ಮಾಜಿ ಪ್ರಧಾನಿ ನೆಹರು ಕುಟುಂಬದ ವಿರುದ್ಧ ಬಿಜೆಪಿಯ ದ್ವೇಷದ ವರ್ತನೆ ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಕನ್ನಡಪ್ರಭ ವಾರ್ತೆ,ಚಿತ್ರದುರ್ಗ
ಮಾಜಿ ಪ್ರಧಾನಿ ನೆಹರು ಕುಟುಂಬದ ವಿರುದ್ಧ ಬಿಜೆಪಿಯ ದ್ವೇಷದ ವರ್ತನೆ ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.ಬಿಜೆಪಿ ಸೇಡಿನ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದ್ವೆಷ, ಸೇಡುತನ ಕೆಟ್ಟದ್ದು, ಅದು ತನ್ನನ್ನೇ ಸುಡಲಿದೆ ಎಂಬ ಸತ್ಯವನ್ನು ಬಿಜೆಪಿ ಅರಿತುಕೊಳ್ಳಬೇಕು. ಆದರೆ, ಅಧಿಕಾರದ ಮದ, ಸರ್ವಾಧಿಕಾರಿ ಧೋರಣೆ, ವಾಮಮಾರ್ಗದಲ್ಲಿ ಅಧಿಕಾರವನ್ನು ತನ್ನಲ್ಲಿ ಇಟ್ಟುಕೊಳ್ಳುವ ಬಿಜೆಪಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಹುತೇಕ ತನಿಖಾ ಸಂಸ್ಥೆಗಳನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಂಡು, ಪ್ರತಿಪಕ್ಷದವರ ಮೇಲೆ ದಾಳಿ ನಡೆಸಲು ಸೂಚಿಸುತ್ತಿರುವ ಬಿಜೆಪಿ, ತನ್ನ ವರ್ತನೆ ಬದಲಾಯಿಸಿಕೊಳ್ಳದಿದ್ದರೇ ಜನದಂಗೆ ಖಚಿತ ಎಂದು ಎಚ್ಚರಿಸಿದರು.ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಾರ್ವಜನಿಕ ಸಂಸ್ಥೆ ಆಗಿದ್ದು, ಪ್ರಗತಿಗೆ ನೆಹರು ಕುಟುಂಬದ ಎಲ್ಲರೂ ಶ್ರಮಿಸಿದ್ದಾರೆ. ಆದರೆ, ಇದನ್ನೇ ಮಹಾಪರಾಧವೆಂಬAತೆ ಅವರ ವಿರುದ್ಧ ತನಿಖೆ ಸಂಸ್ಥೆಗಳನ್ನು ಬಿಟ್ಟು ಸುಳ್ಳು ಪ್ರಕರಣ ದಾಖಲಿಸಿ ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಬಿಜೆಪಿ ಮಾಡಿದೆ ಎಂದರು.
ಬಿಜೆಪಿಯ ಈ ನಡೆ ವಿರುದ್ಧ ಈಗಾಗಲೇ ಕೋರ್ಟ್ ಛಿಮಾರಿ ಹಾಕಿದೆ. ಸುಳ್ಳು, ದ್ವೇಷದ ಬಿಜೆಪಿಯ ಗುಣಕ್ಕೆ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ. ಆದರೂ ಬಿಜೆಪಿ ನಾಯಕರಿಗೆ ಬುದ್ಧಿ ಬಂದಿಲ್ಲ. ದ್ವೇಷ, ಸೇಡನ್ನು ಮತ್ತಷ್ಟು ಮುಂದುವರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮತಗಳ್ಳತನ ಸೇರಿ ವಿವಿಧ ವಿಷಯಗಳಲ್ಲಿ ಧ್ವನಿಯೆತ್ತಿ ಜನಪರ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ವಾಮಮಾರ್ಗದಲ್ಲಿ ಬಿಜೆಪಿ ಸಾಗುತ್ತಿದೆ. ಇದೊಂದು ಕೆಟ್ಟ, ದ್ವೇಷದ ರಾಜಕಾರಣ. ಈಗಾಗಲೇ ಎಲ್ಲ ಕ್ಷೇತ್ರಗಳನ್ನು ತಾನು ಹೇಳದಂತೆ ಕುಣಿಯುವ ರೀತಿ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ, ನ್ಯಾಯಾಲಯದ ತೀರ್ಪುಗಳು