ಸಾರಾಂಶ
ಹೊಸದುರ್ಗ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ತಾಲೂಕಿನ ಬೋವಿ ಸಮಾಜ ಸಂಪೂರ್ಣ ಬೆಂಬಲ ನೀಡುವುದಾಗಿ ತಾಲೂಕು ಬೋವಿ ಸಮಾಜದ ಅಧ್ಯಕ್ಷ ಕೆ.ಟಿ.ಸುಬ್ಬಬೋವಿ ಹೇಳಿದರು.ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಬ್ಲಾಕ್ ಕಾಂಗ್ರೆಸ್ವತಿಯಿಂದ ನಡೆದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೂ, ಬೋವಿ ಸಮಾಜಕ್ಕೂ ತಾಯಿ ಮಕ್ಕಳ ಸಂಬಂಧ. ರಾಜಕೀಯದಲ್ಲಿ ಸಣ್ಣ ಪುಟ್ಟ ವ್ಯಾತ್ಯಾಸಗಳು ಆಗುತ್ತವೆ. ಈ ಹಿಂದೆ ತಪ್ಪಾಗಿರುವುದು ಸಹಜ. ಅದನ್ನು ಸರಿಪಡಿಸಿಕೊಂಡು ಹೋಗಬೇಕು ಎನ್ನುವ ದೃಷ್ಟಿಯಿಂದ ನಾವೆಲ್ಲರೂ ಚರ್ಚೆ ಮಾಡಿದ್ದು, ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಲಿದ್ದೇವೆ ಎಂದರು.ಹಿಂದುಳಿದ, ದಲಿತ, ಶೋಷಿತ ವರ್ಗಗಳ ಪರವಾಗಿರುವ ಕಾಂಗ್ರೆಸ್ಗೆ ನಾವೆಲ್ಲರೂ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದೇವೆ. ತಾಲೂಕಿನಲ್ಲಿ ಬೋವಿ ಸಮಾಜದವರು ವಾಸವಾಗಿರುವ ಪ್ರತಿ ಹಟ್ಟಿಗೂ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಅವರಲ್ಲಿ ತಿಳುವಳಿಕೆ ಮೂಡಿಸುತ್ತೇವೆ. ಕಾಂಗ್ರೆಸ್ ಪಕ್ಷ ಬೋವಿ ಸಮಾಜಕ್ಕೆ ಏನೆಲ್ಲಾ ಕೊಡುಗೆ ನೀಡಿದೆ ಎಂಬುದನ್ನು ಜನರಿಗೆ ತಿಳಿಸಲಿದ್ದೇವೆ. ಕಾಂಗ್ರೆಸ್ ಮಾತ್ರ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಲು ಸಾಧ್ಯ ಎಂದರು. ತಾಲೂಕಿನ ಅನೇಕ ಬೋವಿ ಸಮಾಜದ ಯುವಕರು, ಮುಖಂಡರು ಶಾಸಕ ಬಿ.ಜಿ.ಗೊವಿಂದಪ್ಪ ಅವರಿಗೆ ಸನ್ಮಾನಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರಿಗೆ ಬೆಂಬಲ ಸೂಚಿಸಿದರು.ಈ ವೇಳೆ ಲಂಕೆ ಹನುಮಂತಪ್ಪ, ಶ್ರೀನಿವಾಸ್, ಗಿರಿಯಾಪುರ ರಾಜಪ್ಪ, ಕನ್ನಗೊಂದಿ ಗಿರೀಶ್, ಯಲ್ಲಾಬೋವಿಹಟ್ಟಿ ಮಂಜಪ್ಪ, ಸಿದ್ದಪ್ಪನಹಟ್ಟಿ ಜಗಣ್ಣ ಸೇರಿದಂತೆ ಬೋವಿ ಸಮಾಜದ ನೂರಾರು ಜನರು ಹಾಜರಿದ್ದರು.