ಡಾ.ಅಶ್ವಥ್‌ ನಾರಾಯಣ್ ರ ಹುಟ್ಟುಹಬ್ಬ ಆಚರಣೆ

| Published : Feb 03 2024, 01:46 AM IST

ಸಾರಾಂಶ

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ ನಾರಾಯಣರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಾಗಿ ಅನೇಕ ಕೊಡುಗೆ ನೀಡಿದ್ದಾರೆ. ಮಂಡ್ಯ ವಿಶ್ವವಿದ್ಯಾಲಯವಾಗುವುದಕ್ಕೆ ಪ್ರಮುಖ ಕಾರಣೀಭೂತರಾಗಿದ್ದಾರೆ.

ಬಿಜೆಪಿ ಮುಖಂಡರು, ಅಭಿಮಾನಿಗಳಿಂದ ದೇವಾಲಯದಲ್ಲಿ ಪೂಜೆ । ವಿಶೇಷ ಚೇತನರ ವಸತಿ ನಿಲಯದಲ್ಲಿ ಸೇವಾ ಕಾರ್ಯ

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ ನಾರಾಯಣರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಹಿತೈಷಿಗಳು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಸೇವಾ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸಿದರು.

ನಗರದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ವಿಶೇಷಪೂಜೆ, ಸೇವಾಕಿರಣ ವೃದ್ಧಾಶ್ರಮದಲ್ಲಿ ಮತ್ತು ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿಯಿರುವ ಮಮತೆಯ ಮಡಿಲು ನಿತ್ಯ ದಾಸೋಹ ಕೇಂದ್ರದಲ್ಲಿ ಗರ್ಭಿಣಿ-ಬಾಣಂತಿ ಹಾಗೂ ಅಗತ್ಯಯುಳ್ಳವರಿಗೆ ಪೌಷ್ಠಿಕಾಹಾರ, ಪ್ರೇರಣಾ ವಿಶೇಷ ಚೇತನರ ವಸತಿ ನಿಲಯದಲ್ಲಿ ಶಾಲಾ ಮಕ್ಕಳಿಗೆ ಆಹಾರ ಮತ್ತು ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ ನಾರಾಯಣರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಾಗಿ ಅನೇಕ ಕೊಡುಗೆ ನೀಡಿದ್ದಾರೆ. ಮಂಡ್ಯ ವಿಶ್ವವಿದ್ಯಾಲಯವಾಗುವುದಕ್ಕೆ ಪ್ರಮುಖ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.

ವಿಶ್ವವೇ ಮೆಚ್ಚುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರು ರಾಜಕೀಯದಲ್ಲಿ ಮತ್ತಷ್ಟು ಬೆಳೆದು ಉನ್ನತ ಸ್ಥಾನಮಾನಗಳು ದೊರಕಲಿ. ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡುವ ಶಕ್ತಿಯನ್ನು ಜನರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಸದಾನಂದ, ಡಾ.ಅಶ್ವಥ್‌ನಾರಾಯಣ ಉತ್ತಮ ಆಡಳಿತಗಾರ. ಸಂಘಟನಾಶೀಲ ವ್ಯಕ್ತಿತ್ವವಿರುವ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಡಿನುದ್ದಗಲಕ್ಕೂ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಸೇವಾಕಾರ್ಯಗಳ ಮೂಲಕ ಆಚರಿಸುತ್ತಿದ್ದೇವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಹಿರಿಯ ಮುಖಂಡರಾದ ಮದ್ದೂರು ಸತೀಶ್, ವಸಂತ್‌ಕುಮಾರ್, ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಫೌಂಡೇಷನ್ ಅಧ್ಯಕ್ಷ ಸುನಿಲ್ ನಿಡಘಟ್ಟ, ಜಿಲ್ಲಾ ಕಚೇರಿ ಕಾರ್ಯದರ್ಶಿ ಹರ್ಷ, ಶಿವಕುಮಾರ್‌ ಆರಾಧ್ಯ, ಪ್ರಸನ್ನ, ಹರ್ಷ, ಶಿವಕುಮಾರ್‌ ಕೆಂಪಯ್ಯ, ಹೊಸಹಳ್ಳಿಶಿವು, ನವೀನ್, ನವನೀತ, ಸಿ.ಟಿ.ಮಂಜುನಾಥ್, ಕೇಶವ, ಶರತ್ ಮತ್ತಿತರರಿದ್ದರು.

--------