ಸಾರಾಂಶ
ಅಪಾರ ಸಂಖ್ಯೆ ಓದುಗರನ್ನು ಹಿಡಿದಿಟ್ಟಿದ್ದ ಶ್ರೇಯ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಸಲ್ಲಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.
ಕನ್ನಡಪ್ರಭವಾರ್ತೆ ಪಾವಗಡ
ಅಪಾರ ಸಂಖ್ಯೆ ಓದುಗರನ್ನು ಹಿಡಿದಿಟ್ಟಿದ್ದ ಶ್ರೇಯ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಸಲ್ಲಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಬುಧವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಎಸ್.ಎಲ್.ಭೈರಪ್ಪ ರವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ಯಾವುದೇ ವಿಷಯವನ್ನು ನಿಖರವಾಗಿ ಬರೆಯುತ್ತಿದ್ದ ಎಸ್.ಎಲ್.ಭೈರಪ್ಪರವರ ಪ್ರತಿಯೊಂದು ಬರವಣಿಗೆಯು ಅನುಭವ ಜನ್ಯವಾಗಿವೆ. ಬರೆಯುವ ಮುಂಚೆ ಆ ವಿಷಯದ ಆಳ ಮತ್ತು ಅಗಲವನ್ನು ಪರಿಶೀಲಿಸಿ ಸಾಧ್ಯವಾದಷ್ಟು ಹತ್ತಿರದ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದರು. ಜತಗೆ ಅಧ್ಬುತವಾದ ಪದ ಪುಂಜಗಳೊಂದಿಗೆ ವಿಷಯವನ್ನು ಕಟ್ಟುಕೊಡುತ್ತಿದ್ದರು. ಆದಾಗಿಯೇ ಓದುಗರು ಅವರ ಕೃತಿಗಳಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಇಂತಹ ಸಾಹಿತಿ ಕನ್ನಡ ನಾಡಿಗೆ ಕೀರ್ತಿ ಕಳಶಗಳಲ್ಲಿ ಒಬ್ಬರಾಗಿ ನಿಲ್ಲುತ್ತಾರೆಂದು ಬಣ್ಣಿಸಿದರು. ನಿವೃತ್ತ ಪ್ರಾಂಶುಪಾಲರಾದ ಬಸಲಿಂಗಪ್ಪ ಮಾತನಾಡಿ ಎಸ್.ಎಲ್.ಬೈರಪ್ಪ ರವರ ಕೃತಿಗಳನ್ನು ಎಷ್ಟು ಬಾರಿ ಓದಿದರು ಪ್ರತಿಬಾರಿಯೂ ಹೊಸತನ ಮತ್ತು ಹೊಸ ಅನುಭವವನ್ನು ನೀಡುತ್ತವೆ. ಅವರು ಕೃತಿಗಳಲ್ಲಿ ಚಿತ್ರಿಸಿರುವ ಪ್ರತಿಯೊಂದು ಪಾತ್ರವೂ ಜೀವಂತಿಕೆ ತುಂಬಿಕೊಂಡು ಕಣ್ಮುಂದೆ ಬಂದು ಹೋಗುತ್ತದೆ. ಅಂತಹ ಅಧ್ಬುತ ಸಾಹಿತಿಗಳು ಅಗಲಿರುವುದು ನಾಡಿಗೆ, ಭಾಷೆಗೆ ಆದ ನಷ್ಟ ಎಂದರು.ಕಸಾಪ ನಿರ್ದೇಶಕರಾದ ಎಂ.ಎಸ್ ವಿಶ್ವನಾಥ ಮಾತನಾಡಿ, ಕರ್ನಾಟಕದಲ್ಲಿ ಅತಿ ಹೆಚ್ಚು ಮರು ಮುದ್ರಣಗಳನ್ನು ಕಂಡುಕೊಳ್ಳುತ್ತಿದ್ದ ಕೃತಿಗಳು ಯಾವುದಾದರೂ ಇದ್ದರೆ ಅವು ಎಸ್.ಎಲ್.ಭೈರಪ್ಪ ರವರ ಕೃತಿಗಳಾಗಿವೆ. ವಿವಿಧ ಭಾಷೆಗಳಿಗೆ ಹೆಚ್ಚು ತರ್ಜುಮೆಗೊಂಡ ಕೃತಿಗಳು ಸಹ ಆಗಿವೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಲ್.ಭೈರಪ್ಪರವರಿಗೆ ಶ್ರದ್ಧಾಂಜಲಿ ಸಮರ್ಪಿಸಿದ ನಂತರ ಕಸಾಪ ತಾಲೂಕು ಘಟಕದ ಸಭೆ ಮುಂದುವರೆಯಿತು. ಸಭೆಯಲ್ಲಿ ನವೆಂಬರ್ ಕಾರ್ಯಕ್ರಮಗಳು, ಹೋಬಳಿ ಮತ್ತು ತಾಲೂಕು ಸಮ್ಮೇಳನಗಳು, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಬದಲಾವಣೆ, ದತ್ತಿ ಕಾರ್ಯಕ್ರಮಗಳು ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಶ್ರದ್ದಾಂಜಲಿ ಸಭೆಯಲ್ಲಿ ಘಟಕದ ಕಾರ್ಯದರ್ಶಿ ಐ.ಎ.ನಾರಾಯಣಪ್ಪ ವೈ.ಎನ್.ಹೊಸಕೋಟೆ ಹೋಬಳಿ ಘಟಕದ ಅಧ್ಯಕ್ಷ ಹೊ.ಮ.ನಾಗರಾಜು, ಪದಾಧಿಕಾರಿಗಳಾದ ಜಿ.ಪಿ.ಪ್ರಮೋದ್ ಕುಮಾರ್, ರಾಮನಾಥ, ಅಂತರಗಂಗೆ ಶಂಕರಪ್ಪ, ನಾಗೇಂದ್ರಪ್ಪ ಇತರರು ಭಾಗವಹಿಸಿದ್ದರು.