ಶಾಸಕರ ಅಮಾನತಿಗೆ ಬಿಜೆಪಿ ತೀವ್ರ ಆಕ್ರೋಶ

| Published : Mar 25 2025, 12:48 AM IST

ಸಾರಾಂಶ

ಕುಂದಾಣ: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಕ್ರಮ ಮತ್ತು ಮೀಸಲಾತಿ ನೀಡುವ ಮಸೂದೆ ಯಾವುದೇ ಚರ್ಚೆ ಇಲ್ಲದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕುಂದಾಣ: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಕ್ರಮ ಮತ್ತು ಮೀಸಲಾತಿ ನೀಡುವ ಮಸೂದೆ ಯಾವುದೇ ಚರ್ಚೆ ಇಲ್ಲದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿಯ ೧೮ ಶಾಸಕರ ಅಮಾನತು, ಮುಸ್ಲಿಮರಿಗೆ ಮೀಸಲಾತಿ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡುವೆಯೇ ಮಸೂದೆ ಅಂಗೀಕಾರ ಸಮಂಜಸವಲ್ಲ. ಈ ಮಸೂದೆ ಅಸಂವಿಧಾನಿಕವಾದದು ಎಂದು ವಿಪಕ್ಷ ನಾಯಕರು ವಿರೋಧಿಸಿ, ಪ್ರತಿಭಟನೆ, ಗದ್ದಲದ ನಡುವೆ ಮುಸ್ಲಿಮರಿಗೆ ೨ ಕೋಟಿ ವರೆಗಿನ ಸರ್ಕಾರಿ ಗುತ್ತಿಗೆ ಕಾಮಗಾರಿ ಹಾಗೂ ೧ ಕೋಟಿವರೆಗೆ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (ತಿದ್ದುಪಡಿ) ವಿಧೇಯಕವನ್ನು ಹಿಂದಕ್ಕೆ ಪಡೆಯುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್‌ಗೌಡ ಮಾತನಾಡಿ, ಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರ, ರೈತರು ತಮ್ಮ ಜಮೀನಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಳ್ಳುವ ವೆಚ್ಚವನ್ನು ೨ ಲಕ್ಷಕ್ಕೆ ಏರಿಸಿದೆ. ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ, ಸ್ಟಾಂಪ್ ಶುಲ್ಕ, ಮದ್ಯದ ದರಗಳನ್ನು ಏರಿಕೆ ಮಾಡಿದೆ. ದಿನೇದಿನೇ ಹೊಸ ಹೊಸ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಜನರ ಬದುಕು ಸಾಗಿಸಲು ಕಷ್ಟವಾಗಿದೆ. ಕೂಡಲೇ ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆ ಇಳಿಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ನಿರ್ಮಲ, ತಾಲೂಕು ಅಧ್ಯಕ್ಷೆ ವಿಜಯ, ಬಿಜೆಪಿ ಮುಖಂಡರಾದ ದೇ.ಸು.ನಾಗರಾಜ್, ಆರ್.ಕೆ.ನಂಜೇಗೌಡ, ಪ್ರಭು, ನಾಗೇಶ್, ನಾಗವೇಣಿ, ಪುನೀತಾ, ನಯನ, ಸುರೇಶ್ ಆಚಾರ್, ಸಿದ್ದಲಿಂಗಪ್ಪ, ವಿಜಯಕುಮಾರ್, ಭಗವಾನ್ ಹೆಗಡೆ, ರಾಘವ, ವಿಜಯಪುರ ವೆಂಕಟೇಶ್ ಸೇರಿದಂತೆ ೪ ತಾಲೂಕಿನ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

(ಫೋಟೋ ಕ್ಯಾಪ್ಷನ್‌)

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿಯ ೧೮ ಶಾಸಕರ ಅಮಾನತು, ಮುಸ್ಲಿಮರಿಗೆ ಮೀಸಲಾತಿ ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.