ಸಾರಾಂಶ
ಬಡವರು, ಶ್ರೀಮಂತರು ಒಂದೇ ಎಂಬ ಭಾವನೆಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಆದರೆ ಬಿಜೆಪಿ ಜಾತಿ, ಮತ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಆಳುತ್ತಿದೆ.
ಸಸನವಲಗುಂದ:
ಬಡವರು, ಶ್ರೀಮಂತರು ಒಂದೇ ಎಂಬ ಭಾವನೆಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಆದರೆ ಬಿಜೆಪಿ ಜಾತಿ, ಮತ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಆಳುತ್ತಿದೆ. ಇದಕ್ಕೆ ಈ ಚುನಾವಣೆಯಲ್ಲಿ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕೆಂದು ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.ಪಟ್ಟಣದ ಹೊರವಲಯದಲ್ಲಿ ನಡೆದ ಧಾರವಾಡ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರು
ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಪಕ್ಷದ ಶಾಸಕರು, ಮುಖಂಡರ ನೇತೃತ್ವದಲ್ಲಿ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಿಕೊಂಡು ಪ್ರಚಾರ ನಡೆಸಲಾಗುವುದು ಎಂದು ಹೇಳಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಧಾರವಾಡ ಕ್ಷೇತ್ರದಿಂದ ಕೋಳಿವಾಡದ ಜಿ.ಕೆ. ನಾಯ್ಕರು ಗೆದ್ದ ನಂತರ ಮತ್ಯಾರೂ ಗೆಲುವು ಸಾಧಿಸಿಲ್ಲ. ಹೀಗಾಗಿ ವಿನೋದ ಅಸೂಟಿ ಅವರನ್ನು ಗೆಲ್ಲಿಸಬೇಕಿದೆ. ಆದ್ದರಿಂದ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿಯೇ ಪಕ್ಷಕ್ಕೆ ಮತ ಹಾಕುವಂತೆ ಎಲ್ಲರನ್ನು ಒಲಿಸಬೇಕು ಹಾಗೂ ಅಭ್ಯರ್ಥಿ ನೀವೇ ಎಂದು ಬಿಂಬಿಸಿಕೊಂಡು ಮತ ಹಾಕಿಸಬೇಕು ಎಂದು ಸಲಹೆ ನೀಡಿದರು.ಮುಖಂಡ ಪಿ.ಕೆ. ನೀರಲಕಟ್ಟಿ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ಕಾಂಗ್ರೆಸ್ಸಿನ ಕಟ್ಟಾಳು ಆಗಬೇಕು. ವಿನೋದ ಅವರ ಸೇವೆ ಮೆಚ್ಚಿ ಹೈಕಮಾಂಡ್ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಲು ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಬಿಜೆಪಿ ಜಾತಿಯತೆ ಮತ್ತು ಮೋದಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದೆ. ನಾವು ಬಸವಣ್ಣ, ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಹೇಳಿ ಅವರ ದಾರಿದೀಪದಲ್ಲಿ ನಡೆಯಬೇಕು ಎಂದ ಅವರು, 20 ವರ್ಷ ಕಳೆದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಮಹದಾಯಿ ನೀರು ಹರಿಸಲು ಸಾಧ್ಯವಾಗಿಲ್ಲ. ವಿನೋದ ಗೆಲ್ಲಿಸಿದರೆ ಯೋಜನೆ ಜಾರಿಗೊಳಿಸಲಿದ್ದಾರೆ ಎಂದರು.ಈ ವೇಳೆ ಪ್ರಕಾಶಗೌಡ ಪಾಟೀಲ, ವ್ಹಿ.ಪಿ. ಪಾಟೀಲ, ಶಾಂತವ್ವ ಗುಜ್ಜಳ, ವರ್ಧಮಾನಗೌಡ ಹಿರೇಗೌಡರ, ವಿಜಯಕುಮಾರ ಪಾಟೀಲ, ಬಾಪುಗೌಡ ಪಾಟೀಲ, ರೋಣದ, ಆರ್.ಎಚ್. ಕೋನರಡ್ಡಿ, ಬಿ.ಡಿ. ಅಂದಾನಗೌಡ್ರ, ಮಂಜುನಾಥ ಮಾಯಣ್ಣವರ, ಮಂಜುನಾಥ ಜಾಧವ, ಜೀವನ ಪವಾರ, ಸುಲೇಮಾನ ನಾಶಿಪುಡಿ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲೂಕು ಮುಖಂಡರು, ಕಾರ್ಯಕರ್ತರು ಇದ್ದರು.