ಕಾಶ್ಮೀರ ಘಟನೆಗೆ ಭಟ್ಕಳ ತಂಝೀಂ ತೀವ್ರ ಖಂಡನೆ

| Published : Apr 24 2025, 11:46 PM IST

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ಇಲ್ಲಿನ ಮುಸ್ಲಿಮರ ಪರಮೋಚ್ಚ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ ವ ತಂಝೀಂ ತೀವ್ರವಾಗಿ ಖಂಡಿಸಿದೆ. ನಾಗರಿಕರ ಜೀವಗಳನ್ನು ಹತ್ಯೆ ಮಾಡಿರುವ ಈ ಕೃತ್ಯ ಮನುಷ್ಯತ್ವವಿಲ್ಲದ ಕ್ರೂರತೆಗೆ ನಿದರ್ಶನವಾಗಿದೆ ಎಂದು ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಹೇಳಿದ್ದಾರೆ.

ಭಟ್ಕಳ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ಇಲ್ಲಿನ ಮುಸ್ಲಿಮರ ಪರಮೋಚ್ಚ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ ವ ತಂಝೀಂ ತೀವ್ರವಾಗಿ ಖಂಡಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ನಾಗರಿಕರ ಜೀವಗಳನ್ನು ಹತ್ಯೆ ಮಾಡಿರುವ ಈ ಕೃತ್ಯ ಮನುಷ್ಯತ್ವವಿಲ್ಲದ ಕ್ರೂರತೆಗೆ ನಿದರ್ಶನವಾಗಿದೆ. ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಪ್ರವಾಸಿಗರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯನ್ನು ತಂಝೀಂ ಬಲವಾಗಿ ಖಂಡಿಸುತ್ತದೆ. ದೇಶದ ಸೂಕ್ಷ್ಮ ಪ್ರದೇಶವಾದ ಕಾಶ್ಮೀರದ ಪ್ರವಾಸದ ಸ್ಥಳಗಳಿಗೆ ಭದ್ರತೆಯನ್ನು ಒದಗಿಸುವಲ್ಲಿ ದೇಶದ ಗೃಹ ಇಲಾಖೆ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ. ನಾಗರಿಕರು ಮತ್ತು ಪ್ರವಾಸಿಗರ ಜೀವ ಭದ್ರತೆ ಕಾಪಾಡುವುದು ಸರ್ಕಾರದ ಮೂಲಭೂತ ಹೊಣೆಗಾರಿಕೆಯಾಗಿದೆ. ನಾವು ಎಲ್ಲ ಧರ್ಮ, ಜಾತಿಗಳ ಜನರು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ನಿಲ್ಲಬೇಕು ಮತ್ತು ಶಾಂತಿಯುತ ಹಾಗೂ ನ್ಯಾಯಸಮ್ಮತ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕಬೇಕು ಎಂದು ಎಂದ ಅವರು ಹೇಳಿದರು. ಈ ಘಟನೆಯನ್ನು ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳಬಾರದು. ಕೆಲವು ಬಿಜೆಪಿಯ ರಾಜಕಾರಣಿಗಳು ಈ ಘಟನೆಯನ್ನು ಖಂಡಿಸುತ್ತಲೇ ಮುಸ್ಲಿಮರ ವಿರುದ್ಧ ತಮ್ಮ ರಾಜಕೀಯ ಲಾಭಕ್ಕಾಗಿ ಅವಹೇಳನಕಾರಿ ಹೇಳಿಕೆಯನ್ನು ಮಾಧ್ಯಮದ ಮೂಲಕ ನೀಡಿದ್ದು, ಇದರಿಂದ ಸಮಾಜದಲ್ಲಿ ಒಡಕು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಇಂತಹ ಹೇಳಿಕೆಗಳು ದೇಶದ ಶಾಂತಿ ಮತ್ತು ಏಕತೆಗೆ ಧಕ್ಕೆ ತರುತ್ತದೆ. ಅಂಥವರನ್ನು ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮವಾಗಬೇಕು. ಸಮಾಜವನ್ನು ಧಾರ್ಮಿಕವಾಗಿ ವಿಭಜಿಸುವ ಶಕ್ತಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಮತ್ತು ಭಯೋತ್ಪಾದನೆ ತಡೆಗಟ್ಟಲು ಗುಪ್ತಚರ ವ್ಯವಸ್ಥೆ ಬಲಪಡಿಸಬೇಕು. ಸಂತ್ರಸ್ತರ ಕುಟುಂಬಗಳಿಗೆ ತಕ್ಷಣದ ಆರ್ಥಿಕ ಮತ್ತು ಮಾನಸಿಕ ಬೆಂಬಲ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ತಂಝೀಂ ಉಪಾಧ್ಯಕ್ಷ ಮೊಹ್ದೀನ್ ರುಕ್ನುದ್ದೀನ್, ಆದಂ ಶೇಖ, ಮೊಹ್ಮದ್ ಇಕ್ಬಾಲ್ ಮುಂತಾದವರಿದ್ದರು.