ದಂತ ಕಳೆದುಕೊಂಡು ಆಹಾರ ತಿನ್ನಲಾರದ ಸ್ಥಿತಿಯಲ್ಲಿ ಭೀಮ

| Published : Nov 14 2025, 01:45 AM IST

ಸಾರಾಂಶ

ಜಗಬೋರನಹಳ್ಳಿಯ ಮನೆ ಸಮೀಪ ಭೀಮ ಹಾಗೂ ಕ್ಯಾಪ್ಟನ್ ನಡುವೆ ಗಂಟೆಗೂ ಹೆಚ್ಚು ಕಾಲ ನಡೆದ ರೋಚಕ ಕಾಳಗದಲ್ಲಿ ಬಲಿಷ್ಠ ಕಾಡಾನೆ ಭೀಮ ತನ್ನ ಎಡಕೋರೆಯನ್ನು ಕಳೆದುಕೊಂಡು ಆಹಾರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಭೀಮನಿಗೆ ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಮುಂದಾಗಿತ್ತು. ಘಟನೆ ನಂತರ ಸಕಲೇಶಪುರ ತಾಲೂಕಿನಲ್ಲಿ ಕಾಣಿಸಿಕೊಂಡ ಭೀಮ ಮತ್ತೆ ಕೋಡಗನಹಳ್ಳಿ ಕಾಫಿ ಎಸ್ಟೇಟ್ ದಾಟಿ ಚಿಕ್ಕ ಬಿಕ್ಕೋಡು ಮೂಲಕ ಚೋಕನಹಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದ್ದಾನೆ. ಸೌಮ್ಯ ಸ್ವಭಾವದ ಆನೆ ಭೀಮ ಈ ಭಾಗದಲ್ಲಿ ಯಾರಿಗೂ ತೊಂದರೆ ಕೊಟ್ಟವನಲ್ಲ. ಸದಾ ಒಂಟಿಯಾಗಿ ತಿರುಗುವ ಭೀಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಲಿ ಅಥವಾ ರಸ್ತೆಯಲ್ಲಿ ಹೋಗುವ ವಾಹನ ಸವಾರರಿಗೆ ತೊಂದರೆ ಕೊಟ್ಟಿಲ್ಲ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಜಗಬೋರನಹಳ್ಳಿಯ ಮನೆ ಸಮೀಪ ಭೀಮ ಹಾಗೂ ಕ್ಯಾಪ್ಟನ್ ನಡುವೆ ಗಂಟೆಗೂ ಹೆಚ್ಚು ಕಾಲ ನಡೆದ ರೋಚಕ ಕಾಳಗದಲ್ಲಿ ಬಲಿಷ್ಠ ಕಾಡಾನೆ ಭೀಮ ತನ್ನ ಎಡಕೋರೆಯನ್ನು ಕಳೆದುಕೊಂಡು ಆಹಾರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಭೀಮನಿಗೆ ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಮುಂದಾಗಿತ್ತು. ಘಟನೆ ನಂತರ ಸಕಲೇಶಪುರ ತಾಲೂಕಿನಲ್ಲಿ ಕಾಣಿಸಿಕೊಂಡ ಭೀಮ ಮತ್ತೆ ಕೋಡಗನಹಳ್ಳಿ ಕಾಫಿ ಎಸ್ಟೇಟ್ ದಾಟಿ ಚಿಕ್ಕ ಬಿಕ್ಕೋಡು ಮೂಲಕ ಚೋಕನಹಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದ್ದಾನೆ. ಸೌಮ್ಯ ಸ್ವಭಾವದ ಆನೆ ಭೀಮ ಈ ಭಾಗದಲ್ಲಿ ಯಾರಿಗೂ ತೊಂದರೆ ಕೊಟ್ಟವನಲ್ಲ. ಸದಾ ಒಂಟಿಯಾಗಿ ತಿರುಗುವ ಭೀಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಲಿ ಅಥವಾ ರಸ್ತೆಯಲ್ಲಿ ಹೋಗುವ ವಾಹನ ಸವಾರರಿಗೆ ತೊಂದರೆ ಕೊಟ್ಟಿಲ್ಲ. ಜಗಬೋರನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡ ಭೀಮ ಹಾಗೂ ಕ್ಯಾಪ್ಟನ್ ಕಾದಾಟಕ್ಕೆ ಇಳಿದಿದ್ದು ಗ್ರಾಮದ ಜನ ಹಾಗೂ ಜಾನುವಾರು ಕೂದಲೆಳೆ ಅಂತರದಿಂದ ಪಾರಾಗಿದ್ದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆನೆಗಳು ಇರುವ ಬಗ್ಗೆ ಮಾಹಿತಿ ಇದ್ದರೂ ಕೂಡ ಈಟಿಎಫ್ ಸಿಬ್ಬಂದಿ ಸೂಕ್ತ ಪರಿಕರಗಳಿಲ್ಲದೆ ಸ್ಥಳಕ್ಕೆ ಬಂದು ಆನೆ ಓಡಿಸಲು ಪಟಾಕಿ ಇದ್ದರೆ ಕೊಡಿ ಎಂದು ಗ್ರಾಮಸ್ಥರನ್ನೇ ಕೇಳಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳಿಂದ ಜೀವ ಭಯದಲ್ಲಿ ಬದುಕುತ್ತಿರುವ ಜಗಬೋರನಹಳ್ಳಿ ಗ್ರಾಮಸ್ಥರಿಗೆ ಹಗಲು ರಾತ್ರಿ ಇಲ್ಲದೆ ತಿರುಗುತ್ತಿರುವ ಕಾಡಾನೆಗಳನ್ನು ಹಿಡಿದು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

