ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದೇಶದಲ್ಲಿನ ಕೋಟ್ಯಾಂತರ ಜನ ದಿನ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಮನರೇಗಾ ಯೋಜನೆ ಕೈಬಿಟ್ಟು ವಿಬಿ ಜಿ ರಾಮ್ ಜಿ ತಂದು ಬಿಜೆಪಿ, ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಮೇಲೆ ಹಲ್ಲೆ ಮಾಡಿಲ್ಲ. ಬದಲಾಗಿ ಮನರೇಗಾವನ್ನು ವಿಬಿ ಜಿ ರಾಮ್ ಜಿಗೆ ಬದಲಾಯಿಸಲು ಬಿಜೆಪಿ ಮತ್ತು ಜೆಡಿಎಸ್ ಸೇರಿಕೊಂಡು ಕುತಂತ್ರ ಮಾಡಿ ಶ್ರಮಿಕರ, ರೈತರ, ಬಡಜನರ ಹೊಟ್ಟೆ ಪಾಡಿನ ಮೇಲೆ ಹಲ್ಲೆ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್ದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಅಗಲಗುರ್ಕಿ ಸಮೀಪದ ವೇದಿಕೆಯಲ್ಲಿ ಸೋಮವಾರ ನಡೆದ ಅಖಿಲ ಭಾರತ ಮಟ್ಟದ ನರೇಗಾ ಬಜಾವ್ ಆಂದೋಲನ ಕಾರ್ಯಕ್ರಮಕ್ಕೆ ಸನಿಕೆಯಿಂದ ಮಣ್ಣು ಎತ್ತಿ ಬಾಣಲೆಗೆ ಸುರಿದು ತಲೆಯ ಮೇಲೆ ಹೊರುವ ಮೂಲಕ ಚಾಲನೆ ನೀಡಿ ಮಾತನಾಡಿ, ಈ ವಿಚಾರದಲ್ಲಿ ದೇಶದ ಜನರಿಗೆ ಉದ್ಯೋಗಕ್ಕೆ ಸಹಾಯವಾಗಲಿ ಎಂದು ಈ ಯೋಜನೆಯನ್ನು ಮನಮೋಹನ್ ಸಿಂಗ್ ಮೂಲಕ ಸೋನಿಯಾ ಗಾಂಧಿ ಆರಂಭಿಸಿದರು ಎಂದರು.ಈ ಹೊಸ ಕಾನೂನು ಬಿಜೆಪಿ ಚಾಲ್ತಿಗೆ ತಂದಾಗ ಅವರ ಮನಸ್ಥಿತಿ ಹೇಗಿದೆ ಅಂತ ಅರ್ಥ ಆಯ್ತು, ಅವರಿಗೆ ಬಡವರು ಅನುಕೂಲವಾಗಿರೋದು ಇಷ್ಟ ಇಲ್ಲ. ಆದರೆ ಕಾಂಗ್ರೆಸ್ ಮನಸ್ಥಿತಿ ಬೇರೆಯೇ ಇದೆ. ಹಿಂದುಳಿದವರು, ಪರಿಶಿಷ್ಟರ, ಬಡವರು ಎಲ್ಲರಗೂ ನ್ಯಾಯ ಕೊಡಬೇಕು ಅನ್ನೋದು ಕಾಂಗ್ರೆಸ್ ಯೋಜನೆ. ಬಿಜೆಪಿ ಜೆಡಿಎಸ್ ಸೇರಿ ಗಾಂಧಿ ಅವರ ಹೆಸರನ್ನು ಯಾಕೆ ತೆಗೆದಿದ್ದಾರೆ ಅಂತ ದೇಶದ ದುಡಿಯುವ ಜನತೆ ಪ್ರಶ್ನೆ ಮಾಡಬೇಕು. 11 ಕೋಟಿ ಜನ ನರೇಗಾದಡಿ ದುಡಿಯುತ್ತಿದ್ದಾರೆ. 55 ಕೋಟಿ ಜನರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಅವರ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತಿದ್ದಾರೆ, ಅನ್ನವನ್ನು ಯಾಕೆ ಕಿತ್ತುಕೊಳ್ತಿದ್ದಾರೆ ಅಂತ ಪ್ರಶ್ನೆ ಮಾಡಬೇಕು ಎಂದರು.
