ಒಂದೇ ಒಂದು ಡ್ಯಾಂ, ವಿಶ್ವವಿದ್ಯಾಲಯ ಕಟ್ಟದ ಬಿಜೆಪಿ

| Published : Mar 29 2024, 12:45 AM IST / Updated: Mar 29 2024, 03:30 PM IST

ಸಾರಾಂಶ

ಗೋಕಾಕ ನಗರದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ದೇಶಕ್ಕೆ ಹೆಚ್ಚು ನೀರಾವರಿ ಸೌಲಭ್ಯ ಕಲ್ಪಿಸಿದ ಪಕ್ಷ ಕಾಂಗ್ರೆಸ್. ಬಿಜೆಪಿಗೆ ಇಲ್ಲಿಯವರೆಗೆ ಒಂದೇ ಒಂದು ಡ್ಯಾಂ ಮತ್ತು ವಿಶ್ವವಿದ್ಯಾಲಯ ಕಟ್ಟಲು ಸಾಧ್ಯವಾಗಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ನಗರದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶಿಕ್ಷಣ ಸಂಸ್ಥೆಗಳು ಹೆಚ್ಚೆಚ್ಚು ಸ್ಥಾಪಿತಗೊಂಡಿವೆ. ಅವು ನರೇಂದ್ರ ಮೋದಿಯವರ ಕಾಲದಲ್ಲಿ ಬಂದಿದ್ದಲ್ಲ. ಬಿಜೆಪಿ ಮೋದಿಯೇ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಕೊಟ್ಟ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ ಎಂದು ತಿಳಿಸಿದರು.

ಪಕ್ಷದ ಕೆಲಸಕ್ಕೆ ನಿಷ್ಠರಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆ ಚಿಕ್ಕವಯಸ್ಸಿನಲ್ಲಿ ಪ್ರಿಯಾಂಕಾ ಚಿಕ್ಕೋಡಿಯಿಂದ ಕಣದಲ್ಲಿದ್ದಾರೆ. ಪ್ರಿಯಾಂಕಾ ಲಾಕ್ಡೌನ್‌, ನೆರೆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಗೋಕಾಕ ಮತ್ತು ಅರಭಾವಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಜಿಲ್ಲೆಯ 2 ಕಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಮಾತನಾಡಿ, ಬಿಜೆಪಿಯವರು ಸಬ್‌ ಕಾ ಸಾಥ್ ಖುದ್ ಕಾ ವಿಕಾಸ ಮಾಡುತ್ತಿದೆ. ಬಿಜೆಪಿಯವರು ಡೊಂಗಿ ದೇಶ ಭಕ್ತರು. ಕೋವಿಡ್‌ ಸಂದರ್ಭದಲ್ಲಿ ಹೆಣದ ಮೇಲೆ ರಾಜಕೀಯ ಮಾಡಿದ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಗುಡುಗಿದರು.

ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ. ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಯುವ ಅಭ್ಯರ್ಥಿಗಳು ಮಾದರಿಯಾಗಿ ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ. ನಾವು ನುಡಿದಂತೆ ನಡೆದು ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ ಎಂದರು.

ಲೋಕಸಭೆ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡರಾದ ಡಾ.ಮಹಾಂತೇಶ ಕಡಾಡಿ, ಅನೀಲ ದಳವಾಯಿ, ಸಿದ್ಧಲಿಂಗ ದಳವಾಯಿ, ಬಾಳಪ್ಪ ಬೆಳಕೂಡ, ಚಂದ್ರಶೇಖರ ಕೊಣ್ಣೂರ, ಪ್ರಕಾಶ ಡಾಂಗೆ, ಜಾಕೀರ್‌ ನದಾಫ್‌ ಕೌಜಲಗಿ, ಕಲ್ಲಪ್ಪಗೌಡ ಲಕ್ಕಾರ, ಲಕ್ಕಣ್ಣ ಸವಸುದ್ದಿ, ರಮೇಶ ಉಟಗಿ, ಎಸ್‌.ಎಂ. ಹತ್ತಿಕಟಗಿ, ಬಸನಗೌಡ ಹೊಳೆಯಾಚೆ, ಭೀಮಶಿ ಹಂದಿಗುಂದ, ಶಂಕರ ಗಿಡನ್ನವರ, ಭರಮಣ್ಣ ಉಪ್ಪಾರ, ಕಲ್ಪನಾ ಜೋಶಿ, ಎಂ,ಆರ್. ಬೋವಿ, ಸುಭಾಸ ಪೂಜೇರಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕರ್ತರ ಶ್ರಮದಿಂದ ಮಾತ್ರ ಅಭ್ಯರ್ಥಿಯ ಗೆಲುವು ಸಾಧ್ಯ. ತಾವೆಲ್ಲರೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳ ಬಗ್ಗೆ ಕಾರ್ಯಕರ್ತರು ಮನೆ, ಮನೆ ತೆರಳಿ ಮತದಾರರಿಗೆ ತಲುಪಿಸಿ.

-ಸತೀಶ ಜಾರಕಿಹೊಳಿ, ಸಚಿವರು.

------------

ಕಾಂಗ್ರೆಸ್ ಪಕ್ಷ 23ರ ವಿಧಾನಸಭಾ ಚುನಾವಣೆಯಲ್ಲಿ 135 ಅಭ್ಯರ್ಥಿಗಳು ಗೆಲ್ಲುವ ಮೂಲಕ ದೇಶದಲ್ಲಿ ಇತಿಹಾಸ ಸೃಷ್ಟಿಸಿದೆ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಅದರಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಇರುತ್ತದೆ.

-ಲಕ್ಷ್ಮೀ ಹೆಬ್ಬಾಳಕರ್‌, ಸಚಿವೆ.