ಬಿಜೆಪಿಯದ್ದು ಚೊಂಬು ಮಾದರಿ: ಸುರ್ಜೆವಾಲ ಲೇವಡಿ

| Published : Apr 23 2024, 12:54 AM IST

ಸಾರಾಂಶ

ಸೋಮವಾರ ಉಡುಪಿಯಲ್ಲಿ ಕಾಂಗ್ರೆಸ್ ಪ್ರಮುಖರ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯದಲ್ಲೀಗ ಮತದಾರರ ಎದುರು ಎರಡು ಮಾದರಿಯ ಆಯ್ಕೆಗಳಿವೆ, ಒಂದು ಕಾಂಗ್ರೆಸ್ ಸರ್ಕಾರದ ನುಡಿದಂತೆ ನಡೆಯುವ ಗ್ಯಾರಂಟಿ ಮಾದರಿ, ಇನ್ನೊಂದು ಬಿಜೆಪಿಯ ಚೊಂಬು ಗ್ಯಾರಂಟಿಯ ಮಾದರಿ ಎಂದು ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲೀಗ ಮತದಾರರ ಎದುರು ಎರಡು ಮಾದರಿಯ ಆಯ್ಕೆಗಳಿವೆ, ಒಂದು ಕಾಂಗ್ರೆಸ್ ಸರ್ಕಾರದ ನುಡಿದಂತೆ ನಡೆಯುವ ಗ್ಯಾರಂಟಿ ಮಾದರಿ, ಇನ್ನೊಂದು ಬಿಜೆಪಿಯ ಚೊಂಬು ಗ್ಯಾರಂಟಿಯ ಮಾದರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಸೋಮವಾರ ಉಡುಪಿಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿ ಸಾಮಾಜಿಕ ನ್ಯಾಯದಡಿ 5 ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಪ್ರಥಮ ರಾಜ್ಯ ಕರ್ನಾಟಕ. ಗೃಹಲಕ್ಷ್ಮೀ ಗ್ಯಾರಂಟಿಯಿಂದ 1.25 ಲಕ್ಷ ಮಹಿಳೆಯರು, ಗೃಹಜ್ಯೋತಿ ಗ್ಯಾರಂಟಿಯಿಂದ 1.80 ಕೋಟಿ ಮನೆಗಳು, ಶಕ್ತಿ ಗ್ಯಾರಂಟಿಯಿಂದ ದಿನಕ್ಕೆ 35 ಲಕ್ಷ ಮಹಿಳೆಯರು, ಅನ್ನ ಭಾಗ್ಯ ಗ್ಯಾರಂಟಿಯಿಂದ 4.49 ಕೋಟಿ ಕುಟುಂಬಗಳು ಮತ್ತು ಯುವನಿಧಿ ಗ್ಯಾರಂಟಿಯಿಂದ 1.50 ಲಕ್ಷ ಯುವಕರು ನೇರ ಲಾಭ ಪಡೆದಿದ್ದಾರೆ. ಈಗ ಎಐಸಿಸಿ ಮತ್ತೆ 5 ಗ್ಯಾರಂಟಿಗಳನ್ನು ಘೋಷಿಸಿದೆ ಎಂದರು.

ಆದರೆ, ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಚೊಂಬು ಗ್ಯಾರಂಟಿ ನೀಡಿದೆ ಎಂದು ಟೀಕಿಸಿದ ಸುರ್ಜೆವಾಲ, ಅತೀ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ಶೇ. 13 ರಷ್ಟು ಅನುದಾನ ನೀಡಿ ಚೊಂಬು ನೀಡಿದ್ದಾರೆ, ಭದ್ರಾ ಅಣೆಕಟ್ಟಿಗೆ ಕೇಂದ್ರ ಸರ್ಕಾರ 5300 ಕೋಟಿ ರು. ಘೋಷಿಸಿ ನಂತರ ಬಿಡುಗಡೆ ಮಾಡದೆ ಚೊಂಬು ನೀಡಿದ್ದಾರೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ನೀಡುತ್ತೇನೆ ಎಂದು ಹೇಳಿ ಚೊಂಬು ನೀಡಿದ್ದಾರೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಚೊಂಬು ನೀಡಿದ್ದಾರೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ಚೊಂಬು ನೀಡಿದ್ದಾರೆ ಎಂದರು.

ಆರಂಭದಲ್ಲಿ ಕಾಂಗ್ರೆಸ್ ನ ಈ ಗ್ಯಾರಂಟಿಗಳು ಅನುಷ್ಠಾನವೇ ಆಗುವುದಿಲ್ಲ ಎಂದು ಟೀಕಿಸಿದ್ದ ಪ್ರಧಾನಿ ಮೋದಿ ಅವರೇ ಈಗ ಅವುಗಳನ್ನು ಕದ್ದು, ಮೋದಿ ಗ್ಯಾರಂಟಿ ಎಂದು ಘೋಷಿಸಿದ್ದಾರೆ ಎಂದವರು ಲೇವಡಿ ಮಾಡಿದರು.

ಸಂವಿಧಾನ ಉಳಿಸುವ ಚುನಾವಣೆ:

ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ - ಪಂಗಡಗಳಿಗೆ ನೀಡಲಾದ ಮೀಸಲಾತಿ ರದ್ದಾಗುತ್ತದೆ, ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ. ಆದ್ದರಿಂದ ಇದು ಸಂವಿದಾನವನ್ನು ಉಳಿಸುವ ಚುನಾವಣೆಯಾಗಿದೆ ಎಂದರು.

ಕಾಂಗ್ರೆಸ್ ಪ್ಯಾನ್ ಇಂಡಿಯಾ ಪಕ್ಷವಾಗಿ ಉಳಿದಿಲ್ಲ, ಈ ಬಾರಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದನ್ನು ಅಲ್ಲಗಳೆದ ಸುರ್ಜೆವಾಲ, ಈಗಾಗಲೇ 330 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದೆ, ಇನ್ನೂ ಕೆಲಸ ಕ್ಷೇತ್ರಗಳಿಗೆ ಘೋಷಣೆಯಾಗಿದೆ, ಮುಂದೆ ಮತ್ತೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗುತ್ತದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಸಲೀಂ ಅಹ್ಮದ್, ಪಕ್ಷದ ನಾಯಕರಾದ ವಿನಯಕುಮಾರ್ ಸೊರಕೆ, ಎಂ. ಎ. ಗಪೂರ್, ಅಶೋಕ್ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು ಇದ್ದರು.