ತರೀಕೆರೆಪಟ್ಟಣದ ಪುರಸಭಾ ವ್ಯಾಪ್ತಿಯ ಹಳಿಯೂರು ಬಳಿಯ ಭದ್ರಾ ಮೇಲ್ದಂಡೆ ಚಾನಲ್‍ ಸೇತುವೆ ಬಳಿ ಕಳೆದ2 ತಿಂಗಳ ಹಿಂದೆ ನೂತನವಾಗಿ ನಿರ್ಮಿಸಿರುವ ಡಾಂಬರ್‍ ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಅಡಿಕೆ-ಬಾಳೆ ಗಿಡಗಳನ್ನು ನೆಡುವ ಮೂಲಕ ಬಿಜೆಪಿ ತರೀಕೆರೆ ಮಂಡಲದಿಂದ ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ಡಿ.ಎಸ್. ಸುರೇಶ್‍ । ಗುಂಡಿಗಳಲ್ಲಿ ಅಡಿಕೆ-ಬಾಳೆ ಗಿಡ ನೆಟ್ಟರು

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಪುರಸಭಾ ವ್ಯಾಪ್ತಿಯ ಹಳಿಯೂರು ಬಳಿಯ ಭದ್ರಾ ಮೇಲ್ದಂಡೆ ಚಾನಲ್‍ ಸೇತುವೆ ಬಳಿ ಕಳೆದ2 ತಿಂಗಳ ಹಿಂದೆ ನೂತನವಾಗಿ ನಿರ್ಮಿಸಿರುವ ಡಾಂಬರ್‍ ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಅಡಿಕೆ-ಬಾಳೆ ಗಿಡಗಳನ್ನು ನೆಡುವ ಮೂಲಕ ಬಿಜೆಪಿ ತರೀಕೆರೆ ಮಂಡಲದಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಡಿ.ಎಸ್. ಸುರೇಶ್‍ ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ಮುಖ್ಯ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಎಲ್ಲಾ ಕಾಮಗಾರಿ ಕಳಪೆಯಾಗಿದ್ದು, ಸಾಕಷ್ಟು ಅವ್ಯವಹಾರವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಸ್ತೆ ಕಾಮಗಾರಿ ನಿರ್ವಹಿಸುವ ಮೊದಲು ರಸ್ತೆ ಇಕ್ಕೆಲೆಗಳಲ್ಲಿ ನಿರ್ಮಿಸ ಬೇಕಾದ ಬಾಕ್ಸ್ ಚರಂಡಿ ನಿರ್ಮಿಸಿಲ್ಲ. ರಸ್ತೆ ನಿರ್ಮಿಸಿದ ಎರಡೇ ತಿಂಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇದಕ್ಕೆ ರಸ್ತೆ ನಿರ್ಮಾಣದಲ್ಲಿ ಬಳಸಿರುವ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಕಾಮಗಾರಿಗೆ ಕೇಂದ್ರ ಸರ್ಕಾರದ ₹ 4 ಕೋಟಿ ಅನುದಾನ ಬಳಸಿದೆ. ಈ ಬಗ್ಗೆ ಸಂಸದರಿಗೆ ಮಾಹಿತಿ ನೀಡದೆ, ಪಿಡಬ್ಲ್ಯೂಡಿ ಇಲಾಖೆಯಿಂದ ಕಾಮಗಾರಿ ನಿರ್ವಹಿಸಿ ನಿಯಮ ಉಲ್ಲಂಘಿಸಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸ ಲಾಗುವುದು ಎಂದು ಹೇಳಿದರು.

ನಮ್ಮ ಅವಧಿಯಲ್ಲಿ ತರೀಕೆರೆಯಲ್ಲಿ ತಾಯಿ-ಮಗು ಆಸ್ಪತ್ರೆ ಮತ್ತು ಲಕ್ಕವಳ್ಳಿಯಲ್ಲಿ 30ಬೆಡ್‍ ಹಾಸಿಗೆ ಪ್ರಾರಂಭವಾಗಿ ಎರಡು ವರ್ಷವಾದರೂ ಸರ್ಕಾರದಲ್ಲಿ ಹಣವಿಲ್ಲದೆ ಸಿಬ್ಬಂದಿ ನೇಮಿಸಿ ಆಸ್ಪತ್ರೆ ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಬೋಜರಾಜ್, ಪ್ರತಾಪ್ ಗರಗದಹಳ್ಳಿ ಮೊದಲಾದವರು ಮಾತನಾಡಿದರು.

ಜಿ.ಪಂ. ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಮುಖಂಡರಾದ ಗುಳ್ಳದಮನೆ ವಸಂತಕುಮಾರ್, ರೇಣುಕಪ್ಪ, ಬಿ.ಇ. ನಾಗರಾಜ, ಮಂಜಪ್ಪ, ಬಸವರಾಜ್, ಪರಮೇಶಣ್ಣ, ಅರುಣ್ ಕುಮಾರ್, ಧನಪಾಲ್, ವಿಜಯನಾಯ್ಕ ಮೊದಲಾದವರು ಇದ್ದರು.

20ಕೆಟಿಆರ್.ಕೆ.08ಃ

ತರೀಕೆರೆ ಭದ್ರಾ ಮೇಲ್ದಂಡೆ ಚಾನಲ್‍ ಸೇತುವೆ ಬಳಿ ಗುಂಡಿಗಳು ಬಿದ್ದ ರಸ್ತೆಯಲ್ಲಿ ಅಡಿಕೆ ಮತ್ತು ಬಾಳೆ ಗಿಡಗಳನ್ನು ನೆಡುವ ಮೂಲಕ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಡಿ.ಎಸ್.ಸುರೇಶ್, ಜಿ.ಪಂ. ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಬಿ.ಜೆ.ಪಿ.ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮತ್ತಿತರರು ಭಾಗವಹಿಸಿದ್ದರು.