ಜೆಡಿಎಸ್ ಪ್ರತಿಭಟನೆಯಲ್ಲಿ ಬಿಜೆಪಿ ಧ್ವಜ ಬಳಕೆ

| Published : Oct 09 2025, 02:00 AM IST

ಸಾರಾಂಶ

ಅರಸೀಕೆರೆ ತಾಲೂಕಿನಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಪ್ರತಿಭಟನೆಯಲ್ಲಿ ಬಿಜೆಪಿ ಧ್ವಜ ಮತ್ತು ಟೋಪಿಯನ್ನು ಬಳಸಿರುವ ಘಟನೆಗೆ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ ಯತೀಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಅವಿನಾಶ್ ನಾಯ್ಡು ಮಾತನಾಡಿ, ಸಂತೋಷ್ ಅವರ ಜೊತೆ ತಿರುಗಾಡುವ ಗಿರೀಶ್, ಶಿವನ್‌ ರಾಜ್ ಮುಂತಾದವರಿಗೆ ಈಗಾಗಲೇ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಮುಂದೆ ಯಾರೇ ಅವರ ಜೊತೆ ಭಾಗವಹಿಸಿದರೂ ಪಕ್ಷ ವಿರೋಧಿ ಕ್ರಮ ಕೈಗೊಳ್ಳಲಾಗುತ್ತದೆ. ಜೆಡಿಎಸ್‌ ಅವರಿಗೆ ತಮ್ಮ ಬೆಂಬಲ ಸಾಕಾಗದೇ, ನಮ್ಮ ಬಿಜೆಪಿ ಬಾವುಟವನ್ನು ಬಳಸಿ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಭಾಗವಹಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಪ್ರತಿಭಟನೆಯಲ್ಲಿ ಬಿಜೆಪಿ ಧ್ವಜ ಮತ್ತು ಟೋಪಿಯನ್ನು ಬಳಸಿರುವ ಘಟನೆಗೆ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ ಯತೀಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಸಂತೋಷ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಬಾವುಟ ಮತ್ತು ಟೋಪಿಯನ್ನು ಬಳಕೆ ಮಾಡಲಾಗಿದೆ. ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಅಥವಾ ಆಹ್ವಾನವಿಲ್ಲ. ಸಂತೋಷ್ ಅವರ ಜೊತೆ ಓಡಾಡುವವರು ನಮ್ಮ ಪಕ್ಷದವರಲ್ಲ. ಅವರು ತಕ್ಷಣ ಈ ರೀತಿಯ ಧ್ವಜ ಬಳಕೆಯನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಧ್ವಜ ಹಾಗೂ ಟೋಪಿಯನ್ನು ಹಾಕಿಕೊಂಡು ಕೂತಿದ್ದವರು ನಮ್ಮ ಕಾರ್ಯಕರ್ತರಲ್ಲ. ಪಕ್ಷದಲ್ಲಿದ್ದಾಗ ಧ್ವಜ ಸುಟ್ಟಿದ್ದವರು, ಈಗ ಅದೇ ಧ್ವಜವನ್ನು ಉಪಯೋಗಿಸಿ ಪ್ರತಿಭಟನೆ ನಡೆಸುವುದು ಸ್ವಾರ್ಥಪರ ನಡೆ ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಅವಿನಾಶ್ ನಾಯ್ಡು ಮಾತನಾಡಿ, ಸಂತೋಷ್ ಅವರ ಜೊತೆ ತಿರುಗಾಡುವ ಗಿರೀಶ್, ಶಿವನ್‌ ರಾಜ್ ಮುಂತಾದವರಿಗೆ ಈಗಾಗಲೇ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಮುಂದೆ ಯಾರೇ ಅವರ ಜೊತೆ ಭಾಗವಹಿಸಿದರೂ ಪಕ್ಷ ವಿರೋಧಿ ಕ್ರಮ ಕೈಗೊಳ್ಳಲಾಗುತ್ತದೆ. ಜೆಡಿಎಸ್‌ ಅವರಿಗೆ ತಮ್ಮ ಬೆಂಬಲ ಸಾಕಾಗದೇ, ನಮ್ಮ ಬಿಜೆಪಿ ಬಾವುಟವನ್ನು ಬಳಸಿ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಭಾಗವಹಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ದುಮ್ಮೇನಹಳ್ಳಿ ಗಂಗಾಧರ್ ಮಾತನಾಡಿ ನಮ್ಮ ಪಕ್ಷದ ಚಿಹ್ನೆಯನ್ನು ಅನುಮತಿ ಇಲ್ಲದೇ ಬಳಸುವುದು ಶೋಭೆ ತರುವುದಿಲ್ಲ. ಯಾವುದೇ ಪ್ರತಿಭಟನೆಯಲ್ಲಿ ಬೆಂಬಲ ಬೇಕಾದರೆ ನಮ್ಮ ನಗರ ಮತ್ತು ಗ್ರಾಮೀಣ ಘಟಕಗಳೊಂದಿಗೆ ಸಂಪರ್ಕಿಸಬೇಕು. ಸಂಘಟನೆ ಎಂದರೆ ಶಿಸ್ತಿನ ಸಂಕೇತ. ನಮ್ಮ ಪಕ್ಷದ ಚಿಹ್ನೆಯನ್ನು ಸ್ವಂತ ಪ್ರಯೋಜನಕ್ಕಾಗಿ ಬಳಸುವುದು ರಾಜಕೀಯ ಶಿಷ್ಟಾಚಾರಕ್ಕೆ ವಿರುದ್ಧ ಎಂದು ಹೇಳಿದರು. ನಿಮಗೆ ಅಸಮಾಧಾನವಿದ್ದರೆ ಪರಸ್ಪರ ಮಾತನಾಡಿ ಪರಿಹಾರ ಹುಡುಕಬೇಕು. ಜಿಲ್ಲಾಧ್ಯಕ್ಷರ ಸೂಚನೆಯಂತೆ ನಾವು ಈ ಸುದ್ದಿಗೋಷ್ಠಿಯನ್ನು ಕರೆದಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಧ್ವಜ ದುರ್ಬಳಕೆ ನಡೆಯಬಾರದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಂಪುರ ಸುನಿಲ್ ಶಾಸ್ತ್ರಿ ಮಂಜುಕುಮಾರ್, ಬಾಣಾವರ ಕಿರಣ್ ವಿರುಪಾಕ್ಷ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸಿಂಧು, ಮಾಜಿ ಅಧ್ಯಕ್ಷ ಪುರುಷೋತ್ತಮ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

12ನೇ ತಾರೀಖು ಕರಿಯಮ್ಮ ದೇವಸ್ಥಾನದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಲಾಗಿರುವ ಪಥ ಸಂಚಲನ ಕಾರ್ಯಕ್ರಮಕ್ಕೆ ನಾಗರಿಕರನ್ನು ಆಹ್ವಾನಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.