ಕನ್ನಡಪ್ರಭ ವಾರ್ತೆ ಯರಗಟ್ಟಿ

ಮಳೆಯ ಕೊರತೆಯಿಂದ ರೈತರ ಬೆಳೆಗಳು ಹಾನಿಯಾದ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ನೇತೃತ್ವದ ಬಿಜೆಪಿ ಮುಖಂಡರ ತಂಡ ರವಿವಾರ ಯರಗಟ್ಟಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು. ಅಲ್ಲದೇ, ರೈತರಿಗೆ ಸರ್ಕಾರ ತುರ್ತು ಪರಿಹಾರ ನೀಡುವಂತೆ ಒತ್ತಾಯಿಸಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ಮುಂಗಾರು ಬೆಳೆ ಸಂಪೂರ್ಣ ಹಾಳಾಗಿದ್ದು, ರಾಜ್ಯ ಸರ್ಕಾರ ತಕ್ಷಣವೇ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರು ಪ್ರತಿ ಎಕರೆಗೆ ₹ 15ರಿಂದ ₹ 30 ಸಾವಿರ ಖರ್ಚು ಮಾಡಿ ಹೆಸರು, ಈರುಳ್ಳಿ, ಗೋವಿನ ಜೋಳ, ಶೇಂಗಾ, ಬೆಳೆ ಬಿತ್ತನೆ ಮಾಡಿದ್ದಾರೆ. ಬೀಜಗಳು ಸಹ ಪೂರ್ತಿ ನಾಟಿಲ್ಲ, ಮರು ಬಿತ್ತನೆ ಮಾಡಿ ಸಾಕಷ್ಟು ಖರ್ಚು ಮಾಡಿದ್ದು, ನಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಹಿಂಗಾರು ಬಿತ್ತನೆಗಾಗಿ ಮೊದಲ ಹಂತದಲ್ಲಿ ₹25 ಸಾವಿರ ಬಿಡುಗಡೆ ಮಾಡಬೇಕು, ಬೆಳೆ ವಿಮೆ ತುಂಬುತ್ತಿರುವ ರೈತರ ವಿಮೆಯನ್ನು ಸರ್ಕಾರವೇ ತುಂಬಬೇಕು ಎಂದು ಆಗ್ರಹಿಸಿದರು.ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದಿದ್ದರೆ ಅಧಿವೇಶನ ನಡೆಯಲು ಬಿಡುವುದಿಲ್ಲ, ಸದನದ ಒಳಗೆ ಹೊರಗೆ, ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಕೃಷಿಕ ಸಮಾಜದ ನವದೆಹಲಿ ಯುವ ಘಟಕದ ರಾಜ್ಯಾಧ್ಯಕ್ಷ ಮಹಾಂತೇಶ ತೋಟಗಿ ಮಾತನಾಡಿ, ಕೀಟ ಭಾದೆಯಿಂದಾಗಿ ಹೆಸರು, ಗೋವಿನ ಜೋಳ, ಸಂಪೂರ್ಣ ನಾಶವಾಗಿದೆ, ಸರಿಯಾಗಿ ಬೆಳೆಯದ ಬೆಳೆಗಳನ್ನು ರೈತರು ನಾಶ ಮಾಡುತ್ತಿದ್ದಾರೆ. ಶೇಂಗಾ ಇನ್ನಿತರ ಬೆಳೆಗಳು ಸರಿಯಾಗಿಲ್ಲ, ಕ್ಷೇತ್ರದಲ್ಲಿನ ಬೆಳೆಹಾನಿ ಚಿತ್ರಣವನ್ನು ಅಧ್ಯಯನ ತಂಡದ ಮುಂದೆ ವಿವರಿಸಿದರು. ತಕ್ಷಣ ರೈತರಿಗೆ ಬೆಳೆ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು, ಇಲ್ಲದಿದ್ದರೆ ಮುಂಬರುವ ಅಧಿವೇಶನಕ್ಕೆ ರೈತರಿಂದ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಬಿಜೆಪಿ ಬರ ಅಧ್ಯಯನ ತಂಡದಲ್ಲಿ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ್ಯ ಪಾಟೀಲ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ನಡಹಳ್ಳಿ, ಕೆ.ವ್ಹಿ.ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಬಸಯ್ಯ ಹಿರೇಮಠ, ಈರಣ್ಣ ಚಂದರಗಿ, ಪರ್ವತಗೌಡ ಪಾಟೀಲ, ಸುರೇಶ ಮುರಗೋಡ, ವೆಂಕಟೇಶಗೌಡ ದೇವರಡ್ಡಿ, ಗಿರೀಶ ಪಾಟೀಲ, ಬಸವರಾಜ ಇಂಚಲ, ಚಂದ್ರು ಅಳಗೋಡಿ, ಶೇಖರ ಹರಳಿ, ಮಹಾಂತೇಶ ಕಾಶನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.------ಕೋಟ್‌ರಾಜ್ಯದಲ್ಲಿ ಬರಗಾಲ ಆವರಿಸಿದ್ದರಿಂದ ರೈತರು ಗುಳೆ ಹೋಗುತ್ತಿದ್ದಾರೆ, ಮುಂಗಾರಿನ ಬೆಳೆಗಳ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಯವರು ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ನೀಡದೇ, ಸಂಪುಟ ವಿಸ್ತರಣೆಯಲ್ಲಿ ಕಾಲಹರಣ ಮಾಡಿದರು. ರೈತರ ವಿಷಯದಲ್ಲಿ ಬಿಜೆಪಿ ಪಕ್ಷ ರಾಜಕಾರಣ ಮಾಡುವುದಿಲ್ಲ, ಸರ್ಕಾರ ರೈತರಿಗೆ ತಕ್ಷಣ ಪರಿಹಾರ ನೀಡಲಿ, ಈಗಲಾದರು ಎಚ್ಚೆತ್ತು ಕೇಂದ್ರಕ್ಕೆ ಶೀಘ್ರ ವರದಿ ಸಲ್ಲಿಸಲಿ ನಂತರ ಸರ್ವ ಪಕ್ಷವನ್ನು ಕೇಂದ್ರಕ್ಕೆ ಕರೆದುಕೊಂಡು ಹೋಗಲಿ.ಶಶಿಕಲಾ ಜೊಲ್ಲೆ, ನಿಪ್ಪಾಣಿ ಶಾಸಕ