ ಎದುರು ಹಿಂದೂ ಕಾರ್ಯಕರ್ತರ ಪ್ರತಿಭಟನೆ

| Published : Jan 16 2024, 01:46 AM IST

ಭಟ್ಕಳ: ನಾಮಫಲಕದ ಕಂಬ ತೆರವು, ಜಾಲಿ ಪಟ್ಟಣ ಪಂಚಾಯಿತಿ ಎದುರು ಹಿಂದೂ ಕಾರ್ಯಕರ್ತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾಲಿಯ ದೇವಿನಗರದಲ್ಲಿ ನಾಮಫಲಕ ಅಳವಡಿಸಲು ಹಾಕಲಾಗಿದ್ದ ಕಂಬವನ್ನು ಜಾಲಿ ಪಟ್ಟಣ ಪಂಚಾಯಿತಿ ತೆರವುಗೊಳಿಸಿರುವುದನ್ನು ಖಂಡಿಸಿ ಸೋಮವಾರ ಸ್ಥಳದಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಕಂಬ ಮರುಸ್ಥಾಪಿಸುವಂತೆ ಆಗ್ರಹಿಸಿದರು.

ಭಟ್ಕಳ:ಜಾಲಿಯ ದೇವಿನಗರದಲ್ಲಿ ನಾಮಫಲಕ ಅಳವಡಿಸಲು ಹಾಕಲಾಗಿದ್ದ ಕಂಬವನ್ನು ಜಾಲಿ ಪಟ್ಟಣ ಪಂಚಾಯಿತಿ ತೆರವುಗೊಳಿಸಿರುವುದನ್ನು ಖಂಡಿಸಿ ಸೋಮವಾರ ಸ್ಥಳದಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಕಂಬ ಮರುಸ್ಥಾಪಿಸುವಂತೆ ಆಗ್ರಹಿಸಿದರು.ಜಾಲಿಯ ದೇವಿನಗರದಲ್ಲಿ ನಾಮಫಲಕ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಸೋಮವಾರ ಬೆಳಗಿನ ಜಾವ ಪಟ್ಟಣ ಪಂಚಾಯಿತಿಯವರು ಪೊಲೀಸರ ಜತೆ ಸ್ಥಳಕ್ಕೆ ತೆರಳಿ ಆ ಕಂಬವನ್ನು ತೆರವುಗೊಳಿಸಿದ್ದರು. ಇದರಿಂದ ಆಕ್ರೋಶಿತರಾದ ನೂರಾರು ಹಿಂದೂ ಕಾರ್ಯಕರ್ತರು ಸ್ಥಳದಲ್ಲಿಯೇ ಧರಣಿ ನಡೆಸಿ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ಜಾಲಿ ಪಪಂ ಸದಸ್ಯ ದಯಾನಂದ ನಾಯ್ಕ, ದೇವಿನಗರದಲ್ಲಿರುವ ಮದರಸಾ ಕಟ್ಟಡ ಬದಲಾಯಿಸಿ ಮಸೀದಿ ಮಾಡಲಾಗಿದೆ. ಮೈಕ್‌ ಅಳವಡಿಸಿ ಪ್ರಾರ್ಥಿಸಲಾಗುತ್ತಿದೆ. ಇದಕ್ಕೆ ಪರವಾನಗಿ ಪಡೆದಿಲ್ಲ. ಇಂತಹ ಅನೇಕ ಕಟ್ಟಡಗಳು ಪಪಂ ವ್ಯಾಪ್ತಿಯಲ್ಲಿ ಇದ್ದರೂ ನಾವು ನಾಮಫಲಕ ಅಳವಡಿಸಲು ಹಾಕಿದ್ದ ಕಂಬವನ್ನು ಮಾತ್ರ ಅನಧಿಕೃತ ಎಂದು ಕಿತ್ತು ಹಾಕಲಾಗಿದೆ. ಇದರಂತೆ ಅನಧಿಕೃತವಾಗಿರುವ ಎಲ್ಲವನ್ನೂ ಕೀಳಬೇಕು. ಇಲ್ಲವೆ ನಮಗೆ ನಾಮಫಲಕ ಅಳವಡಿಸಲು ಕಂಬ ನೆಡಲು ಅವಕಾಶ ಕೊಡಬೇಕು ಎಂದರು.ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗುತ್ತಿರುವುದನ್ನು ಗಮನಿಸಿ ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ತಿಪ್ಪಿಸ್ವಾಮಿ, ಈ ಬಗ್ಗೆ ಉಭಯ ಕೋಮಿನ ಸಭೆ ಕರೆದು ಚರ್ಚಿಸಿ, ನಾಮಫಲಕ ಅಳವಡಿಸುವ ಜಾಗವು ಅಧಿಕೃತವಾಗಿದ್ದಲ್ಲಿ ಪರವಾನಗಿ ನೀಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಹಿಂದೂ ಕಾರ್ಯಕರ್ತರು, ಒಂದು ದಿನ ಮಾತ್ರ ನೀಡುತ್ತೇವೆ. ಆ ಅವಧಿ ಒಳಗೆ ನಾಮಫಲಕ ಅಳವಡಿಸಲು ಅವಕಾಶ ನೀಡದಿದ್ದಲ್ಲಿ ಪುನಃ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಅಲ್ಲಿಂದ ತೆರಳಿದರು. ಜಾಲಿ ಪಪಂ ಮುಖ್ಯಾಧಿಕಾರಿ ಮಂಜಪ್ಪ, ದೇವಿನಗರದಲ್ಲಿ ನಾಮಫಲಕ ಅಳವಡಿಸಲು ಪಂಚಾಯಿತಿಯಿಂದ ಪರವಾನಗಿ ಪಡೆದಿಲ್ಲ. ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆ ಕಂಬು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.