ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ವಿರೋಧಿಸಿ ಹಾಗೂ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಹತ್ಯೆ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಹಾಗೂ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಹತ್ಯೆ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ಪ್ರತಿಭಟನೆ ನಡೆಯಿತು.ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ನೀಡಿರುವ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ಸಮಾಜದಲ್ಲಿ ಆಗುವ ಅನಾಹುತಗಳ ಬಗ್ಗೆ ಮಾತನಾಡುವ ಹಕ್ಕು ಕಿತ್ತುಕೊಳ್ಳುವ ಹುನ್ನಾರವೂ ಇದರಲ್ಲಿ ಅಡಗಿದೆ ಎಂದರು.
ಪೊಲೀಸರು ಮತ್ತು ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿ ಎಂದು ಮುಂಚಿತವಾಗಿ ಬಂಧಿಸುವ ಸಾಧ್ಯತೆ ಬಗ್ಗೆ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಅಂಶ ಪ್ರತಿಭಟನೆ, ಸಮಾರಂಭ, ಸಮಾವೇಶಗಳನ್ನು ಹತ್ತಿಕ್ಕಲು ಬಳಕೆ ಆಗುತ್ತದೆ. ಅನ್ಯಾಯವಾದಾಗ ಹಾಗೂ ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ಪ್ರತಿಭಟಿಸಲು ನಿಂತರೆ ಭಾವನಾತ್ಮಕ ಹಾನಿ ಎಂದು ಪ್ರಕರಣ ದಾಖಲಿಸುವ ಸಾಧ್ಯತೆಯಿದೆ. ಮಾಧ್ಯಮಗಳ ಸ್ವಾತಂತ್ರ್ಯ ಕಡಿಮೆ ಮಾಡಲಾಗಿದೆ. ದ್ವೇಷ ಭಾಷಣ ಮಸೂದೆಯ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ವಿಪಕ್ಷ, ಸಮಾಜವನ್ನು ಭಯಪಡಿಸಲು ಪ್ರಯತ್ನಿಸುತ್ತಿದೆ ಎಂದ ಅವರು, ಭಾರತ ದೇಶ ಸಹಿಷ್ಣುತೆ ಹಾಗೂ ಸಹಬಾಳ್ವೆ ಸಾರುವ ದೇಶ. ಎಲ್ಲರನ್ನೂ ತನ್ನ ಒಡಲಿನಲ್ಲಿಟ್ಟು ಪೋಷಿಸುತ್ತದೆ. ಆದರೆ ಬಾಂಗ್ಲಾದೇಶ ಅಲ್ಲಿನ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಮಾಡುತ್ತ ಹತ್ಯೆ ಮಾಡುತ್ತಿರುವುದು ಖಂಡನೀಯ. ಹಿಂದೂಗಳು ಸಹಿಷ್ಣುತೆ ಕೆದಕುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.ನಗರದ ಶಿವಾನಂದ ಜಿನ್ ನಿಂದ ಪ್ರಾರಂಭವಾದ ಪ್ರತಿಭಟನಾ ಮೇರವಣಿಗೆ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರು, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಮುತ್ತಣ್ಣ ಬೇಣ್ಣೂರ, ಶಿವಾನಂದ ಟವಳಿ, ರಾಜು ಮುದೇನೂರ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಸತ್ಯನಾರಾಯಣ ಹೆಮಾದ್ರಿ, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸುನಂದಾ ಹಿರೇಮಠ, ಸ್ಮೀತಾ ಪವಾರ, ಸುಜಾತಾ ಶಿಂದೆ, ದಿಲೀಪ ರಾಠೋಡ. ಯಲ್ಲಪ್ಪ ನಾರಾಯಣಿ, ಸುರೇಶ ಮಜ್ಜಗಿ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಶ್ರೀಕಾಂತ ಪತ್ತಾರ, ಭೀಮಸಿಂಗ ಲಮಾಣಿ, ಮೌನೇಶ ಅಂಬಿಗೇರ,ರಾಮಣ್ಣ ಯಂಕನ್ನವರ, ಶ್ರೀಶೈಲ ಗಾಣಿಗೇರ, ಬಾಸು ಲಮಾಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.