ಸಾರಾಂಶ
ಸಿಂದಗಿ : ಸಿಂದಗಿಯ ಸಂಗಮೇಶ್ವರ ಲೇಔಟ್ನಲ್ಲಿ ಬಾಲವನಕ್ಕಾಗಿ ಕಾಯ್ದಿಸಿರುವ ನಿವೇಶನದಲ್ಲಿ 2 ತಿಂಗಳಲ್ಲಿ ಬಾಲವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಪಟ್ಟಣದ ಸಾರಂಗಮಠದಲ್ಲಿ ವಿದ್ಯಾಚೇತನ ಪ್ರಕಾಶನದ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಬಾಲಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸಾಹಿತ್ಯ ಅಧ್ಯಯನದಿಂದ ಮಕ್ಕಳಲ್ಲಿ ಸಂಸ್ಕಾರ ಜಾಗೃತಗೊಳ್ಳುತ್ತದೆ. ನಾನು ಶಾಸಕನಾದ ನಂತರ ನನ್ನ ವಿದ್ಯಾಗುರುಗಳಾದ ಹ.ಮ.ಪೂಜಾರ ಅವರು ನನ್ನನ್ನು ಕರೆದು ಕ್ಷೇತ್ರದ ಜನತೆ ನಿನಗೆ ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ
ಎಂದರು.ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳಲ್ಲಿ ನೈತಿಕ ಮಟ್ಟ ಕುಸಿಯುತ್ತಿದೆ, ಅವರ ಕೈಗೆ ಮೊಬೈಲ್ ಕೊಡಬೇಡಿ ಪುಸ್ತಕ ಕೊಡಿ. ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳು ವಿವಾದಗಳಿಂದ ತುಂಬಿಕೊಂಡಿವೆ. ಪ್ರಮಾದಗಳ ಸರಮಾಲೆಯೇ ಕಾಣುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಹ.ಮ.ಪೂಜಾರ ಅವರು ತಮ್ಮ ಈಳಿವಯಸ್ಸಿನಲ್ಲಿ ತಮ್ಮ ಪಿಂಚಣಿ ಹಣದಲ್ಲಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಮಕ್ಕಳಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರನ್ನು ಗುರುತಿಸಿ ಅವರಿಗೆ ನಗದು ಹಣದೊಂದಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಪರಂಪರೆ ಉತ್ತಮ ಪರಂಪರೆಯಾಗಿದೆ. ಅವರ ಅಶೆಯಂತೆ ಅವರು ಕಟ್ಟಿದ ಮಕ್ಕಳ ಬಳಗದ ಸುವರ್ಣಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಿಳಿಸಿದರು.
ಮಕ್ಕಳ ಸಾಹಿತಿ ಹ.ಮ.ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೭೬ ರಲ್ಲಿ ತಾವು ಸ್ಥಾಪಿಸಿರುವ ಮಕ್ಕಳ ಬಳಗ ಸುವರ್ಣ ಮಹೋತ್ಸವ ಆಚರಣೆ ಸಿದ್ಧತೆಯಲ್ಲಿದೆ ಎಂದು ತಿಳಿಸಿದರು. ಮಕ್ಕಳ ಸಾಹಿತಿ ಎಸ್.ಎಸ್.ಸಾತಿಹಾಳ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಶಾಂತೂ ಹಿರೇಮಠ ಮಾತನಾಡಿದರು. ಮಕ್ಕಳ ಸಾಹಿತಿಗಳಾದ ಬೆಂಗಳೂರಿನ ಲಲಿತಾ ಹೊಸಪ್ಯಾಟಿ, ವಿಜಯಪುರದ ಜಂಬುನಾಥ ಕಂಚ್ಯಾಣಿ, ಬೆಳಗಾವಿಯ ಎಂ.ಎಂ.ಸಂಗಣ್ಣವರ ಅವರಿಗೆ ರಾಜ್ಯಮಟ್ಟದ ಬಾಲಸಾಹಿತ್ಯ ಪ್ರಶಸ್ತಿ, ₹5 ಸಾವಿರ ನಗದು ಮತ್ತು ಗದಗ ನಗರದ ಚಿಗುರು ಸಾಹಿತಿ ಪ್ರಣತಿ ಗಡಾದ ಅವರಿಗೆ ಚಿಗುರು ಸಾಹಿತ್ಯ ಪುರಸ್ಕಾರ ಪ್ರಶಸ್ತಿ, ₹೨ ಸಾವಿರ ನಗದು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರು ಮಾತನಾಡಿದರು. ಸಮಾರಂಭದಲ್ಲಿ ರಾಜಶೇಖರ ಪೂಜಾರ, ವಿಜಯಕುಮಾರ ಪೂಜಾರ, ರಮೇಶ ಪೂಜಾರ, ಡಾ.ಎಂ.ಎಂ. ಪಡಶೆಟ್ಟಿ, ಎಂ.ಎಸ್. ಹೈಯಾಳಕರ, ಎಸ್.ಆರ್.ಗವಸಾನಿ, ವಿ.ಸಿ.ನಾಗಠಾಣ, ಬಿ.ಎಂ.ಪಾಟೀಲ, ಎ.ಆರ್.ಹೆಗ್ಗಣದೊಡ್ಡಿ, ಎಸ್.ಕೆ.ಗುಗ್ಗರಿ, ರಾಚು ಕೊಪ್ಪಾ, ಸುನಂದಾ ಯಂಪೂರೆ, ಎಂ.ಐ.ಗಣಾಚಾರಿ, ಬಿ.ಎನ್.ಬಿರದಾರ, ವಿ.ಆರ್.ಪಾಟೀಲ, ಶ್ರೀಶೈಲ ಹೂಗಾರ, ಶಂಕರ ಹೂಗಾರ, ಶ್ರೀಮಠದ ವಿದ್ಯಾರ್ಥಿಗಳು ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಸೈನಾಜಬಿ ಮಸಳಿ ಪ್ರಾರ್ಥಿಸಿದರು. ಎಸ್.ಎಸ್.ಸಾತಿಹಾಳ, ಸತೀಶ ಕುಲಕರ್ಣಿ ನಿರೂಪಿಸಿದರು. ಶಿವಕುಮಾರ ಶಿವಸಿಂಪಿಗೇರ ವಂದಿಸಿದರು
.ಕ್ಷೇತ್ರದ ಅಭಿವೃದ್ಧಿ ಮಾಡುವ ಜೊತೆಗೆ ಮಕ್ಕಳ ಅಭಿವೃದ್ಧಿಗಾಗಿ ಸಿಂದಗಿ ಪಟ್ಟಣದಲ್ಲಿ ಬಾಲಭವನ, ಬಾಲವನ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅವರ ಆಶೆ ಈಡೇರಿಸುತ್ತೇನೆ. ಅವರು ವರ್ಷದಲ್ಲಿ 4 ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಕಾರ್ಯವನ್ನು ಮಾಡುತ್ತಿರುವ ಮೂಲಕ ಈ ಭಾಗದಲ್ಲಿ ಮಾಡುತ್ತಿದ್ದಾರೆ.
-ಅಶೋಕ ಮನಗೂಳಿ, ಶಾಸಕರು.