ಸದಾ ಮಂಗಳಾರತಿ ಮಾಡುತ್ತಿವೆ. ಪ್ರತಿಪಕ್ಷಗಳು ಹಾಗೂ ಬಡ ಜನರ ಬದುಕು ಕೋರ್ಟ್ ಇರುವ ಕಾರಣ ಉಳಿದಿದೆ. ಇಲ್ಲದಿದ್ದರೆ ಪ್ರತಿಪಕ್ಷದವರು ಜೈಲು, ಜನರು ಬೀದಿಗೆ ಬೀಳಬೇಕಾಗಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಷನಲ್ ಹೆರಾಲ್ಡ್ ಸಂಸ್ಥೆ ವಿಷಯದಲ್ಲಿ ಸೋನಿಯಾ, ರಾಹುಲ್ ಗಾಂಧಿ ವಿರುದ್ಧದ ತನಿಖಾ ಸಂಸ್ಥೆ ವರದಿಯನ್ನು ತಿರಸ್ಕರಿಸುವ ಮೂಲಕ ನೆಹರು ಕುಟುಂಬದ ಘನತೆ, ಗೌರವವನ್ನು ನ್ಯಾಯಾಲಯ ರಕ್ಷಿಸಿದೆ. ಈಗಾಲದರೂ ಬಿಜೆಪಿ ಬುದ್ಧಿ ಕಲಿತು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಬಡ ಜನರ ಪರವಾಗಿ ಅಭಿವೃದ್ಧಿಗಾಗಿ ಯೋಜನೆ ರೂಪಿಸದೆ ದ್ವೇಷದ ರಾಜಕಾರಣ ಮುಂದುವರಿಸಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಕಾಂಗ್ರೆಸ್ ಕಾರ್ಯಕರ್ತರು ದಂಗೆ ಎದ್ದರೇ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಾವು ಶಾಂತಿ ಮಾರ್ಗದಲ್ಲಿ ನಂಬಿಕೆ ಇಟ್ಟವರು. ಆದ್ದರಿಂದಲೇ ಇಂದು ಶಾಂತಿಯುತ, ಪ್ರಜಾಪ್ರಭುತ್ವದ ಹಾದಿಯಲ್ಲಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದೇವೆ. ಕೋರ್ಟ್ ತೀರ್ಪು ಕೇಂದ್ರ ಸರ್ಕಾರಕ್ಕೆ ಮುಖಭಂಗವನ್ನುಂಟು ಮಾಡಿದೆ. ಆದ್ದರಿಂದ ಸಂಬAಧಿಸಿದ ಸಚಿವರು, ಷಡ್ಯಂತರ ನಡೆಸಿದ ಬಿಜೆಪಿ ನಾಯಕರು ಕೂಡಲೇ ರಾಜೀನಾಮೆ ನೀಡಿ ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬಿಜೆಪಿ ಕಾರ್ಯಾಲದಯವರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು, ಭಾಜಪ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದಾಗ ಪೊಲೀಸರು ತಡೆದರು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಎಚ್.ಮಂಜಪ್ಪ, ಡಿ.ಎನ್.ಮೈಲಾರಪ್ಪ, ಮುಖಂಡರಾದ ಶಿವಣ್ಣ, ಗೀತಾನಂದಿನಿಗೌಡ, ಡಿ.ಆರ್.ಲೋಕೇಶ್ವರಪ್ಪ, ಆರ್.ಕೆ.ಸರ್ಧಾರ್, ಓ.ಶಂಕರ್, ಕೆ.ಪಿ.ಸಂಪತ್ಕುಮಾರ್, ಸೈಯದ್ ಮೋಹಿದ್ದೀನ್ ಚೋಟು, ಜಿ.ಎಸ್.ಕುಮಾರಗೌಡ, ಎನ್.ಡಿ.ಕುಮಾರ್, ಕಾರೇಹಳ್ಳಿ ಉಲ್ಲಾಸ್, ಸುದರ್ಶನ್, ಬೋರೇನಹಳ್ಳಿ ಚೇತನ್, ಸೈಯದ್ ಖುದ್ದೂಸ್, ಹೆಚ್.ಅಂಜಿನಪ್ಪ, ಆಶಾ, ಅನೀಸ್, ಅಶ್ವಕ್ ಅಲಿ, ಪ್ರಕಾಶ್, ಲಕ್ಷ್ಮಿಕಾಂತ್, ಅನಿಲ್ ಕೋಟಿ, ಎಸ್.ಎನ್.ರವಿಕುಮಾರ್, ಜಿ.ವಿ.ಮಧುಗೌಡ, ಬಸವರಾಜ್, ಶಿವಣ್ಣ, ತಿಪ್ಪೇಸ್ವಾಮಿ ಇತರರು ಪಾಲ್ಗೊಂಡಿದ್ದರು.