ಬಿಜೆಪಿಗೆ ಉಪ್ಪಾರರ ಮತ ಕೇಳುವ ನೈತಿಕತೆ ಇಲ್ಲ: ಶಾಸಕ ಗಣೇಶ್‌ ಪ್ರಸಾದ್‌

| Published : Apr 15 2024, 01:19 AM IST

ಬಿಜೆಪಿಗೆ ಉಪ್ಪಾರರ ಮತ ಕೇಳುವ ನೈತಿಕತೆ ಇಲ್ಲ: ಶಾಸಕ ಗಣೇಶ್‌ ಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಾರ ಸಮಾಜಕ್ಕೆ ರಾಜ್ಯ ವಿಧಾನ ಸಭೆಗೆ ಒಂದೇ ಒಂದು ಟಿಕೆಟ್‌ ನೀಡದ ಬಿಜೆಪಿಗೆ ಉಪ್ಪಾರ ಸಮಾಜದ ಓಟು ಕೇಳುವ ನೈತಿಕತೆ ಇಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಉಪ್ಪಾರ ಸಮಾಜಕ್ಕೆ ರಾಜ್ಯ ವಿಧಾನ ಸಭೆಗೆ ಒಂದೇ ಒಂದು ಟಿಕೆಟ್‌ ನೀಡದ ಬಿಜೆಪಿಗೆ ಉಪ್ಪಾರ ಸಮಾಜದ ಓಟು ಕೇಳುವ ನೈತಿಕತೆ ಇಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಮಲ್ಲಯ್ಯನಪುರ, ಭೀಮನಬೀಡು, ಬೇರಂಬಾಡಿ, ದೇವರಹಳ್ಳಿ, ಪುತ್ತನಪುರ ಗ್ರಾಮದಲ್ಲಿ ಚಾಮರಾಜನಗರ ಮೀಸಲು ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಉಪ್ಪಾರ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ವಿಧಾನಸಭೆಗೆ ಟಿಕೆಟ್‌ ನೀಡಿದೆ ಎಂದರು. ಬಿಜೆಪಿ ರಾಜ್ಯದಲ್ಲಿ ಎಲ್ಲೂ ಟಿಕೆಟ್‌ ನೀಡಿಲ್ಲ.ಸೋಲು, ಗೆಲುವ ಸಹಜ ಉಪ್ಪಾರರಿಗೆ ಟಿಕೆಟ್‌ ನೀಡದ ಬಿಜೆಪಿಗೆ ಉಪ್ಪಾರ ಸಮಾಜ ಓಟು ಹಾಕದೆ ಉಪ್ಪಾರರು ಕಾಂಗ್ರೆಸ್‌ಗೆ ಹೆಚ್ಚಿನ ಓಟು ಹಾಕುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಬೇಕು ಎಂದರು.

ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿ:

ನಾನು ಶಾಸಕನಾಗಿದ್ದೇನೆ ಇನ್ನೂ 4 ವರ್ಷಗಳ ಕಾಲ ಅಧಿಕಾರ ಇದೆ ಸುನೀಲ್‌ ಬೋಸ್‌ ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಸಿಗುವ ಕಾರಣ ಕ್ಷೇತ್ರದ ಎಲ್ಲಾ ವರ್ಗದ ಜನರು ಕಾಂಗ್ರೆಸ್‌ ಗೆ ಹೆಚ್ಚಿನ ಮತ ನೀಡಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಚುನಾವಣೆ ಪೂರ್ವ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ನೀಡಿದ್ದ ಭರವಸೆಯನ್ನು ಈಡೇರಿಸಿದೆ ಹಾಗಾಗಿ ಮಹಿಳೆಯರು ಸೇರಿದಂತೆ ಕ್ಷೇತ್ರದ ಮತದಾರರ ಕೈ ಬೆಂಬಲಿಸಿ ಸುನೀಲ್‌ ಬೋಸ್‌ ಗೆಲ್ಲಿಸಿ ಕೊಡಿ ಎಂದರು.

ಊರು ಅಂದಮೇಲೆ ಪಕ್ಷದ ಕಾರ್ಯಕರ್ತರಲ್ಲಿ ಸಣ್ಣ ಪುಟ್ಟ ಭಿನ್ನಾಬಿಪ್ರಾಯ ಇರಲಿವೆ ಚುನಾವಣೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಕೂತು ಬಗೆ ಹರಿಸಿಕೊಂಡು ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಗೆ ಹೆಚ್ಚಿನ ಮತ ಕೊಡಿಸುವ ಕೆಲಸ ಮಾಡಬೇಕು ಎಂದು ಕೋರಿದರು.

