ಸಾರಾಂಶ
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಭ್ರಷ್ಟಚಾರದ ವಿರುದ್ಧ ಜನರಿಗೆ ಅರಿವು ಮೂಡಿಸಲು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ವತಿಯಿಂದ ಮೂರು ಸಾವಿರ ಕೀಮಿಗಳ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಿರೀಶ್ ಹೇಳಿದರು
ಚಾಮರಾಜನಗರ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಭ್ರಷ್ಟಚಾರದ ವಿರುದ್ಧ ಜನರಿಗೆ ಅರಿವು ಮೂಡಿಸಲು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ವತಿಯಿಂದ ಮೂರು ಸಾವಿರ ಕೀಮಿಗಳ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಿರೀಶ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತೀವ್ರತೆರನಾದ ಭ್ರಷ್ಟಚಾರ ನಡೆಸಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕೆಆರ್ಎಸ್ ಈ ಬೃಹತ್ ಬೈಕ್ ಜಾಥಾ ಹಮ್ಮಿಕೊಂಡಿದ್ದೇವೆ ಎಂದರು.
ಫೆ.೧೯ ರಿಂದ ಮಾರ್ಚ್ ೨ರವರೆಗೆ ಸುಮಾರು ೩೦೦೦ ಕೀಮಿ ನಡೆಯುವ ಈ ಬೈಕ್ ಜಾಥಾಕ್ಕೆ ಫೆ.೧೯ರಂದು ದೇವನಹಳ್ಳಿಯ ಬಳಿ ನಮ್ಮ ಪಕ್ಷದ ರಾಜ್ಯ ಮುಖಂಡರು ಚಾಲನೆ ನೀಡಲಿದ್ದಾರೆ. ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಫೆ. ೨೦ರ ಸಂಜೆ ೫.೩೦ಕ್ಕೆ ಜಾಥಾ ಬರಲಿದ್ದು, ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಬಹಿರಂಗ ಭಾಷಣ ನಡೆಯಲಿದೆ, ಜಾಥಾದಲ್ಲಿ ಕನಿಷ್ಠ ೧೦೦ ಬೈಕ್ಗಳು ಭಾಗವಹಿಸಲಿವೆ, ಬೆಂಗಳೂರು ನಗರ ಬಿಟ್ಟು ಉಳಿದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಜಾಥಾ ತೆರಳಲಿದ್ದು, ಸಾರ್ವಜನಿಕರಿಗೆ ಈ ರಾಷ್ಟ್ರೀಯ ಪಕ್ಷಗಳ ಭ್ರಷ್ಟಚಾರದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ಪಕ್ಷದ ಸದಸ್ಯತ್ವ ನೋಂದಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು. ಈ ವೇಳೆ ಸೈಯದ್ ಸನ್ನಿ, ಮುಜಾಮಿನ್, ಮಹೇಶ್, ಮುಬಾರಕ್, ತೌಸಿಲ್ ಇದ್ದರು.