*ಹೇಳಿಕೆ1ಕಾಡಾನೆಗಳು ಕಳೆದ ಮೂರು ತಿಂಗಳಿನಿಂದ ಗ್ರಾಮದಲ್ಲಿ ವಾಸ್ತವ್ಯ ಹೂಡಿ ರೈತರು ಬೆಳೆದಿರುವ ಬೆಳೆಗಳನ್ನು ನಾಶ ಮಾಡುತ್ತಿವೆ. ಫಸಲಿಗೆ ಬರುತ್ತಿರುವ ತೆಂಗು, ಅಡಿಕೆ ಮರಗಳನ್ನು ಬುಡಸಮೇತ ಕಿತ್ತು ಹಾಕಿವೆ. ಬೆಳೆ ಹಾಳಾಗುವುದರ ಜೊತೆಗೆ ಜೀವಭಯ ಕಾಡುತ್ತಿದೆ. ರಾತ್ರಿ ಮನೆಯಿಂದ ಹೊರಬಾರಲು ಗ್ರಾಮಸ್ಥರು ಭಯಪಡುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತಗಳು ನಡೆದರೂ ಸರ್ಕಾರ ಹಾಗೂ ಅರಣ್ಯ ಇಲಾಖೆ ಮೌನವಾಗಿರುವುದು ರೈತರು ಹಾಗೂ ಕಾರ್ಮಿಕರ ವಿರೋಧಿಗೆ ಸಾಕ್ಷಿಯಾಗಿದೆ.- ಶೇಷೇಗೌಡ, ಜಗಬೋರನಹಳ್ಳಿ ಗ್ರಾಮಸ್ಥ

*ಹೇಳಿಕೆ-2

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕಾಡಾನೆ ಭೀಮ ಮರಳಿ ಬಿಕ್ಕೋಡು ಭಾಗದಲ್ಲಿ ಕಂಡುಬಂದಿದೆ. ಈಗಾಗಲೇ ದಂತವನ್ನು ಕಳೆದುಕೊಂಡು ಆಹಾರ ಇಲ್ಲದೆ ನೋವಿನಲ್ಲಿ ಇರುವ ಭೀಮನ ಚಲನವಲನ ಗಮನಿಸಲು ಇಟಿಎಫ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ದಂತ ಕಳೆದುಕೊಂಡರೂ ಭೀಮ ಆನೆ ಆರೋಗ್ಯವಾಗಿದೆ. - ಯತೀಶ್, ವಲಯ ಅರಣ್ಯಾಧಿಕಾರಿ ಬೇಲೂರು