ಲೋಕಸಭೆಗೆ ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಹೆಸರು ಶಿಫಾರಸು

| Published : Mar 06 2024, 02:18 AM IST

ಸಾರಾಂಶ

ಮಾಜಿ ಶಾಸಕ ದೊಡ್ಡಬೋರೇಗೌಡರ ಪುತ್ರರಾಗಿರುವ ಡಾ.ಸಿದ್ದರಾಮಯ್ಯನವರು ಸರಳತೆ, ಸಜ್ಜನಿಕೆಗೆ ಹೆಸರಾದವರು. ವಿಚಾರವಂತಿಕೆಯೊಂದಿಗೆ ಉತ್ತಮವಾದ ವಾಕ್ಚಾತುರ್ಯವಿರುವ ವ್ಯಕ್ತಿ ಎನಿಸಿದ್ದಾರೆ. ೨೦೧೮ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ೨.೪೪ ಲಕ್ಷ ಮತಗಳನ್ನು ಗಳಿಸುವುದರೊಂದಿಗೆ ದಾಖಲೆ ನಿರ್ಮಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ ಅವರ ಹೆಸರನ್ನು ಪಕ್ಷದ ಜಿಲ್ಲಾ ಘಟಕ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ಬಿಜೆಪಿ ವಿಕಾಸ ಭವನಕ್ಕೆ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಶಾಸಕ ಭರತ್‌ಶೆಟ್ಟಿ ಹಾಗೂ ಮಾಜಿ ಸಚಿವ ಎನ್.ಮಹೇಶ್ ಅವರು ಮುಖಂಡರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ ವೇಳೆ ಡಾ.ಸಿದ್ದರಾಮಯ್ಯನವರ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಮಾಜಿ ಶಾಸಕ ದೊಡ್ಡಬೋರೇಗೌಡರ ಪುತ್ರರಾಗಿರುವ ಡಾ.ಸಿದ್ದರಾಮಯ್ಯನವರು ಸರಳತೆ, ಸಜ್ಜನಿಕೆಗೆ ಹೆಸರಾದವರು. ವಿಚಾರವಂತಿಕೆಯೊಂದಿಗೆ ಉತ್ತಮವಾದ ವಾಕ್ಚಾತುರ್ಯವಿರುವ ವ್ಯಕ್ತಿ ಎನಿಸಿದ್ದಾರೆ. ೨೦೧೮ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ೨.೪೪ ಲಕ್ಷ ಮತಗಳನ್ನು ಗಳಿಸುವುದರೊಂದಿಗೆ ದಾಖಲೆ ನಿರ್ಮಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯೊಳಗೆ ಬಿಜೆಪಿಗೆ ಮೊದಲ ಬಾರಿಗೆ ಅತಿ ಹೆಚ್ಚು ಮತಗಳನ್ನು ದೊರಕಿಸಿಕೊಟ್ಟಿದ್ದ ಕೀರ್ತಿಗೂ ಅವರು ಪಾತ್ರರಾಗಿದ್ದರು. ಇದು ರಾಜ್ಯ ನಾಯಕರ ಗಮನ ಸೆಳೆದಿತ್ತು ಎಂದು ಗೊತ್ತಾಗಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಡಾ.ಸಿದ್ದರಾಮಯ್ಯನವರಿಗೆ ದೊರಕಬೇಕಿತ್ತು. ಆದರೆ, ಸುಮಲತಾ ಅಂಬರೀಶ್ ಅವರ ಅನಿರೀಕ್ಷಿತ ಆಗಮನದಿಂದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾರಿಗೆ ಬಹಿರಂಗ ಬೆಂಬಲ ಘೋಷಿಸಿದ್ದರಿಂದ ಡಾ.ಸಿದ್ದರಾಮಯ್ಯನವರು ಅವಕಾಶ ವಂಚಿತರಾಗುವಂತಾಗಿತ್ತು.

ಕಳೆದ ಐದಾರು ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಹಲವು ರೀತಿಯ ಅವಕಾಶಗಳು, ಅಧಿಕಾರದಿಂದ ಡಾ.ಸಿದ್ದರಾಮಯ್ಯನವರ ಕೈತಪ್ಪಿತ್ತು. ಆದರೂ ಎಲ್ಲವನ್ನೂ ಸಮಾಧಾನಚಿತ್ತದಿಂದಲೇ ಪರಿಗಣಿಸಿ ಪಕ್ಷ ನಿಷ್ಠೆ ಮೆರೆದಿದ್ದರು. ಪಕ್ಷ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇತ್ತೀಚೆಗಷ್ಟೇ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದ ಡಾ.ಸಿದ್ದರಾಮಯ್ಯನವರಿಗೆ ಜಿಲ್ಲೆಯ ಬಹುತೇಕ ಮುಖಂಡರು, ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದರು. ಪಕ್ಷ ಟಿಕೆಟ್ ನೀಡಿ ಚುನಾವಣಾ ಅಖಾಡಕ್ಕಿಳಿಸಿದರೆ ಗೆಲುವಿಗೆ ಶ್ರಮಿಸುವುದಾಗಿ ಒಮ್ಮತದಿಂದ ಘೋಷಿಸಿದ್ದರು.

ಇದೀಗ ಲೋಕಸಭೆ ಚುನಾವಣೆ ಸಂಬಂಧ ಪಕ್ಷದ ವೀಕ್ಷಕರು ಆಗಮಿಸಿದ್ದ ವೇಳೆ ಮುಖಂಡರು-ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಡಾ.ಸಿದ್ದರಾಮಯ್ಯನವರ ಪರವಾಗಿ ಹೆಚ್ಚಿನ ಒಲವು ವ್ಯಕ್ತವಾಗಿದ್ದರಿಂದ ಅವರ ಹೆಸರನ್ನು ಜಿಲ್ಲಾ ಘಟಕ ಲೋಕಸಭೆಗೆ ಚುನಾವಣಾ ಅಭ್ಯರ್ಥಿ ಸ್ಥಾನಕ್ಕೆ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.