ಸಾರಾಂಶ
ವಿಜಯಪುರ: ವಿಜಯಪುರ ಜಿಲ್ಲಾ ಗಾಣಿಗ ಸಂಘ, ಇಂಡಿ ತಾಲೂಕು ಘಟಕ ಫೆ.24 ರಂದು ಜಂಟಿಯಾಗಿ ಇಂಡಿ ಪಟ್ಟಣದ ತಾಲೂಕು ಕ್ರೀಡಾಂಗಣದ ಬಳಿಯ ಗಾಣಿಗ ಸಮಾಜದ ಜಾಗದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಸಭಾಭವನದ ಭೂಮಿ ಪೂಜೆ ಮತ್ತು ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದರು.
ನಗರದ ವನಶ್ರೀ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ಪಟ್ಟಣದಲ್ಲಿ ಗಾಣಿಗ ಸಮಾಜದ 2 ಎಕರೆ ಜಾಗದಲ್ಲಿ ಸುಸಜ್ಜಿತ ಸಭಾಭವನ ನಿರ್ಮಿಸಲು ಶಾಸಕ ಯಶವಂತರಾಯಗೌಡ ಪಾಟೀಲ 5 ಕೋಟಿ ಅನುದಾನ ನೀಡಿದ್ದಾರೆ. ಈಗಾಗಲೇ 2 ಕೋಟಿ ಹಣ ಮಂಜೂರು ಮಾಡಿದ್ದು, ಸಮಾಜಕ್ಕೆ 2ಎ ಮೀಸಲಾತಿ ಇದ್ದರೂ ಸಮಾಜದ ಏಳ್ಗೆಗಾಗಿ ಸೂಕ್ತ ಅನುದಾನ, ಪ್ರಾತಿನಿಧ್ಯ ಸಿಕ್ಕಿಲ್ಲ. ಸಮಾಜದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಇಲ್ಲ, ರಾಜ್ಯದಲ್ಲಿ 60 ಲಕ್ಷದಷ್ಟು ಜನಸಂಖ್ಯೆ ಇದ್ದರೂ ತಾಲೂಕಿನ ಎಲ್ಲಿಯೂ ಸಮುದಾಯ ಭವನಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಮಾವೇಶಕ್ಕೆ 15 ರಿಂದ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ನೂತನ ಸಭಾಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್, ಜವಳಿ, ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಸಮಾವೇಶ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಗಾಣಿಗ ಗುರುಪೀಠದ ಡಾ.ಜಯಬಸವ ಕುಮಾರ ಜಗದ್ಗುರುಗಳು, ವನಶ್ರೀಮಠದ ಅಧ್ಯಕ್ಷ ಸಿದ್ದಮುತ್ಯಾ, ತಿಂಥಣಿಯ ಅಡವಿಲಿಂಗ ಮಹಾರಾಜರು, ಬೀದರಿನ ಸಿದ್ದಾರೂಢ ಆಶ್ರಮದ ಶಂಕರಾನಂದ ಮಹಾಸ್ವಾಮಿಗಳು, ಹಿರೇರೂಗಿ ಸುಗಲಮ್ಮ ತಾಯಿ ಸಾನಿಧ್ಯ ವಹಿಸಲಿದ್ದಾರೆ. ಅಲ್ಲದೇ, ಸಂಸದ ರಮೇಶ ಜಿಗಜಿಣಗಿ, ಭೂಸೇನಾ ನಿಗಮದ ಅಧ್ಯಕ್ಷ, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ, ಚಿತ್ರದುರ್ಗ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಗಾಣಿಗ ಸಮಾಜದ ರಾಜಕೀಯ ನಾಯಕರು, ಸಮಾಜದ ಪ್ರಮುಖರು ಭಾಗವಹಿಸುವುದಾಗಿ ತಿಳಿಸಿದರು.ಇದೇ ವೇಳೆ ಸಮಾವೇಷದ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಜಿಲ್ಲಾ ಗಾಣಿಗ ಸಂಘದ ಉಪಾಧ್ಯಕ್ಷರಾದ ಶರಣಪ್ಪ ಶ್ಯಾಪೇಟಿ, ಸಿ.ಎಸ್.ಬಿರಾದಾರ, ಅಮರೇಶ ಹೊಸಮನಿ, ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ, ಮಾಜಿ ಜಿಲ್ಲಾಧ್ಯಕ್ಷರಾದ ಎಸ್.ಎಸ್.ಶಿರಾಡೋಣ, ಎನ್.ಎಸ್.ಲೋಣಿ, ಕೋಶಾಧ್ಯಕ್ಷ ಬಿ.ಕೆ.ಚೌಧರಿ, ಶ್ರೀಶೈಲ ಹಳ್ಳಿ, ಸಚಿನ್ ಅಡಕಿ, ಮದನ್ ಲೋಣಿ ಇದ್ದರು.