ಬೋಸ್‌ ಹೊಸಬರಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ರಾಜಕಾರಣಕ್ಕೆ ಹೊಸಬರೇನಲ್ಲ. ಬೋಸ್‌ ತಂದೆ ಕಳೆದ ೪೦ ವರ್ಷಗಳಿಂದಲೂ ರಾಜಕಾರಣದಲ್ಲಿದ್ದಾರೆ.ಸುನೀಲ್‌ ಬೋಸ್‌ ಕೂಡ ಸಕ್ರೀಯ ರಾಜಕಾರಣದಲ್ಲಿದ್ದಾರೆ ಹಾಗಾಗಿ ಸುನೀಲ್‌ ಬೋಸ್‌ ರಾಜಕಾರಣದಲ್ಲಿ ಹೊಸಬರಲ್ಲ ಎಂದರು. ಸಮಾರಂಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್‌,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು,ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್‌ಆರ್‌ಎಸ್‌ ರಾಜು, ಮುಖಂಡರಾದ ದೇವರಳ್ಳಿ ಪ್ರಭು,ಬೇರಂಬಾಡಿ ರಾಜೇಶ್‌, ಭೀಮನಬೀಡು ಮಂಜು, ಪುತ್ತನಪುರ ಸುರೇಶ್ ಸೇರಿದಂತೆ ಆಯಾಯ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಮೋದಿ ಮೋಡಿ ಮಾಡಿ ಆಡಳಿತ ನಡೆಸುತ್ತಿದ್ದಾರೆ: ನಂಜುಂಡಪ್ರಸಾದ್‌

ಗುಂಡ್ಲುಪೇಟೆ: ದೇಶದಲ್ಲಿ ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮೋಡಿ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಪ್ರಧಾನಿ ಹೇಳಿದ ಕಪ್ಪು ಹಣ ಬಡವರಿಗೆ ಬರಲಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲಿಲ್ಲ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌ ಗುಡುಗಿದರು.

ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ ೨೦೧೪ ರ ಬಳಿಕ ನರೇಂದ್ರ ಮೋದಿ ಪ್ರಧಾನಿ ಯಾದ ಬಳಿಕ ಬಿಜೆಪಿ ನೀಡಿದ್ದ ಕಪ್ಪು ಹಣ, ಉದ್ಯೋಗ ಸೃಷ್ಠಿ, ರೈತರ ಆದಾಯ ದ್ವಿಗುಣ ಆಗಲಿಲ್ಲ. ಪ್ರಧಾನಿ ಮೋದಿ ಮೋಡಿ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮೋದಿ ಕಣ್‌ ಕಟ್‌ ವಿದ್ಯೆ ಕಲಿತು ದೇಶದ ಜನರನ್ನು ಮರಳು ಮಾಡಿ ಓಟು ಪಡೆದು ಬಡವರಿಗೆ ಅನುಕೂಲ ಮಾಡಲಿಲ್ಲ. ದೇಶ, ವಿದೇಶಗಳಲ್ಲಿ ಪ್ರಚಾರ ಪಡೆದರು ಎಂದು ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ಎಲ್ಲಾ ವರ್ಗದ ಬಡವರ ಪರ ಇದ್ದ ಕಾರಣ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ಬಡವರ ನೆರವಿಗೆ ನಿಂತಿದ್ದಾರೆ.ಸಿದ್ದರಾಮಯ್ಯ ರಂತ ಮುಖ್ಯಮಂತ್ರಿ ಸಿಗೋದು ಕಷ್ಟ ಎಂದರು.

ಹೆದರಲ್ಲ: ಎಚ್.ಎಸ್.ಮಹದೇವಪ್ರಸಾದ್‌ ಕುಟುಂಬ ಕಳೆದ ೧೯೭೮ ರಿಂದಲೂ ಎಲ್ಲಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು, ಗೆಲುವನ್ನು ಕಂಡಿದೆ ಆದರೆ ಗೂಂಡಾಗಿರಿ, ದಬ್ಬಾಳಿಕೆಗೆ ಹೆದರಲ್ಲ ಎಂದು ಗುಡುಗಿದರು.