ಹಿಂದುಳಿದ ವರ್ಗದವರ, ಬುಡಕಟ್ಟು ಜನರ ದುಡಿಯುವ ಹಕ್ಕನ್ನು ಯಾಕೆ ಕುಸಿದುಕೊಂಡರು ಅಂತ ಪ್ರಶ್ನೆ ಮಾಡಬೇಕು. ದೇಶದ ಹಿಂದೂ. ಮುಸಲ್ಮಾನ, ಕ್ರೈಸ್ತರ ದುಡಿಯುವ ಹಕ್ಕನ್ನು ಯಾಕೆ ಕಿತ್ತುಕೊಂಡರು ಅಂತ ಪ್ರಶ್ನೆ ಮಾಡಬೇಕು. ಪ್ರತಿಯೊಬ್ಬರೂ ಬಿಜೆಪಿ ಜೆಡಿಎಸ್ ನಾಯಕರನ್ನು ಪ್ರಶ್ನೆ ಮಾಡಬೇಕು ಗ್ರಾಮ ಪಂಚಾಯಿತಿ ಯಿಂದ ಲೋಕಸಭೆಯವರೆಗಿನ ನಾಯಕರನ್ನು ಪ್ರಶ್ನೆ ಮಾಡಬೇಕು. ದೆಹಲಿಯಲ್ಲಿ ಕೂತು ಹಳ್ಳಿಯಲ್ಲಿ ಆಗುವ ಯೋಜನೆಯನ್ನು ಅವರು ತೀರ್ಮಾನ ಮಾಡ್ತಾರಂತೆ. ದೆಹಲಿಯಲ್ಲಿರೋ ಅಧಿಕಾರಿಗಳಿಗೆ ಗಮನ ಇದ್ಯಾ? ಬುದ್ದಿ ಇದ್ಯಾ? ಕರ್ನಾಟಕದ 7.5 ಲಕ್ಷ ಹಳ್ಳಿ ಗಳಲ್ಲಿ ಏನಾಗ್ಬೇಕು ಅಂತ ಅವರಿಗೆ ಹೇಗೆ ಗೊತ್ತಾಗುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ಟ್ರಂಪ್ ಜೊತೆ ಮತ್ತೊಂದು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿರೋ ರೈತರು, ಬಡವರು, ಶ್ರಮಿಕರಿಗೆ ಅನ್ಯಾಯ ಮಾಡುತ್ತೆ ಈ ಒಡಂಬಡಿಕೆ. ನಮ್ಮ ದೇಶದ ರೈತರು ಬೆಳೆದ ಪದಾರ್ಥಗಳ ಏನಾಗಬೇಕು ಹೇಳಿ?ಹೊಸ ಒಡಂಬಡಿಕೆಯಿಂದ ಇದಕ್ಕೂ ಸಮಸ್ಯೆ ಇದೆ. ನಮ್ಮ ರಾಜ್ಯದ ರೈತರು ಬೆಳೆದ ಪದಾರ್ಥಗಳ ಎಲ್ಲಿಗೆ ಕೊಡಬೇಕು?. ಹಣ್ಣು, ತರಕಾರಿ ವಿವಿಧ ದೇಶಗಳಿಂದ ತರೆಸಿಕೊಂಡರೇ ನಮ್ಮ ರೈತರು ಬೆಳೆದಿದ್ದನ್ನು ಎಲ್ಲಿಗೆ ಹಾಕಬೇಕು?. ಕೇಂದ್ರ ಸರ್ಕಾರದ ಒಪ್ಪಂದದಿಂದಾಗಿ 5 ವರ್ಷದಲ್ಲಿ 45 ಲಕ್ಷ ಕೋಟಿ ಪದಾರ್ಥ ಖರೀದಿ ಮಾಡ್ತೀವಿ. ವರ್ಷಕ್ಕೆ 9 ಲಕ್ಷ ಕೋಟಿ ಪದಾರ್ಥ ತರೆಸಿಕೊಳ್ತೀವಿ. ಹೀಗಾದ್ರೆ ನಮ್ಮ ರೈತರು ಬದುಕೋದು ಬೇಡ್ವಾ? ಎಂದು ಪ್ರಶ್ನಿಸಿದರು,
ಈ ವೇಳೆ ಎಐಸಿಸಿ ಕಾರ್ಯದರ್ಶಿಅಭಿಷೇಕ್ ದತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಡಾ.ಎಂ.ಸಿ.ಸುಧಾಕರ್, ಕೃಷ್ಣ ಬೈರೇಗೌಡ, ಭೋಸರಾಜು, ಕೆ.ಹೆಚ್.ಮುನಿಯಪ್ಪ, ಬೈರತಿ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಪ್ರದೀಪ್ ಈಶ್ವರ್, ಕೆ.ಎಚ್.ಪುಟ್ಟಸ್ವಾಮಿಗೌಡ, ರೂಪಾಶಶಿಧರ್, ಎಸ್.ಎನ್.ನಾರಾಯಣಸ್ವಾಮಿ, ಎಂಎಲ್ ಸಿ ಗಳಾದ ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ, ಸಲೀಂ ಅಹಮದ್, ಮಾಜಿ ಸಚಿವ ಎಚ್.ಆಂಜನೇಯ, ತನ್ವೀರ್ ಸೇಠ್,ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಎಸ್.ಎಂ.ಮುನಿಯಪ್ಪ. ಅನುಸೂಯಮ್ಮ,ವೆಂಕಟರಮಣಯ್ಯ, ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಂದ್ರಶೇಖರ್, ಡಾ.ಎಚ್.ನರಸಿಂಹಯ್ಯ ಎನ್.ಎಚ್ ಶಿವಶಂಕರರೆಡ್ಡಿ, ಎನ್. ಸಂಪಂಗಿ, ಗೊಲ್ಲಹಳ್ಳಿ ಶಿವಪ್ರಸಾದ್, ಕೆ.ಎನ್. ಕೇಶವರೆಡ್ಡಿ, ಆಂಜಿನಪ್ಪ, ಯಲುವಹಳ್ಳಿ ಎನ್. ರಮೇಶ್, ಬಿ.ಜಿ. ಗಣೇಶ್, ಎಂ.ಎಸ್.ರಕ್ಷಾರಾಮಯ್ಯ, ಮೊಹಮದ್ ನಲಪಾಡ್ ಇದ್ದರು.
ಸಿಕೆಬಿ-2 ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಅಗಲಗುರ್ಕಿ ಸಮೀಪದ ವೇದಿಕೆಯಲ್ಲಿ ನಡೆದ ಅಖಿಲ ಭಾರತ ಮಟ್ಟದ ನರೇಗಾ ಬಜಾವ್ ಆಂದೋಲನ ಕಾರ್ಯಕ್ರಮಕ್ಕೆ ರಣ್ದೀಪ್ ಸಿಂಗ್ ಸುರ್ಜೇವಾಲ ಅವರು ಸನಿಕೆಯಿಂದ ಮಣ್ಣು ಎತ್ತಿ ಬಾಣಲೆಗೆ ಸುರಿಯುವ ಮೂಲಕ ಚಾಲನೆ ನೀಡಿದರು