ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದ ಬಾಲಕಿಯರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕನ್ನಡಪ್ರಭ ವಾರ್ತೆ ಕುಮಟಾ
ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದ ಬಾಲಕಿಯರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಹಾಗೆಯೇ ದಾಂಡೇಲಿಯಲ್ಲಿ ಆಯೋಜಿಸಿದ್ದ ಪಿಯು ಕಾಲೇಜುಗಳ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಪ್ರಥಮ ಪಿಯುಸಿ ವಿಭಾಗದ ಕನ್ನಡ ಚರ್ಚಾಸ್ಪರ್ಧೆಯಲ್ಲಿ ಸ್ವಸ್ತಿ ಎಂ. ಭಟ್ಟ ಪ್ರಥಮ, ಜನಪದ ಗೀತೆಯಲ್ಲಿ ಸಿಂಚನ ಆಚಾರಿ ಪ್ರಥಮ ಸ್ಥಾನದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಏಕಪಾತ್ರಾಭಿನಯದಲ್ಲಿ ರಮ್ಯಾ ದೇವಾಡಿಗ ತೃತೀಯ, ಜನಪದ ನೃತ್ಯದಲ್ಲಿ ಸಿಂಧೂರ ಪೂಜಾರಿ ತೃತೀಯ ಸ್ಥಾನಗಳಿಸಿದ್ದಾರೆ ಎಂದು ಕಾಲೇಜಿನ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ, ಪ್ರಾಚಾರ್ಯ ನಾಗರಾಜ ಹೆಗಡೆ, ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಕ್ರೀಡಾ ಸಂಚಾಲಕ ಗಣಪತಿ ಭಟ್, ಸಾಂಸ್ಕೃತಿಕ ಸಂಚಾಲಕಿ ಪೂಜಾ ಭಟ್ಟ ಸಂತಸ ವ್ಯಕ್ತಪಡಿಸಿದ್ದಾರೆ.ನೆಲ್ಲಿಕೇರಿ ಮಹಾಸತಿ ದೇವಿಯ ವರ್ಧಂತಿ ಸಂಪನ್ನ:
ಕುಮಟಾದ ನೆಲ್ಲಿಕೇರಿ ಶ್ರೀಮಹಾಸತಿದೇವಿ ಮಂದಿರದಲ್ಲಿ ೪೭ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಪ್ರಯುಕ್ತ ಎರಡು ದಿನ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು. ನ. ೨೪ರಂದು ಗಣಪತಿ ಪೂಜೆಯೊಂದಿಗೆ ಆರಂಭಗೊಂಡ ವರ್ಧಂತಿ ಕಾರ್ಯಕ್ರಮದಲ್ಲಿ ಗಣಪತಿ ಹವನ, ನವಗ್ರಹ, ಮೃತ್ಯುಂಜಯ, ಪ್ರಾಯಶ್ಚಿತ್ತ, ಶಾಂತಿ, ಶಕ್ತಿ, ತತ್ವ, ಕಲಾ, ಪ್ರಾಣಪ್ರತಿಷ್ಠಾದಿ ಹವನಗಳು, ದುರ್ಗಾ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಿತು.ನ.೨೫ರಂದು ಸಪ್ತಶತಿ ಪಾರಾಯಣ, ನವಚಂಡೀ ಹವನ, ದುರ್ಗಾಪೂಜೆ, ಕುಂಭಾಭಿಷೇಕ ಬಲಿ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಇದೇ ಸಂದರ್ಭ ಮಹಾಸತಿ ಸಭಾಭವನಕ್ಕೆ ನೂತನವಾಗಿ ಅಳವಡಿಸಲಾದ ಲಿಫ್ಟ್ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಲಾಯಿತು.ಕಾರ್ಯಕ್ರಮದುದ್ದಕ್ಕೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಾಸತಿ ದೇವಿಗೆ ಶಕ್ತಯಾನುಸಾರ ವಿವಿಧ ಸೇವೆ ಸಮರ್ಪಿಸಿದರು. ಮಹಿಳೆಯರು, ಮುತ್ತೈದೆಯರು ಬಾಗಿನ ಸಮರ್ಪಿಸಿದರು. ಸರ್ವಾಲಂಕಾರದಲ್ಲಿ ಶೋಭಿತಳಾದ ಮಹಾಸತಿಯ ಮಹಾಮಂಗಳಾರತಿಯನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಕಣ್ತುಂಬಿಕೊಂಡರು. ಸಂಜೆ ಭಜನಾದಿ ಕಾರ್ಯಕ್ರಮ ಜರುಗಿತು.