ಸಿದ್ದರಾಮಯ್ಯ ಸಿಎಂ ಆಗಿರುವುದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ

| Published : Jul 13 2024, 01:39 AM IST

ಸಿದ್ದರಾಮಯ್ಯ ಸಿಎಂ ಆಗಿರುವುದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಬಿಜೆಪಿ ಸರ್ಕಾರ ಶೇ. 40 ಭ್ರಷ್ಟಾಚಾರ ಮಾಡಿದ್ದರ ಬಗ್ಗೆ ಗುತ್ತಿಗೆದಾರರು ಪ್ರಧಾನಿ ಕಚೇರಿಗೆ ಖುದ್ದು ದೂರು ಸಲ್ಲಿಸಿದಾಗ ಇಡಿ ಎಲ್ಲಿತ್ತು? ಚೆಕ್ ಮೂಲಕ ಲಂಚ ಪಡೆದವರು ಜೈಲಿಗೆ ಹೋಗಿದ್ದು ನೆನಪಿಲ್ಲವೆ?.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿದವರು ಎನ್ನುವ ಒಂದೇ ಕಾರಣಕ್ಕೆ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನೂರು ಇಡಿ, ನೂರು ಸಿಬಿಐ ಬರಲಿ, ಕಾಂಗ್ರೆಸ್ ವೈಟ್ ಟೀ ಶರ್ಟ್ ಆರ್ಮಿ ಎಂದಿಗೂ ಹೆದರುವುದಿಲ್ಲ ಎಂದು ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮಹ್ಮದ ಹ್ಯಾರಿಸ್‌ ನಲಪಾಡ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಶೇ. 40 ಭ್ರಷ್ಟಾಚಾರ ಮಾಡಿದ್ದರ ಬಗ್ಗೆ ಗುತ್ತಿಗೆದಾರರು ಪ್ರಧಾನಿ ಕಚೇರಿಗೆ ಖುದ್ದು ದೂರು ಸಲ್ಲಿಸಿದಾಗ ಇಡಿ ಎಲ್ಲಿತ್ತು? ಚೆಕ್ ಮೂಲಕ ಲಂಚ ಪಡೆದವರು ಜೈಲಿಗೆ ಹೋಗಿದ್ದು ನೆನಪಿಲ್ಲವೆ? ಬಿಜೆಪಿ ಸರ್ಕಾರ ಶೇ. 40ರಷ್ಟು ಕಮಿಷನ್ ಹಣ ಎಲ್ಲಿ ಹೋಯಿತು? ಕೋವಿಡ್ ಹಗರಣವಾಗಿದ್ದ ವೇಳೆ ಇಡಿ, ಸಿಬಿಐದವರು ಎಲ್ಲಿದ್ದರು? ಎಂದು ಪ್ರಶ್ನಿಸಿದರು.

ಹರಿಶ್ಚಂದ್ರರ ಮೊಮ್ಮಕ್ಕಳಾ?

ಸಿಬಿಐದವರು ಒಮ್ಮೆಯಾದರೂ ಬಿಜೆಪಿಯವರ ಮೇಲೆ ಕ್ರಮಕೈಗೊಂಡಿದ್ದಾರೆಯೇ? ಅವರೆಲ್ಲ ಹರಿಶ್ಚಂದ್ರನ ಮೊಮ್ಮಕ್ಕಳಾ, ಯಡಿಯೂರಪ್ಪ ಅವರದೇ ಸರ್ಕಾರ ಅಧಿಕಾರದಲ್ಲಿದ್ದಾಗ ಜೈಲಿಗೆ ಹೋಗಿದ್ದು ನೆನಪಿಲ್ಲವೆ? ಕಮಿಷನ್ ಬಗ್ಗೆ ಗುತ್ತಿಗೆದಾರರು ಪಿಎಂ ಕಚೇರಿಗೆ ನೀಡಿದಾಗ ಕೇಂದ್ರ ಸರ್ಕಾರ ಏಕೆ ತನಿಖೆ ನಡೆಸಲಿಲ್ಲ ಎಂದು ನಲಪಾಡ್‌ ಪ್ರಶ್ನಿಸಿದರು.

ಬರಿ ಕಾಂಗ್ರೆಸ್ಸಿನವರೇ ಕಾಣುತ್ತಾರೆ:

ಇಡಿ, ಸಿಬಿಐಗೆ ಕಾಂಗ್ರೆಸ್ ನವರು ಮಾತ್ರ ಕಾಣುತ್ತಾರೆ. ಇದೀಗ ನಾವು ಯಾವ ಸಿಬಿಐ, ಇಡಿಗೆ ಹೆದರಲ್ಲ. ಧಮ್, ತಾಕತ್ತು ಬಗ್ಗೆ ಮಾತನಾಡುವ ಬಿಜೆಪಿಯವರು ನ್ಯಾಯಯುತವಾಗಿ ಹೋರಾಟ ಮಾಡಲಿ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣ ಬಿಜೆಪಿ ಸರ್ಕಾರದಲ್ಲಿದ್ದಾಗ ಆಗಿರುವುದು ಎಂದರು.

ಸರ್ಕಾರ ನಡೆಸಲು ಅಧಿಕಾರಿಗಳು ಬಹಳ ಮುಖ್ಯ. ಅವರನ್ನು ನಿಯಂತ್ರಣದೊಂದಿಗೆ ಉತ್ತಮ ಆಡಳಿತ ನೀಡುವುದು ಸಚಿವರ ಕೆಲಸ. ನಿಯಂತ್ರಿಸದಿದ್ದರೆ ಕಷ್ಟ ಕಷ್ಟ ಎಂದ ಅವರು, ವಾಲ್ಮೀಕಿ ನಿಗಮದ ಪ್ರಕರಣವನ್ನು ಹಗರಣ ಎಂದು ಒಪ್ಪಲು ಸಾಧ್ಯವಿಲ್ಲ ಎಂದರು.

ಬಿಜೆಪಿಯವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಮುಟ್ಟಿದ್ದಕ್ಕೆ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನಗಳಿಗೆ ಇಳಿಯಿತು. ಮತ್ತೊಮ್ಮೆ ಏನಾದರೂ ಮುಟ್ಟಿದ್ದೇ ಆದಲ್ಲಿ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ ಎಂಬುದನ್ನು ಅರಿತುಕೊಳ್ಳಲಿ ಎಂದು ಎಚ್ಚರಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಲಿಗಾರ ಸೇರಿದಂತೆ ಹಲವರಿದ್ದರು.