ಮಾಗಡಿ: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೂಳೆತ್ತುವಂತೆ ಆಗ್ರಹಿಸಿ ರೈತ ಸಂಘದಿಂದ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಹೇಳಿದರು
ಮಾಗಡಿ: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೂಳೆತ್ತುವಂತೆ ಆಗ್ರಹಿಸಿ ರೈತ ಸಂಘದಿಂದ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳ ಅಂತ್ಯದಲ್ಲಿ ಬೈಕ್ ಜಾಥಾ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳು ತೆಗೆಸುವಂತೆ ಹೋರಾಟ ಮಾಡಲಾಗುವುದು, ತಾಲೂಕಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಸುಸಜ್ಜಿತ ರೈತ ಭವನವನ್ನು ನಿರ್ಮಿಸಿಕೊಡಬೇಕೆಂದು ಶಾಸಕರನ್ನು ಆಗ್ರಹಿಸಿದ್ದೇವೆ. ಹೊಸಪೇಟೆ ಸರ್ಕಲ್ ಬಳಿ ರೈತ ಭವನ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಹೇಳಿದರು.ಶಾಸಕ ಬಾಲಕೃಷ್ಣ ಕರೆ ಮಾಡಿ, ನಾನು ಕೂಡ 25 ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದು ತಾಲೂಕಿನ ಬಗ್ಗೆ ನನಗೂ ಅರಿವಿದೆ. ಪೈಪ್ ಲೈನ್ ಕಾಮಗಾರಿಗೆ ತೊಂದರೆ ನೀಡಿದರೆ ತಾಲೂಕಿಗೆ ಅನನುಕೂಲವಾಗುತ್ತದೆ. ನಾನು ಕೂಡ ಷರತ್ತು ಹಾಕಿ ನಮಗೂ ನೀರು ಕೊಡಬೇಕೆಂದು ಸೂಚನೆ ಕೊಟ್ಟ ನಂತರವೇ ಪೈಪ್ ಲೈನ್ ಕಾಮಗಾರಿ ನಡೆಸಲು ಹೇಳಿದ್ದೇನೆ. ನಾಲ್ಕು ತಿಂಗಳ ಅವಕಾಶ ಕೊಡಿ, ಇಲ್ಲವಾದರೆ ನಿಮ್ಮ ಜೊತೆ ನಾವೇ ಪೈಪ್ಲೈನ್ ಒಡೆದಾದರೂ ಕೆರೆಗೆ ನೀರು ಕೊಡಿಸುತ್ತೇವೆ ಎಂದು ಶಾಸಕರು ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಕಾವೇರಿ ಹೋರಾಟವನ್ನು ತಿಂಗಳು ಮುಂದೂಡಿದ್ದೇವೆ ಎಂದು ಹೇಳಿದರು.ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿಚಾರವಾಗಿ ಶಾಸಕ ಬಾಲಕೃಷ್ಣ ರೈತ ಸಂಘ ಈ ಬಗ್ಗೆ ಹೋರಾಟ ಮಾಡಲಿ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾವು ಕೂಡ ಹಿಂದೆ ರಸ್ತೆ ತಡೆ, ರಸ್ತೆ ಅಗಿಯುವ ಕೆಲಸ ಮಾಡಿದ್ದೇವೆ. ನೀವು ಹೋರಾಟಕ್ಕೆ ಕರೆಯಿರಿ, ನಾವು ಬರುತ್ತೇವೆ, ರೈತ ಸಂಘ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ, ಶಾಸಕರಾಗಲಿ, ಅವರ ಹಿಂಬಾಲಕರಾಗಲಿ, ಯಾರೇ ಆಗಲಿ, ರೈತ ಸಂಘದ ಬಗ್ಗೆ ಹಗುರವಾಗಿ ಮಾತನಾಡಬಾರದು. ತಮ್ಮದೇ ಸರ್ಕಾರ ಇಟ್ಟುಕೊಂಡು ಯಾಕೆ ವಿಳಂಬ ಆಗುತ್ತಿದೆ, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕು, ನಾವು ಕೂಡ ನಮ್ಮ ಒತ್ತಡಗಳ ನಡುವೆಯೂ ಹೋರಾಟ ಹಮ್ಮಿಕೊಂಡು ತಾಲೂಕಿನ ಪರ ನಿಂತಿದ್ದೇವೆ ಎಂದು ಹೇಳಿದರು.
ರೈತ ಮುಖಂಡ ಶಿವಲಿಂಗಯ್ಯ ಮಾತನಾಡಿ, ರೈತ ಸಂಘ ಯಾವುದೇ ವೈಯಕ್ತಿಕ ಲಾಭಕ್ಕಾಗಿ ಹೋರಾಡುತ್ತಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಶ್ರಮಿಸುತ್ತಿದೆ. ರಾಜಕೀಯ ಮುಖಂಡರು ರೈತ ಸಂಘದ ಬಗ್ಗೆ ಮಾತನಾಡುವಾಗ ವಿವೇಚನೆಯಿಂದ ವರ್ತಿಸಬೇಕು. ನೀರಾವರಿ ವಿಚಾರವಾಗಿ ಶಾಸಕ ಬಾಲಕೃಷ್ಣ ರೈತ ಸಂಘದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ್, ಕರಿಯಪ್ಪ, ಬುಡನ್ ಸಾಬ್, ಚಿಕ್ಕಣ್ಣ, ವೆಂಕಟೇಶ್, ನಾರಾಯಣ್ ಸೇರಿದಂತೆ ಇತರರು ಭಾಗವಹಿಸಿದ್ದರು.
(ಫೋಟೋ ಕ್ಯಾಫ್ಞನ್)ಮಾಗಡಿಯಲ್ಲಿ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ್, ರೈತ ಮುಖಂಡರಾದ ಶಿವಲಿಂಗಯ್ಯ, ಕರಿಯಪ್ಪ, ಬುಡನ್ ಸಾಬ್, ಚಿಕ್ಕಣ್ಣ ಇತರರಿದ್ದರು.