ಜೀವ ವೈವಿಧ್ಯತೆ ಕಾಪಾಡಲು ಪಕ್ಷಿಪ್ರಿಯರ ಮನವಿ

ಕನ್ನಡಪ್ರಭ ವಾರ್ತೆ, ತುಮಕೂರು

ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರು ಕಡಿಮೆಯಾದಂತೆ ಸಣ್ಣ ಸಣ್ಣ ದ್ವೀಪಗಳು ನಿರ್ಮಾಣವಾಗುತ್ತವೆ. ಇದಕ್ಕಾಗೇ ಕಾಯುತ್ತಿರುವಂತೆ ಕಾಣುವ ನೆಲದ ಮೇಲೆ ಮೊಟ್ಟೆ ಇಟ್ಟು ಮರಿ ಮಾಡಿ ಸಂತಾನೋತ್ಪತಿ ಮಾಡುವ ಪಕ್ಷಿಗಳಾದ ರಿವರ್‌ಟನ್, ಕಾಮನ್ ಸ್ಟಿಲ್ಟ್, ಲಿಟ್ಲ್ರಿಂಗ್ ಪ್ಲೋವರ್, ಪ್ರಾಟೀನ್‌ಕೋಲ್, ಲಾಪ್‌ಲಿಂಗ್ ಸೇರಿದಂತೆ ಹಲವು ಪಕ್ಷಿಗಳು ತುಮಕೂರಿನ ಗಂಗಸಂದ್ರ ಕೆರೆಯಲ್ಲಿ ಮುಂಗಾರು ಮಳೆಗೂ ಮುನ್ನ ಸಂತಾನೋತ್ಪತಿ ಕ್ರಿಯೆಯಲ್ಲಿ ತೊಡಗಿ, ಆಹಾರ ತಂದುಕೊಟ್ಟು ಮರಿಗಳ ಹಾರೈಕೆ ಮಾಡುವುದನ್ನು ತುಮಕೂರಿನ ಹೊರಪೇಟೆಯಲ್ಲಿರುವ ಗಜಾನನ ಸ್ಪೆಷಾಲಿಟಿ ಸೆಂಟರ್‌ನ ಡಾ. ಉಮಾಶಂಕರ್, ಆಯುರ್ವೇದ ಭವನದ ಸುಬ್ರಮಣ್ಯ ಅಡಿಗ, ಚಂದುಬಾಬು, ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ.

ಗಂಗಸಂದ್ರ ಕೆರೆಯ ಮಧ್ಯೆ ಸಣ್ಣ ದ್ವೀಪಗಳ ನೆಲದ ಮೇಲೆ ಈ ಪಕ್ಷಿಗಳು ಇಟ್ಟಿರುವ ಮೊಟ್ಟೆಗಳ ಅರಿವಿಲ್ಲದೆ ಕೆಲ ಪುಂಡ ಹುಡುಗರು ಮದ್ಯಪಾನ ಮಾಡುವುದು, ಬೈಕ್ ಓಡಿಸುವುದು ಜೊತೆಗೆ ಪ್ರೀ ವೆಡ್ಡಿಂಗ್ ಶೂಟ್ ಮಾಡುವುದರ ಮೂಲಕ ಪಕ್ಷಿಗಳ ಸ್ವಾಭಾವಿಕ ಚಲನ ವಲನಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಈ ಮೇಲಿನ ಪಕ್ಷಿ ಪ್ರಿಯರು ದೂರಿ ಆತಂಕ ವ್ಯಕ್ತಪಡಿಸಿದ್ದಾರೆ. ಕೆರೆಗಳು ಮನುಷ್ಯನ ಜೀವನೋಪಾಯಕ್ಕೆ ಎಷ್ಟು ಮುಖ್ಯವೋ, ಪ್ರಾಣಿ ಪಕ್ಷಿಗಳ ಆವಾಸ ಸ್ಥಾನಕ್ಕೂ ಅಷ್ಟೇ ಮುಖ್ಯ ಎಂಬುದು ಗಮನಾರ್ಹ ಎಂದಿರುವ ಗಜಾನನ ಸ್ಪೆಷಾಲಿಟಿ ಸೆಂಟರ್‌ನ ಡಾ. ಉಮಾಶಂಕರ್, ಆಯುರ್ವೇದ ಭವನದ ಸುಬ್ರಮಣ್ಯ ಅಡಿಗ, ಚಂದುಬಾಬು, ಕೆರೆಗಳಲ್ಲಿನ ಜೀವವೈವಿಧ್ಯತೆಯನ್ನು ಕಾಪಾಡಲು ಸಂಬಂಧಪಟ್ಟ ಇಲಾಖೆಯವರು ಮತ್ತು ಜಿಲ್ಲಾಡಳಿತ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.