ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಪಟ್ಟಣದ ತಾಲೂಕು ಕಚೇರಿಯಲ್ಲಿರುವ ಜನನ ಮತ್ತು ಮರಣ ನೋಂದಣಿ ಕಚೇರಿಗೆ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನ ಜನರು ನಿತ್ಯ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಸಾಲಿಗ್ರಾಮ ಹೋಬಳಿ ಕೇಂದ್ರಕ್ಕೆ ಚುಂಚನಕಟ್ಟೆ ಮತ್ತು ಮಿರ್ಲೆ ಹೋಬಳಿಗಳನ್ನು ಸೇರಿ ಪ್ರತ್ಯೇಕ ತಾಲೂಕನ್ನಾಗಿ ಘೋಷಣೆ ಮಾಡಿ ಅಸ್ತಿತ್ವಕ್ಕೆ ತರಲಾಯಿತು. ಆನಂತರ ಎರಡು ತಾಲೂಕುಗಳಿಗೆ ಪ್ರತ್ಯೇಕವಾಗಿ ಜನನ ಮತ್ತು ಮರಣ ನೊಂದಣಿ ಕಚೇರಿಯನ್ನು ಆರಂಭಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದ ನಂತರ ಸಾಲಿಗ್ರಾಮ ತಾಲೂಕಿಗೆ ಸೇರಿದ ದಾಖಲೆಗಳನ್ನು ಹಸ್ತಾಂತರ ಮಾಡಲಾಗಿತ್ತು, ಆದರೆ ಈ ಹಿಂದೆ ಹೊಸ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರರು ತಮ್ಮ ತಾಲೂಕಿನ ಕಚೇರಿಯ ಕಡತಗಳನ್ನು ಕೆ.ಆರ್. ನಗರಕ್ಕೆ ವರ್ಗಹಿಸಿದ್ದರು. ಅಂದಿನಿಂದ ಈವರೆಗೂ ಸಾಲಿಗ್ರಾಮ ತಾಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯ ನಾಗರೀಕರು ಜನನ ಮತ್ತು ಮರಣಗಳ ದಾಖಲೆಗಳ ಪ್ರಮಾಣ ಪತ್ರ ಪಡೆಯಲು ತಿಂಗಳು ಗಟ್ಟಲೆ ಕೆ.ಆರ್. ನಗರದ ಕಚೇರಿಗೆ ಅಲೆಯಬೇಕಿದ್ದು ಸಕಾಲದಲ್ಲಿ ದಾಖಲೆ ಸಿಗದೆ ಪರದಾಡುವಂತಾಗಿದೆ. ಸಮಸ್ಯೆಯನ್ನು ಅರಿತು ನಾಗರೀಕರ ಅನುಕೂಲಕ್ಕೆ ಬರಬೇಕಾದ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಕಚೇರಿಗೆ ನಿತ್ಯ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗಲಾದರೂ ನಮ್ಮ ಸಮಸ್ಯೆಗೆ ಸಂಬಂಧಿತರು ಸ್ಪಂದಿಸಬೇಕೆಂದು ನಾಗರೀಕರು ಕೋರಿದ್ದಾರೆ. -------ಸಾಲಿಗ್ರಾಮ ತಾಲೂಕು ಕೇಂದ್ರಕ್ಕೆ ಪ್ರತ್ಯೇಕವಾಗಿ ಜನನ ಮತ್ತು ಮರಣಗಳ ದಾಖಲೆ ನೀಡುವ ನೋಂದಣಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾನು ಸರ್ಕಾರಕ್ಕೆ ಪತ್ರ ಬರೆದಿದ್ದು, ಶೀಘ್ರದಲ್ಲಿಯೆ ಕಚೇರಿ ಆರಂಭಿಸಿ ಅಲಿನ ಜನತೆಗೆ ಆಗುತ್ತಿರುವ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇನೆ. - ಡಿ. ರವಿಶಂಕರ್, ಶಾಸಕರು, ಕೆ.ಆರ್.ನಗರ.------------ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಜನನ ಮತ್ತು ಮರಣಗಳ ದಾಖಲೆ ನೀಡುವ ನೋಂದಣಿ ಕೇಂದ್ರವನ್ನು ಈ ಹಿಂದೆ ಆರಂಭಿಸಿ ದಾಖಲೆಗಳನ್ನು ಹಸ್ತಾಂತರಿಸಲಾಗಿತ್ತು, ಆದರೆ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ರದ್ದಾಗಿ ಮತ್ತೆ ಕೆ.ಆರ್. ನಗರಕ್ಕೆ ವಾಪಾಸ್ಸಾಗಿದ್ದು ಈ ವಿಚಾರ ನಮ್ಮ ಗಮನಕ್ಕೆ ಬಂದಿರುವುದರಿಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಾಲಿಗ್ರಾಮಕ್ಕೆ ಪ್ರತ್ಯೇಕ ನೋಂದಣಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. - ವಿಜಯಕುಮಾರ್, ಉಪವಿಭಾಗಾಧಿಕಾರಿಗಳುಸ ಹುಣಸೂರು.