ದೊಡ್ಡ ಜಾತ್ರೆಯ ಕೇಂದ್ರಬಿಂದುವಾದ ಬಸವ ಸಮೇತ ಗುರುಗಳನ್ನು ಆಹ್ವಾನಿಸುವ ಕಾರ್ಯ ನಡೆದು ಸಂಜೆ ಗಂಗಾಪೂಜೆ, ನವಗ್ರಹ ಪೂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ವೇಮಗಲ್‌ನಲ್ಲಿ ಕುರುಬ ಸಮುದಾಯದ ಆರಾಧ್ಯ ದೈವವಾದ ದೊಡ್ಡ ದ್ಯಾವರ ಜಾತ್ರೆ ಭಕ್ತಿಭಾವದಿಂದ ಹಾಗೂ ವೈಭವದಿಂದ ನೆರವೇರಿತು.ಶ್ರೀ ಬೀರೇಶ್ವರ, ಶ್ರೀ ಸಿದ್ದೇದೇವರು, ಶ್ರೀ ಭತ್ತೇಶ್ವರ, ಶ್ರೀ ಬೆಳ್ಳೂರು ಬೇರೆಶ್ವರ, ಶ್ರೀ ಬಿಡದೀಶ್ವರಸ್ವಾಮಿ ದೇವಾಲಯದಲ್ಲಿ ಮನೆ ದೇವರ ದೊಡ್ಡಜಾತ್ರೆ ಭಾನುವಾರ ಆರಂಭಗೊಂಡಿತ್ತು. ದೊಡ್ಡ ಜಾತ್ರೆಯ ಕೇಂದ್ರಬಿಂದುವಾದ ಬಸವ ಸಮೇತ ಗುರುಗಳನ್ನು ಆಹ್ವಾನಿಸುವ ಕಾರ್ಯ ನಡೆದು ಸಂಜೆ ಗಂಗಾಪೂಜೆ, ನವಗ್ರಹ ಪೂಜೆ ನೆರವೇರಿತು.ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ದೇವರು, ಸಂಸ್ಕೃತಿ, ಧರ್ಮ, ಸಂಪ್ರದಾಯ ಆಚಾರ-ವಿಚಾರಗಳನ್ನು ಮರೆಯದೇ ಮುಂದಿನ ಪೀಳಿಗೆಗೆ ಇದನ್ನು ಮುಂದುವರೆಸುವಂತೆ ಈ ರೀತಿಯ ದೊಡ್ಡ ಜಾತ್ರಾ ಮಹೋತ್ಸವ ಮಾಡುತ್ತಿರುವುದು ಬಹಳ ನೆಮ್ಮದಿ, ಸಂತೋಷ ಜೊತೆಗೆ ಉತ್ತಮ ಸಂದೇಶ ಸಾರುತ್ತಿರುವುದು ಕಾಣುತ್ತಿದೆ ಎಂದರು. ದೊಡ್ಡ ದ್ಯಾವರ ಜಾತ್ರೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ಇಂತಹ ಜಾತ್ರೆಗಳು ಸಮಾಜದಲ್ಲಿ ಏಕತೆ ಹಾಗೂ ಸಹಕಾರವನ್ನು ಹೆಚ್ಚಿಸುತ್ತವೆ. ಹಾಗಾಗಿ ನಮ್ಮ ಸಿದ್ದಾಂತ, ಪದ್ದತಿಗಳನ್ನು ಮರೆಯಬಾರದು ಎಂದರು.ಶ್ರೀ ಬೀರೇಶ್ವರ ಸ್ವಾಮಿ ದೇವಾಲಯ ಟ್ರಸ್ಟ್ ಗೆ ಕಾರ್ಯಕ್ರಮ ವೇದಿಕೆ ನಿರ್ಮಿಸಿರುವ ಸರ್ಕಾರಿ ಜಾಗವನ್ನು ಮಂಜೂರು ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಯುವಪೀಳಿಗೆ ಕೂಡ ಈ ಸಂಪ್ರದಾಯಗಳಲ್ಲಿ ಭಾಗವಹಿಸುವುದು ಸಂತೋಷಕರ ವಿಷಯ ಎಂದು ಹೇಳಿದರು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ದೊಡ್ಡ ದ್ಯಾವರ ಜಾತ್ರೆ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತವಾಗಿದೆ. ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಇಂತಹ ಜಾತ್ರೆಗಳು ಮಹತ್ವದ ಪಾತ್ರವಹಿಸುತ್ತವೆ. ಇಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಭಕ್ತಿ, ಏಕತೆ ಮತ್ತು ಸಹೋದರತ್ವವನ್ನು ಬಲಪಡಿಸುತ್ತವೆ. ಜನರು ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷಕರ ಸಂಗತಿ” ಎಂದು ಹೇಳಿದರು. ಎಂ.ಎಲ್.ಸಿ ಅನಿಲ್ ಕುಮಾರ್ ಮಾತನಾಡಿ, ಕುರುಬ ಸಮುದಾಯವು ತನ್ನ ಪರಿಶ್ರಮ, ಸಂಸ್ಕೃತಿ ಮತ್ತು ಪರಂಪರೆಯ ಮೂಲಕ ನಾಡಿಗೆ ಬಹಳಷ್ಟು ಹೆಸರು ತಂದಿದೆ. ಕೃಷಿ, ಪಶುಪಾಲನೆ ಹಾಗೂ ಜನಪದ ಕಲೆಯ ಮೂಲಕ ನಗರ, ಪಟ್ಟಣ, ಜಿಲ್ಲೆ, ರಾಜ್ಯದ ಗೌರವವನ್ನು ಹೆಚ್ಚಿಸಿರುವ ಈ ಸಮುದಾಯವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.ಜಾತ್ರೆಯ ಅಂಗವಾಗಿ ಸೋಮವಾರ ಬೆಳಗ್ಗೆ ನಾಗದೇವತೆಗಳಿಗೆ ತನಿ ಎರೆಯುವ ಕಾರ್ಯ, ಮನೆತನದ ಹಿರಿಯರಿಗೆ ಬಟ್ಟೆ ಇಡುವುದು, ವೀರಗಾರರ ಪೂಜೆ, ದೇವರಿಗೆ ರುದ್ರಾಭಿಷೇಕ ನಡೆಯಿತು.

