ಎಸ್ಸಿ,ಎಸ್ಪಿ ಹಣ ದುರ್ಬಳಕೆ ಖಂಡಿಸಿ ಡಂಬಳದಲ್ಲಿ ಬಿಜೆಪಿ ಪ್ರತಿಭಟನೆ

| Published : Mar 11 2025, 12:46 AM IST

ಎಸ್ಸಿ,ಎಸ್ಪಿ ಹಣ ದುರ್ಬಳಕೆ ಖಂಡಿಸಿ ಡಂಬಳದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಸಿ,ಎಸ್‌ಟಿ-ಟಿಎಸ್‌ಪಿ ಅನುದಾನ ಅನ್ಯ ಕಾರ್ಯಕ್ಕೆ ಬಳಕೆ ಖಂಡಿಸಿ ಡಂಬಳ ಹೋಬಳಿಯ ಬಿಜೆಪಿ ಎಸ್‌ಸಿ-ಎಸ್‌ಟಿ ಮೋರ್ಚಾ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಡಂಬಳ:ಎಸ್‌ಸಿ,ಎಸ್‌ಟಿ-ಟಿಎಸ್‌ಪಿ ಅನುದಾನ ಅನ್ಯ ಕಾರ್ಯಕ್ಕೆ ಬಳಕೆ ಖಂಡಿಸಿ ಡಂಬಳ ಹೋಬಳಿಯ ಬಿಜೆಪಿ ಎಸ್‌ಸಿ-ಎಸ್‌ಟಿ ಮೋರ್ಚಾ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಡಂಬಳ ಬಸ್‌ ನಿಲ್ದಾಣದ ಮುಖ್ಯ ರಸ್ತೆಯಿಂದ ನಾಡಕಾರ್ಯಾಲಯ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ, ಉಪತಹಸೀಲ್ದಾರ್‌ ಸಿ.ಕೆ. ಬೆಳವಟಗಿ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಐದು ಗ್ಯಾರಂಟಿ ಘೋಷಿಸಿ, ಈಗ ಎಸ್‌ಸಿಎಸ್‌ಟಿ-ಟಿಎಸ್‌ಪಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್‌ಸಿ-ಎಸ್‌ಟಿ ಸಮುದಾಯವರಿಗೆ ಘೋರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಡಂಬಳ ಹೋಬಳಿ ಅಧ್ಯಕ್ಷ ಅಂದಪ್ಪ ಹಾರೂಗೇರಿ ಮಾತನಾಡಿ, 2023 ಮತ್ತು 2024ನೇ ಸಾಲಿನಲ್ಲಿ ಒಟ್ಟು ಸುಮಾರು ₹ 25 ಸಾವಿರ ಕೋಟಿಯಷ್ಟು ಹಣವನ್ನು ಕಾಂಗ್ರೆಸ್ ಸರ್ಕಾರ ಬೇರೆ ಯೋಜನೆಗಳಿಗೆ ಬಳಸಿಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ ಮತ್ತು ಕುಟುಂಬವನ್ನು ಸಶಕ್ತಗೊಳಿಸಬೇಕು. ದಲಿತಕೇರಿ, ಕಾಲನಿಗಳಿಗೆ, ಆದಿವಾಸಿ ಹಾಡಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಭೂ ಒಡೆತನ, ಭೂಮಿಗೆ ನೀರು, ಸ್ವ ಉದ್ಯೋಗ, ಸ್ವಂತ ವಾಹನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿ ಶಾಲೆ, ಹಾಸ್ಟೆಲ್ ನಿರ್ಮಾಣ ಇದಕ್ಕಾಗಿ ಬಳಸಬೇಕಾದ ಹಣ ದುರುಪಯೋಗ ಮಾಡಿಕೊಂಡಿದ್ದು, ಬೇರೆ ಉದ್ದೇಶಕ್ಕೆ ಬಳಸಿ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈ ಸರ್ಕಾರ ಮರೆತಿದೆ ಎಂದು ದೂರಿದರು.

ಎಸ್‌ಸಿ ಮೋರ್ಚಾ ಅಧ್ಯಕ್ಷ ಕೆ.ಡಿ. ಬಂಡಿ, ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಸಮುದಾಯ ಓಲೈಸುವ ಬಜೆಟ್‌ ಮಂಡಿಸಿದ್ದಾರೆ. ಕೇವಲ ಒಂದು ಸಮುದಾಯ ಓಲೈಕೆ ಮಾಡುತ್ತಿರುವುದು ತೀರಾ ಖಂಡನೀಯ. ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಮುಖ್ಯಮಂತ್ರಿ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ. ಇದರಿಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಎಸ್‌ಸಿ-ಎಸ್‌ಟಿ ಸಮುದಾಯದ ಯೋಜನೆ ಅನುಷ್ಠಾನವಾಗಿಲ್ಲ. ಬರಲಿರುವ ಬಜೆಟ್‍ನಲ್ಲಿ ದಲಿತರ ಮೀಸಲು ನಿಧಿಗೆ ಕನ್ನ ಹಾಕಲು ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಹಿರಿಯ ನೇತಾರ ಡಿ. ಪ್ರಸಾದ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿ, ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಆಂದೋಲನ ಹಮ್ಮಿಕೊಳ್ಳಲಿದೆ. ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದ ಜನ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಈಶಪ್ಪ ರಂಗಪ್ಪನವರ, ಪಂಚಾಕ್ಷರಯ್ಯ ಹರ್ಲಾಪುರಮಠ, ಭೀರಪ್ಪ ಬಂಡಿ, ನಿಂಗಪ್ಪ ಮಾದರ, ಕುಬೇರಪ್ಪ ಬಂಡಿ, ರಾಜೇಶ ಅರಕಲ್ಲ, ಬಸುರಾಜ ಚನ್ನಳ್ಳಿ, ವೆಂಕನಗೌಡ ಪಾಟೀಲ್, ಚಂದ್ರು ಯಳಮಲಿ, ಶೇಖರಯ್ಯ ಗುರವಿನ, ವಿರೂಪಾಕ್ಷಿ ಯಲಿಗಾರ, ಕುಮಾರಸ್ವಾಮಿ ಹೆಬ್ಬಳ್ಳಿಮಠ, ಸೋಮಶೇಖರ ಹಿರೇಮಠ, ಲಕ್ಷ್ಮಣ ಬೂದಿಹಾಳ, ಶಿವಾನಂದ ಹರಿಜನ, ಮಾರುತೆಪ್ಪ ಮ್ಯಾಗೇರಿ, ಪ್ರಭಣ್ಣ ಕರಮುಡಿ, ಪ್ರಕಾಶ ಕೋತಂಬ್ರಿ, ಶಿವಾನಂದ ಬಂಡಿ, ವಿನಾಯಕ ರಾಠೋಡ, ಶೇಖಪ್ಪ ಯಾವಗಲ್, ನಾಗರಾಜ ಮಳಲಿ, ಟಾಕ್ರಪ್ಪ ಲಮಾಣಿ, ಅಡವೆಪ್ಪ ಚೆನ್ನಪ್ಪಗೌಡ, ಈಶ್ವರಗೌಡ ಪಾಟೀಲ, ಪ್ರವೀಣ ವಡ್ಡಟ್ಟಿ, ಭರಮಪ್ಪ ನಾಗನೂರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.