ಸಾರಾಂಶ
ಸಿಂದಗಿ : ಕಳೆದ ಎರಡು ಬಾರಿಯೂ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತದಾರರಿಗೆ ಮರಳು ಮಾಡಿ ಅಧಿಕಾರಕ್ಕೆ ಬಂದಿದೆ ಹೊರತು ಅಭಿವೃದ್ಧಿಯಿಂದಲ್ಲ. ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸಿ ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು.
ತಾಲೂಕಿನ ಮೋರಟಗಿ ಗ್ರಾಮದ ಕೇರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಹಮ್ಮಿಕೊಂಡಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದೆ. ಸದ್ಯಕ್ಕೆ ರಾಹುಲ್ ಗಾಂಧಿ ಅವರು ಕೊಟ್ಟಿರುವ ಎಲ್ಲ ಭರವಸೆಗಳು ಸಹ ಖಂಡಿತವಾಗಿಯೂ ಈಡೇರಿಸುತ್ತಾರೆ ಎನ್ನುವ ಭರವಸೆ ನಮ್ಮಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಚುನಾವಣೆ ಬಂದಾಗ ಬಿಜೆಪಿಯವರು ಕುತಂತ್ರ ರಾಜಕೀಯ ಆರಂಭವಾಗುತ್ತದೆ. ಸುಳ್ಳಿನ ಸರಮಾಲೆಗಳು ಶುರುವಾಗುತ್ತವೆ. ಸಾರ್ವಜನಿಕರು ಸುಳ್ಳು ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಸಂದರ್ಭ ಇಂದು ಬಂದಿದೆ. ತಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು. ನನ್ನನ್ನು ಗೆಲ್ಲಿಸುವುದರ ಜೊತೆಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಬೇಕು ಎಂದರು.
ಈ ವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಬ್ಲಾಕ್ ತಾಲೂಕಾಧ್ಯಕ್ಷ ಸುರೇಶ ಪೂಜಾರ, ಆಲಮೇಲ ಬ್ಲಾಕ್ ತಾಲೂಕಾಧ್ಯಕ್ಷ ಸಾಧಿಕ್ ಸುಂಬಡ, ಮಾಜಿ ಜಿಪಂ ಸದಸ್ಯ ಎನ್.ಆರ್.ತಿವಾರಿ, ಎಂ.ಕೆ.ಕಣ್ಣಿ, ಮುತ್ತಪ್ಪ ಸಿಂಗೆ, ರಜಾಕ್ ಬಾಗವಾನ, ಬಂದೇನವಾಜ ಕಣ್ಣಿ, ಅರವಿಂದ ಹಂಗರಗಿ, ಚನ್ನು ವಾರದ, ಶ್ರೀಶೈಲ್ ಕವಲಗಿ ಸೇರಿದಂತೆ ಮೋರಟಗಿ ಸುತ್ತಲಿನ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.