ಅನಂತರ ದೇವಾಲಯದಿಂದ ದೇವರನ್ನು ಮೆರವಣಿಗೆಯಲ್ಲಿ ಸಾಗಿ ಕುರುಬರಹಳ್ಳಿ ಗ್ರಾಮದ ಊರಿನಾಚೆಗೆ ಇರುವ ಮೈದಾನದಲ್ಲಿ ಸಿದ್ದವಾಗಿದ್ದ ವೇದಿಕೆ ಮೇಲೆ ಹೊಳೆಯಾಡುವ ಪೂಜಾ ವಿಧಿ ವಿಧಾನಗಳು ನಡೆಸಲಾಯಿತು. ಪಪಂ ಅಧ್ಯಕ್ಷೆ ಅನುಷಾ ಮುನಿರಾಜು, ತಹಸೀಲ್ದಾರ್ ನಯನ, ಪ್ರಾಧಿಕಾರ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳಿಗೌಡ, ಗ್ಯಾರಂಟಿ ತಾಲ್ಲೂಕು ಅಧ್ಯಕ್ಷ ಮುನಿಯಪ್ಪ, ಪಪಂ ಮುಖ್ಯಾಧಿಕಾರಿ ವೆಂಕಟೇಶ್, ಇನ್ಸ್ ಪೆಕ್ಟರ್ ಬಿ.ಪಿ ಮಂಜು, ಕುರುಬರಹಳ್ಳಿ ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ದೀಪಾ ವಿನಯ್, ಶಿಲ್ಪ ಶಂಕರ್, ಶಶಿಕಲಾ ನಾಗೇಶ್, ಸುಜಾತ ಮುನಿರಾಜು, ರವಿ, ರಾಮು, ತಾಸೂಪ್ ಖಾನ್, ಸನಾವುಲ್ಲ, ಪ್ರಾಧಿಕಾರ ಸದಸ್ಯ ಬಿ ನಾಗರಾಜ್, ಶಿವಕುಮಾರ್, ರಾಜಸ್ವ ನೀರಿಕ್ಷಕ ಅಜಯ್ ಇದ್ದರು.

ಬಾಕ್ಸ್ ಗ್ರಾಮಸ್ಥರು ಮನವಿ: ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದ ಟ್ರಸ್ಟ್ ಮಂಡಳಿ ಯಜಮಾನರಾದ ಮೂರ್ತಿ ರವರು, ಯುವ ಮುಖಂಡ ಪ್ರಕಾಶ್ ಹಾಗೂ ಇನ್ನಿತರೆ ಸದಸ್ಯರು, ಈಗಾಗಲೇ ವೇಮಗಲ್ ಪಟ್ಟಣದ ಬಹಳ ಅಭಿವೃದ್ಧಿಯಾಗುತ್ತಿದ್ದೆ, ಹಾಗೇಯೇ ದೇವರ ಕಾರ್ಯಕ್ರಮಗಳು ಹಾಗೂ ಇನ್ನಿತರೆ ಕುಲಭಾಂದವರ ಪೂಜಾ ಕಾರ್ಯಕ್ರಮಗಳನ್ನು ಮಾಡಲು ಬಹಳ ಕಷ್ಟವಾಗುತ್ತಿದೆ ಹಾಗಾಗಿ ಈ ವೇದಿಕೆಯ ೩ ಎಕರೆ ಸರ್ಕಾರಿ ಜಾಗವಾಗವನ್ನು ದೇವಾಲಯದ ಟ್ರಸ್ಟ್ ಹೆಸರಿಗೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಶಾಸಕ ಕೊತ್ತೂರು ಮಂಜುನಾಥ್ ರವರಿಗೆ ಮನವಿ ನೀಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ೩ ಎಕರೆ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು.