ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಡೆಂಘೀ ನಿಯಂತ್ರಿಸುವಲ್ಲಿ ವಿಫಲರಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಆಗ್ರಹಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡೆಂಘೀ ಮಹಾಮಾರಿ ರಾಜ್ಯದಲ್ಲಿ ಕಾಡುತ್ತಿದೆ. ಆರೋಗ್ಯ ಇಲಾಖೆಗೆ ಗೊತ್ತಿದೆ. ಆದರೂ ಪೂರ್ವ ತಯಾರಿ ಮಾಡದ ಪರಿಣಾಮ ಹೆಚ್ಚಳವಾಗಿದ್ದು, 1,05 ಲಕ್ಷ ಶಂಕಿತ ಪ್ರಕರಣಗಳಿವೆ. 4827 ಪಾಸಿಟಿವ್, 07 ಮಂದಿ ಮೃತಪಟ್ಟಿದ್ದಾರೆ. ಸಾಗರದ ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ನಾಗರಾಜ್ ಕೂಡ ಡೆಂಘೀಗೆ ಬಲಿಯಾಗಿದ್ದಾರೆ. ಹಾಸನ ಐದು ಡೆಂಘೀ ಪೀಡಿತರು ಮೃತಪಟ್ಟಿದ್ದಾರೆ. ಆದರೂ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ ಎಂದು ದೂರಿದರು.
ಡೆಂಘೀ ಬಂದರೆ ಎಲಿಸಾ ಪರೀಕ್ಷೆ ಮಾಡಬೇಕು. ಶಿವಮೊಗ್ಗದಲ್ಲಿ ಕೇವಲ ಒಂದು ಕಡೆ ಮಾತ್ರ ಸೌಲಭ್ಯ ಇದೆ. ಇದನ್ನು ತಾಲೂಕು ವ್ಯಾಪ್ತಿಗೆ ವಿಸ್ತರಿಸಬೇಕು. ಜಿಲ್ಲೆಯಲ್ಲಿ 592 ಶಂಕಿತ ಪ್ರಕರಣಗಳಿದ್ದು, ಝೀಕಾ ವೈರಸ್ ಗೆ ಒಂದು ಬಲಿಯಾಗಿದ್ದು, ಎರಡು ಪ್ರಕರಣಗಳು ಪಾಸಿಟಿವ್ ಇದೆ ಎಂದರು.ಸೊಳ್ಳೆಗಳ ಉತ್ಪಾದನಾ ಕೇಂದ್ರ ನಿರ್ಮೂಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಫಾಗಿಂಗ್ ಮಾಡುತ್ತಿಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾತ್ರ ಎಲಿಸಾ ಪರೀಕ್ಷೆ ಅವಕಾಶ ಇದೆ. ಪ್ರತಿದಿನ 50 ಜನರಿಗೆ ಪರೀಕ್ಷೆ ಮಾಡಬಹುದು. ಮತ್ತೊಂದು ಪರೀಕ್ಷಾ ಕೇಂದ್ರ ಆರಂಭ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲೂ 500 ರು. ಪರೀಕ್ಷೆ ಆಗುತ್ತಿದೆ. ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಪರೀಕ್ಷೆ ಮಾಡಬೇಕು. ಬಿಳಿ ರಕ್ತಕಣಗಳ ಪ್ರತ್ಯೇಕ ಮಾಡುವ ವ್ಯವಸ್ಥೆ ತಾಲೂಕು ಕೇಂದ್ರದಲ್ಲಿ ಇಲ್ಲ ಎಂದು ಆರೋಪಿಸಿದರು.
ಮೆಗ್ಗಾನ್ ಆಸ್ಪತ್ರೆ ರಕ್ತ ಪರೀಕ್ಷೆಗೆ 600 ರು. ಹಣ ಕೊಡಬೇಕು. ಖಾಸಗಿ ಆಸ್ಪತ್ರೆ 1000 ರು. ಶುಲ್ಕ ಕೊಡಬೇಕು. ಬಿಪಿಎಲ್ ಕಾರ್ಡ್ ಇದ್ದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಪರೀಕ್ಷೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಪ್ರತಿ ಜಿಲ್ಲೆಗ ಓರ್ವ ಐಎಎಸ್ ಅಧಿಕಾರಿ ನೋಡೆಲ್ ಅಧಿಕಾರಿ ಆಗಿ ನೇಮಕ ಮಾಡಬೇಕು. ಬಿಪಿಎಲ್ ಕಾರ್ಡ್ ದಾರರಿಗೆ ಖಾಸಗಿ ಲ್ಯಾಬ್ಗಳಲ್ಲಿಯೂ ಉಚಿತ ಪರೀಕ್ಷೆ ಮಾಡಬೇಕು. ಮೂಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಇನ್ನಿತರ ಹಗರಣಗಳಲ್ಲಿ ಭಾಗಿಯಾಗಿರುವ ಸರ್ಕಾರ ಅದನ್ನು ಮುಚ್ಚಿ ಹಾಕುವ ಕಡೆ ಗಮನಹರಿಸುತ್ತಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್, ಶಿವರಾಜ್, ಡಾ.ಸುರೇಶ್, ಡಾ.ಹೇಮಂತ್, ಹೃಷಿಕೇಶ್ ಪೈ, ವಿನ್ಸೆಂಟ್, ಶ್ರೀನಿವಾಸ ರೆಡ್ಡಿ ಇದ್ದರು.