ಸಾರಾಂಶ
ವರಿಷ್ಠರ ಬಳಿ ಯಾರ ಬಗ್ಗೆಯೂ ಚಾಡಿ ಹೇಳಿಲ್ಲ
ನಾನು ದೆಹಲಿಗೆ ಹೋಗಿ ಯಾರ ಬಗ್ಗೆಯೂ ಚಾಡಿ ಹೇಳುವುದಾಗಲಿ, ದೂರು ನೀಡುವುದಾಗಲಿ ಮಾಡಿಲ್ಲ. ಶಿಸ್ತು ಕ್ರಮಕ್ಕೂ ಒತ್ತಾಯಿಸಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಸಂದರ್ಭಾನುಸಾರ ಕೇಂದ್ರದ ವರಿಷ್ಠರೇ ಬಹಿರಂಗ ಹೇಳಿಕೆ ನೀಡುವವರ ಕುರಿತು ತೀರ್ಮಾನ ಮಾಡುತ್ತಾರೆ.- ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷಕನ್ನಡಪ್ರಭ ವಾರ್ತೆ ವಿಜಯಪುರಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಾವಧಿಯಲ್ಲಿ 40 ಸಾವಿರ ಕೋಟಿ ರು. ಕೋವಿಡ್ ಹಗರಣ ನಡೆದಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪ ಆಡಳಿತ ಮತ್ತು ಪ್ರತಿಪಕ್ಷ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿರುವ ನಡುವೆಯೇ, ಈ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ. ಜತೆಗೆ, ಆರೋಪಕ್ಕೆ ಗುರಿಯಾಗಿರುವವರು ಯಡಿಯೂರಪ್ಪ ಅವರು ಎಂಬ ಮುಲಾಜೂ ನೋಡದೆ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆರೋಪದಲ್ಲಿ ಗಂಭೀರತೆ ಇದ್ದರೆ ಮಾತ್ರ ಅದಕ್ಕೆ ಪ್ರತಿಕ್ರಿಯಿಸಬೇಕು. ಆದರೆ ಯಡಿಯೂರಪ್ಪ ಅವರ ಮೇಲೆ ಯತ್ನಾಳ ಮಾಡಿರುವ ಕೋವಿಡ್ ಹಗರಣದ ಆರೋಪ ಸತ್ಯಕ್ಕೆ ದೂರವಾದದ್ದು. ಇಂಥ ಹುಡುಗಾಟಿಕೆ ಆರೋಪಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಆರೋಪ ಮಾಡಿದವರು ಸೂಕ್ತ ದಾಖಲೆಗಳನ್ನೂ ಕೊಡಲಿ ಎಂದು ಯತ್ನಾಳ್ಗೆ ತಿರುಗೇಟು ನೀಡಿದರು.ದೂರು ನೀಡಿಲ್ಲ-ವಿಜಯೇಂದ್ರ: ಇದೇ ವೇಳೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ಪದೇ ಪದೆ ಬಹಿರಂಗ ಟೀಕೆ ಮಾಡುತ್ತಿರುವವರ ಮೇಲೆ ವರಿಷ್ಠರಿಗೆ ಯಾವುದೇ ದೂರು ನೀಡಿಲ್ಲ ಎಂದು ಯತ್ನಾಳ ಹೆಸರೆತ್ತದೆ ಇದೇ ವೇಳೆ ವಿಜಯೇಂದ್ರ ಸ್ಪಷ್ಟನೆ ನೀಡಿದರು. ''''''''ನಾನಾಗಲಿ, ಪಕ್ಷದ ಮುಖಂಡರಾಗಲಿ ಕೇಂದ್ರಕ್ಕೆ ಹೋಗಿ ಯಾರ ಬಗ್ಗೆಯೂ ಚಾಡಿ ಹೇಳುವುದಾಗಲಿ, ದೂರು ನೀಡುವುದಾಗಲಿ ಮಾಡಿಲ್ಲ. ಶಿಸ್ತು ಕ್ರಮಕ್ಕೂ ಒತ್ತಾಯಿಸಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಆದರೆ ಮುಂದೆ ಸಂದರ್ಭ ಹೇಗೆ ಸೃಷ್ಟಿಯಾಗುತ್ತದೆ ಅದರ ಮೇಲೆ ಕೇಂದ್ರ ವರಿಷ್ಠರು ಬಹಿರಂಗ ಹೇಳಿಕೆ ನೀಡುವವರ ಕುರಿತು ತಿರ್ಮಾನ ಮಾಡುತ್ತಾರೆ'''''''' ಎಂದು ವಿಜಯೇಂದ್ರ ಹೇಳಿದರು.