ತುರುಗನೂರು ನಾಲೆಯ ವ್ಯಾಪ್ತಿಯಲ್ಲಿ 31,500 ಎಕರೆ ಅಚ್ಚುಕಟ್ಟು ಪ್ರದೇಶವಿದ್ದರೂ ಹಲವು ವರ್ಷಗಳಿಂದ ಕಾಲುವೆಗಳ ಸ್ಥಿತಿ ಹದಗೆಟ್ಟಿದ್ದರಿಂದ ಎಲ್ಲ ಪ್ರದೇಶಕ್ಕೂ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ತುರುಗನೂರು ನಾಲೆ ಆಧುನೀಕರಣಕ್ಕೆ ಒಟ್ಟು ₹195 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದರ ಮೂಲಕ 31,500 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಬನ್ನೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅಂಕನಹಳ್ಳಿ ಗ್ರಾಮದ ಜೇನುಗುಡ್ಡ ದೇವಸ್ಥಾನದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರುಗನೂರು ನಾಲೆ ಆಧುನೀಕರಣದ ಅಗತ್ಯತೆ, ಇದಕ್ಕಾಗಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದ ರೀತಿಯನ್ನು ಹಾಗೂ ಈಗಾಗಲೇ ಪೂರ್ಣಗೊಂಡಿರುವ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ವಿವರಿಸಿದರು.

ತುರುಗನೂರು ನಾಲೆಯ ವ್ಯಾಪ್ತಿಯಲ್ಲಿ 31,500 ಎಕರೆ ಅಚ್ಚುಕಟ್ಟು ಪ್ರದೇಶವಿದ್ದರೂ ಹಲವು ವರ್ಷಗಳಿಂದ ಕಾಲುವೆಗಳ ಸ್ಥಿತಿ ಹದಗೆಟ್ಟಿದ್ದರಿಂದ ಎಲ್ಲ ಪ್ರದೇಶಕ್ಕೂ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಸುಮಾರು 15 ಸಾವಿರ ಎಕರೆ ಪ್ರದೇಶಕ್ಕೆ ಮಾತ್ರ ನೀರು ತಲುಪುತ್ತಿತ್ತು. ಇದರಿಂದ ಮೇಲ್ಭಾಗದ ರೈತರಿಗೆ ನೀರು ದೊರೆತರೂ ಕೊನೆಯ ಭಾಗದ ರೈತರು ನೀರಿಗಾಗಿ ಸಂಕಷ್ಟ ಎದುರಿಸುವ ಪರಿಸ್ಥಿತಿ ಇತ್ತು ಎಂದರು.

ರೈತರು ಕೃಷಿಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಪ್ರತಿಯೊಂದು ಎಕರೆಗೂ ನೀರು ತಲುಪುವಂತಾಗಬೇಕು ಎಂಬ ಉದ್ದೇಶದಿಂದ ತುರುಗನೂರು ನಾಲೆ ಹಾಗೂ ಅದರ ವ್ಯಾಪ್ತಿಯ ವಿತರಣಾ ನಾಲೆಗಳನ್ನು ಹಂತ ಹಂತವಾಗಿ ಆಧುನೀಕರಣಗೊಳಿಸುವ ಯೋಜನೆ ರೂಪಿಸಲಾಯಿತು ಎಂದು ಹೇಳಿದರು.

ಉಕ್ಕಲಗೆರೆ ಮತ್ತು ಹಲವಾರು ಶಾಖಾ ನಾಲೆಗಳಿಗೆ ಹಲವು ವರ್ಷಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರಲಿಲ್ಲ. ಈ ಭಾಗದ ರೈತರು ಪ್ರತಿವರ್ಷ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದರು. ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಎರಡನೇ ಹಂತದ ಕಾಮಗಾರಿಯನ್ನು ರೂಪಿಸಿ ₹95 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.ಸಂಸದ ಸುನಿಲ್ ಬೋಸ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯಕ್ಕಿಂತ ವಾಸ್ತವಾಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ತಮ್ಮ ತಂದೆ ಎಚ್.ಸಿ.ಮಹದೇವಪ್ಪ ಅವರು ದೇವರನ್ನು ನಂಬುವುದಿಲ್ಲ ಎಂಬ ರೀತಿಯಲ್ಲಿ ಕೆಲವರು ಮಾತನಾಡುತ್ತಾರೆ. ಆದರೆ ಅವರು ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವ ವ್ಯಕ್ತಿಯಲ್ಲ. ಬೇರೆಯವರ ನಂಬಿಕೆ, ಸಿದ್ಧಾಂತ ಹಾಗೂ ಭಾವನೆಗಳನ್ನು ಗೌರವಿಸುವ ಸ್ವಭಾವ ಅವರದು. ತಮ್ಮ ನಿಲುವುಗಳನ್ನು ಬೇರೆಯವರ ಮೇಲೆ ಹೇರುವ ವ್ಯಕ್ತಿಯೂ ಅಲ್ಲ ಎಂದು ಹೇಳಿದರು.ನರಸೀಪುರ ಕ್ಷೇತ್ರದ ಬನ್ನೂರು ಹೋಬಳಿ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಭಾವನೆ ಕೆಲವರಲ್ಲಿದೆ. ಆದರೆ ಈ ಭಾಗದಲ್ಲಿ ಎಲ್ಲ ಪಕ್ಷಗಳ ಜನರೂ ಇದ್ದಾರೆ. ಜನರ ರಾಜಕೀಯ ನಿಲುವು ಬೇರೆಬೇರೆಯಾಗಿದ್ದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.ಮಾಜಿ ಶಾಸಕಿ ಸುನೀತಾ ವೀರಪ್ಪ ಗೌಡ, ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ, ಮೈಮುಲ್ ಮಾಜಿ ಅಧ್ಯಕ್ಷ ಆರ್. ಚೆಲುವರಾಜ್, ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ವಜ್ರೇಗೌಡ, ಡಾ. ಜ್ಞಾನಪ್ರಕಾಶ್, ತಾ.ಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಸ್ವಾಮಿ , ಗಾಯತ್ರಿ ಸ್ವಾಮಿ ಗೌಡ, ಚಾಮೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಪ್ರಥಮ ದರ್ಜೆ ಗುತ್ತಿಗೆದಾರ ಎ. ಎನ್. ಸ್ವಾಮಿ, ಕೆ.ಎಂ. ಮಧುಕುಮಾರ್, ಯಾಚೇನಹಳ್ಳಿ ಅಶೋಕ್ ಕುಮಾರ್, ಡೈರಿ ಅಧ್ಯಕ್ಷ ಮರಿಗೌಡ, ಯುವ ಘಟಕದ ಅಧ್ಯಕ್ಷ ಲೋಕೇಶ್, ಮುಖಂಡರಾದ ಮೇದಿನಿ ಕುಮಾರ್, ನರಸಿಂಹ ನಾಯಕ, ಉಕ್ಕಲಗೆರೆ ಬಸವಣ್ಣ, ಕೊಡಗಳ್ಳಿ ಧನಂಜಯ, ಆಪ್ತ ಸಹಾಯಕ ಬಸವರಾಜು, ತಹಸೀಲ್ದಾರ್ ಸುರೇಶಾಚಾರ್ , ಜಿಲ್ಲಾ ಪಂಚಾಯತ್ ಎಇಇ ಚರಿತ, ಈ. ಓ.ರಂಗಸ್ವಾಮಿ, ಕಾವೇರಿ ನೀರಾವರಿ ನಿಗಮದ ರಿತೀಶ್, ಬಾಲಕೃಷ್ಣ, ಹಾಜರಿದ್ದರು.