ಅಭಿವೃದ್ಧಿ ಪಥದತ್ತ ಭಾವಸಾರ ಕ್ಷತ್ರಿಯ ಮಹಾಸಭಾ

| Published : Aug 03 2024, 12:45 AM IST

ಸಾರಾಂಶ

ಟ್ರಸ್ಟ್‌ ಬಹುತೇಕ ವಸತಿ ನಿಲಯಗಳು, ದೇವಸ್ಥಾನಗಳನ್ನು ನವೀಕರಣಗೊಳಿಸಿದ್ದು, ಪಾರದರ್ಶಕ ಆಡಳಿತ ನಡೆಯುತ್ತಿದೆ. ಬರುವ ಆದಾಯದಿಂದ ಮಕ್ಕಳ ಸಮಗ್ರ ಶಿಕ್ಷಣಕ್ಕಾಗಿ, ವಿದ್ಯಾರ್ಥಿಗಳ ಶಿಷ್ಯವೇತನ ನೀಡಲು ಬಳಕೆಯಾಗುತ್ತಿದೆ.

ಧಾರವಾಡ:

ಆಲ್‌ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಮಂಡಳಿಯ ಹಾಗೂ ಸಮಾಜದ ಅಭಿವೃದ್ಧಿ ಚಿಂತನಾ ಸಭೆ ಇಲ್ಲಿಯ ಭಾವಸಾರ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜು ಜವಳಕರ ಮಾತನಾಡಿ, 1911ರಲ್ಲಿಯೇ ಸಮಾಜದ ಟ್ರಸ್ಟ್‌ ಆರಂಭವಾಗಿದ್ದು, ಕಷ್ಟದಲ್ಲಿರುವ ಸಮಾಜದ ಜನರ ಅಭಿವೃದ್ಧಿಗಾಗಿ ಪೂರ್ವಜರು ಈ ಟ್ರಸ್ಟ್‌ ಬಳುವಳಿಯಾಗಿ ನೀಡಿದ್ದಾರೆ. ಈ ಟ್ರಸ್ಟ್‌ ಮೂಲಕ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಂಸ್ಥೆ ನಾಂದಿಯಾಗಿದೆ. ಈ ಬಗ್ಗೆ ಕೆಲವು ಮುಖಂಡರು ಪಣತೊಟ್ಟು ನಿಂತಿರುವುದು ಶ್ಲಾಘನೀಯ. ಟ್ರಸ್ಟ್‌ ಬಹುತೇಕ ವಸತಿ ನಿಲಯಗಳು, ದೇವಸ್ಥಾನಗಳನ್ನು ನವೀಕರಣಗೊಳಿಸಿದ್ದು, ಪಾರದರ್ಶಕ ಆಡಳಿತ ನಡೆಯುತ್ತಿದೆ. ಬರುವ ಆದಾಯದಿಂದ ಮಕ್ಕಳ ಸಮಗ್ರ ಶಿಕ್ಷಣಕ್ಕಾಗಿ, ವಿದ್ಯಾರ್ಥಿಗಳ ಶಿಷ್ಯವೇತನ ನೀಡಲು ಬಳಕೆಯಾಗುತ್ತಿದೆ ಎಂದರು.

ಕಲ್ಯಾಣದಾಸ ಗಡಾಳೆ ಹಾಗೂ ಕೆ.ಜಿ. ಟಿಕಾರೆ ಮಾತನಾಡಿ, ಗುಜರಾತ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳನಾಡು ಹೀಗೆ ಭಾರತ ದೇಶಾದ್ಯಂತ ಅಭಿವೃದ್ಧಿ ಹೊಂದಿದ ಸಮಾಜ ಇದೆ. ಇತರ ಸಮಾಜಗಳಂತೆ ಭಾವಸಾರ ಸಮಾಜ ಸಹ ರಾಜಕೀಯ ಸವಲತ್ತು ಹಾಗೂ ಸಮಾಜಕ್ಕೆ ಅನುದಾನ ಪಡೆಯುವಲ್ಲಿ ಸಫಲರಾಗಬೇಕಿದೆ ಎಂದರು.

ಸಮಾಜದ ಹೈ ಪವರ ಕಮಿಟಿಯ ಅಧ್ಯಕ್ಷ ರಮೇಶ ತಾಪನೆ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಅಥವಾ ವೈದ್ಯಕೀಯ ಶಿಕ್ಷಣ ಕೇಂದ್ರ ಸ್ಥಾಪನೆಯಾಗಬೇಕು ಎಂದರು.

ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ಅನುಪಮಾ ಮಗರೆ, ಶ್ರೀನಿವಾಸರಾವ್ ಪಿಸೆ, ಗೋಕುಬ ಮಹೇಂದ್ರಕರ, ಈಶ್ವರರಾವ ಹಂಚಾಟೆ, ಉಮೇಶ ಜೈತಾನೆ, ಅನಿಲ ಮಾಳವದಕರ ಇದ್ದರು. ಸಂತೋಷ ದೇವತಾಳೆ ಕಾರ್ಯಕ್ರಮ ನಿರೂಪಿಸಿದರು.