ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕೆಂದು ಸ್ವತಃ ಇದೇ ಬಿಜೆಪಿ ಸದಸ್ಯರು ನಿರ್ಣಯ ಕೈಗೊಂಡು ಇದೀಗ ಹೆಚ್ಚಿನ ಅನುದಾನ ಬರಲಿದೆ ಎಂದು ಧಾರವಾಡ ಜನತೆಯ ಮೂಗಿಗೆ ತುಪ್ಪು ಸವರುತ್ತಿದ್ದಾರೆ.
ಧಾರವಾಡ:
ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪಾಲಿಕೆ ಬೇಡ, ಬೃಹತ್ ಪಾಲಿಕೆಯಾಗಿ ರಚಿಸಲು ಯಾವುದೇ ಚರ್ಚೆ ಇಲ್ಲದೇ ವಿಪಕ್ಷಗಳ ವಿರೋಧ ಮಧ್ಯೆ ನಿರ್ಣಯ ಕೈಗೊಳ್ಳಲಾಗಿದೆ. ಸಭಾನಾಯಕರು ಸೇರಿದಂತೆ ಬಿಜೆಪಿ ಸದಸ್ಯರು ಚರ್ಚಿಸದೇ ಓಡಿ ಹೋಗಿದ್ದಾರೆ ಎಂದು ಪಾಲಿಕೆ ವಿಪಕ್ಷ ನಾಯಕ ಇಮ್ರಾನ ಯಲಿಗಾರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕೆಂದು ಸ್ವತಃ ಇದೇ ಬಿಜೆಪಿ ಸದಸ್ಯರು ನಿರ್ಣಯ ಕೈಗೊಂಡು ಇದೀಗ ಹೆಚ್ಚಿನ ಅನುದಾನ ಬರಲಿದೆ ಎಂದು ಧಾರವಾಡ ಜನತೆಯ ಮೂಗಿಗೆ ತುಪ್ಪು ಸವರುತ್ತಿದ್ದಾರೆ. ಪಾಲಿಕೆಯ ಎಲ್ಲ ಅಧಿಕಾರಿ ವರ್ಗ ಹುಬ್ಬಳ್ಳಿಯಲ್ಲಿದ್ದು ಧಾರವಾಡ ಜನತೆಗೆ ಜನನ-ಮರಣ, ಕಟ್ಟಡ ಪರವಾನಗಿ, ಸಿಸಿ ಅಂತಹ ಕೆಲಸ-ಕಾರ್ಯಗಳು ತುಂಬ ವಿಳಂಬ ಆಗಲಿವೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಪಾಲಿಕೆ ಮಾಡಲು ಕಾಂಗ್ರೆಸ್ ಸರ್ಕಾರ ಸದನದಲ್ಲಿ ಒಪ್ಪಿತ್ತು. ಇದೀಗ ಏಕಾಏಕಿ ಪ್ರತ್ಯೇಕ ಪಾಲಿಕೆ ಬೇಡ, ಬೃಹತ್ ಪಾಲಿಕೆಯನ್ನಾಗಿ ಮಾಡೋಣ ಎಂದು ಜನರನ್ನು ದಾರಿ ತಪ್ಪಿಸುತ್ತಿರುವುದು ಏತಕ್ಕೆ ಎಂದು ಇಮ್ರಾನ್ ಪ್ರಶ್ನಿಸಿದರು.
ಪಾಲಿಕೆ ಕಾಂಗ್ರೆಸ್ ಸದಸ್ಯರಾದ ರಾಜು ಕಮತಿ, ಕವಿತಾ ಕಬ್ಬೇರ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಚರ್ಚಿಸದೇ ಓಡಿ ಹೋಗಿದ್ದು ಏಕೆ? ಪ್ರತ್ಯೇಕ ಪಾಲಿಕೆ ಕ್ರೆಡಿಟ್ ಕಾಂಗ್ರೆಸ್ಗೆ ಸಿಗಲಿದೆ ಎಂದು ಬಿಜೆಪಿ ಮುಖಂಡರು ಧಾರವಾಡ ಜನತೆಗೆ ಮೋಸ ಮಾಡುತ್ತಿದ್ದಾರೆ. ಬೃಹತ್ ಪಾಲಿಕೆಯಾಗಿ ರಚಿಸಲು ಅವಳಿ ನಗರಕ್ಕೆ ಇನ್ನೂ ಅರ್ಹತೆ ಬಂದಿಲ್ಲ. ಬಿಜೆಪಿ ಮುಖಂಡರು ಧಾರವಾಡ ಜನತೆ ಹಾಗೂ ಊರನ್ನು ಬರೀ ಮನೆಯ ಹಿತ್ತಲಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತ್ಯೇಕ ಪಾಲಿಕೆ ವಿಚಾರದಲ್ಲಂತೂ ಬಿಜೆಪಿ ಯೂ ಟರ್ನ್ ಹೊಡೆದಿದ್ದು, ಜನರು ಅವರಿಗೆ ತಕ್ಕ ಪಾಠ ಕಲಿಸಬೇಕು. ನಾವು ಮಾತ್ರ ಪ್ರತ್ಯೇಕ ಪಾಲಿಕೆ ಆಗುವ ವರೆಗೂ ಹೋರಾಟ ನಿಶ್ಚಿತ ಎಂದು ಸ್ಫಷ್ಪಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ದೀಪಾ ನೀರಲಕಟ್ಟಿ, ಶಂಬು ಸಾಲಿಮನಿ, ಮಂಜುನಾಥ ನೀರಲಕಟ್ಟಿ, ತುಳಜಪ್ಪ ಪೂಜಾರ ಇದ್ದರು.ಯಾವುದೇ ಚರ್ಚೆ ಇಲ್ಲದೇ ಪ್ರತ್ಯೇಕ ಪಾಲಿಕೆ ಬೇಡ ಎನ್ನುವ ನಿರ್ಣಯಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು, ಧಾರವಾಡ ಜನತೆ, ಸಂಘ-ಸಂಸ್ಥೆಗಳು, ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಹೋರಾಟದ ಮೂಲಕ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಭಾಗ್ಯ ಒದಗಿಸಿ, ಇಲ್ಲಿಯ ಜನರಿಗೆ ಅನುಕೂಲ ಮಾಡುವುದು ನಮ್ಮ ಗುರಿ.
ಇಮ್ರಾನ್ ಯಲಿಗಾರ, ಪಾಲಿಕೆ ವಿಪಕ್ಷ ನಾಯಕ