ಸಾರಾಂಶ
ಕೂಡ್ಲಿಗಿ: ಅಸ್ಪೃಶ್ಯತೆ ಆಚರಣೆಯಿಂದ ರೋಸಿ ಹೋಗಿದ್ದ ಶೋಷಿತ ಸಮುದಾಯದವರು ಮೇಲ್ಜಾತಿಯ ಪೇಶ್ವೆಗಳ ವಿರುದ್ಧ ಹೋರಾಡಿ ವಿಜಯದ ನಗೆ ಬೀರಿದ ಸ್ವಾಭಿಮಾನದ ಸಂಕೇತವೇ ಭೀಮಾ ಕೋರೆಗಾಂವ್ ಯುದ್ಧವಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ತಿಳಿಸಿದರು.ಅವರು ತಾಲೂಕಿನ ಹೊಸಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾರ್ ಜಾತಿಯ ಕೇವಲ 500 ಸೈನಿಕರು ಪೇಶ್ವೆಯ 20 ಸಾವಿರಕ್ಕೂ ಅಧಿಕ ಸೈನಿಕರನ್ನು ಸೋಲಿಸಿದ್ದು ಇತಿಹಾಸದಲ್ಲಿ ದಾಖಲಾಗಿಲ್ಲವಾದರೂ ಭೀಮಾ ನದಿಯ ಬಳಿ ನಡೆದ ಕೋರೆಗಾಂವ್ ಯುದ್ಧದಲ್ಲಿ ಮಡಿದ ದಲಿತರ ಸ್ಮರಣೆಗಾಗಿ ಕೋರೆಗಾಂವ್ ವಿಜಯ ಸ್ತಂಭವನ್ನು ಸ್ಥಾಪಿಸಿರುವುದು ಇತಿಹಾಸವನ್ನು ಸಾರಿ ಹೇಳುತ್ತಿದೆ ಎಂದು ತಿಳಿಸಿದರು.
ಹೊಸಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ ಪ್ರಾರಂಭವಾಗಿ ನಂತರ ಮುಖ್ಯರಸ್ತೆಯ ಮೂಲಕ ಉಜ್ಜಯನಿ ವೃತ್ತ, ರಾಜವೀರ ಮದಕರಿ ನಾಯಕ ವೃತ್ತದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಡಾ.ಬಾಬಾ ಸಾಹೇಬರ ಮೆರವಣಿಗೆ ನಡೆಸಲಾಯಿತು.ನೀಲಿ ಬಾವುಟಗಳನ್ನು ಹಿಡಿದ ಮುಖಂಡರು, ಯುವಕರು, ಬಾಲಕರು ಡಿಜೆ ಹಾಡಿಗೆ ಕುಣಿದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಬಯಲುತುಂಬರಗುದ್ದಿ ದುರುಗೇಶ್, ಕಂದಗಲ್ಲು ಪರಶುರಾಮ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಾನಾಮಡುಗು ದುರುಗಪ್ಪ, ಸಿದ್ದಾಪುರ ಈಶ್ವರಪ್ಪ, ತಾಲೂಕು ಸಂಚಾಲಕ ಎಳನೀರು ಗಂಗಾಧರ, ತಾಲೂಕು ಸಂಘಟನಾ ಸಂಚಾಲಕರಾದ ಲೋಕಿಕೆರೆ ಕರಿಬಸಪ್ಪ, ಕಾನಮಡುಗು ಫಕೀರಪ್ಪ, ಕೂಡ್ಲಿಗಿ ಮೂಗಪ್ಪ, ಎಚ್.ಕೆ. ಕುಂಟೆ ಗ್ರಾಪಂ ಉಪಾಧ್ಯಕ್ಷ ಹುಲಿಕೆರೆ ದುರುಗೇಶ್, ದಸಂಸ ಪದಾಧಿಕಾರಿಗಳಾದ ಕಾನಹೊಸಹಳ್ಳಿ ಟಿ.ಬಸವರಾಜ, ಮಂಜುನಾಥ, ನೀರಗಂಟಿ ಸುರೇಶ್, ತಿಪ್ಪೇಸ್ವಾಮಿ, ಮಾಳೆಹಳ್ಳಿ ಎ.ಕೆ.ಮಂಜಣ್ಣ, ತಿಪ್ಪೇಹಳ್ಳಿ ರುದ್ರಮುನಿ, ಹಿರೇಕುಂಬಳಗುಂಟೆ ಮೈಲಪ್ಪ, ಮಣ್ಣವ್ವರ ಸಿದ್ದಪ್ಪ, ಗ್ರಾಪಂ ಸದಸ್ಯ ಹೊನ್ನೂರುಸ್ವಾಮಿ, ಇಮಡಾಪುರ ನಾಗರಾಜ, ಮುಖಂಡರಾದ ಕುರುಬರ ನಾಗೇಶ್, ಕಲ್ಲಹಳ್ಳಿ ಬಸವರಾಜ, ಬಿ.ಶಿವಣ್ಣ ಇದ್ದರು.
ಕೂಡ್ಲಿಗಿ ತಾಲೂಕಿನ ಹೊಸಹಳ್ಳಿಯಲ್ಲಿ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ದಸಂಸ ವಿಜಯನಗರ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ಮಾತನಾಡಿದರು.