ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕು ಮಂಡಳದ ವತಿಯಿಂದ ಭವ್ಯ ಸಂಭ್ರಮಾಚರಣೆ ನಡೆಯಿತು.
ಬ್ಯಾಡಗಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕು ಮಂಡಳದ ವತಿಯಿಂದ ಭವ್ಯ ಸಂಭ್ರಮಾಚರಣೆ ನಡೆಯಿತು.ಪಟ್ಟಣದ ಹಳೇ ಪುರಸಭೆ ಆವರಣದಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಪಕ್ಷದ ಧ್ವಜಗಳನ್ನು ಬೀಸುತ್ತಾ ‘ಭಾರತ ಮಾತಾ ಕೀ ಜೈ’ ಬಿಜೆಪಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ದೇಶದ ವಿವಿಧ ಭಾಗಗಳಲ್ಲಿ ಜನರು ಅಭಿವೃದ್ಧಿ ಪರ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಶಾಂತಿ ಮತ್ತು ವಿಭಜನೆಯ ರಾಜಕಾರಣ ನಡೆಸುತ್ತಿದ್ದವರಿಗೆ ಈ ಬಾರಿ ಜನತೆ ತಕ್ಕ ಉತ್ತರ ನೀಡಿದ್ದಾರೆ. ಒಂದು ವರ್ಗದ ತುಷ್ಟೀಕರಣ ರಾಜಕಾರಣವನ್ನು ಜನರು ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಂಗಾಳದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ದಾರಿ ತೆರೆದುಕೊಳ್ಳಲಿದೆ ಎಂದು ಹೇಳಿದರು.ಪುರಸಭೆ ಮಾಜಿ ಸದಸ್ಯೆ ಕಲಾವತಿ ಬಡಿಗೇರ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಸಾಧನೆ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ಜನತೆ ಇಟ್ಟಿರುವ ವಿಶ್ವಾಸದ ಪ್ರತಿಫಲವಾಗಿದೆ. ಅಭಿವೃದ್ಧಿ ಸುಶಾಸನ ಮತ್ತು ರಾಷ್ಟ್ರಾಭಿಮಾನವೇ ಬಿಜೆಪಿಯ ಬಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳು ಜಾರಿಗೆ ಬರಲಿವೆ ಎಂದು ಹೇಳಿದರು.ಈ ವೇಳೆ ಶಿವಾನಂದ ಯಮನಕ್ಕವರ, ವಿಷ್ಣುಕಾಂತ ಬೆನ್ನೂರ, ವಿಜಯ ಮಾಳಗಿ, ವಿನಯ ಹಿರೇಮಠ, ಸುರೇಶ ಉದ್ಯೋಗಣ್ಣನವರ, ಹಾಲೇಶ ಜಾಧವ, ಪರಶುರಾಮ ಉಜನಿಕೊಪ್ಪ, ನಾಗರಾಜ ಹಾವನೂರ, ನಿಂಗಪ್ಪ ಆಡಿನವರ, ಹನುಮಂತ ಮ್ಯಾಗೇರಿ, ಸರೋಜಾ ಉಳ್ಳಾಗಡ್ಡಿ, ಜ್ಯೋತಿ ಕುದರಿಹಾಳ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು, ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.