ಸಾರಾಂಶ
ಹಾವೇರಿ: ರಾಜ್ಯದ ಇತಿಹಾಸ ಅವಲೋಕಿಸಿದಾಗ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯ ವ್ಯತ್ಯಾಸ ಪ್ರಬುದ್ಧ ಮತದಾರರಿಗೆ ಗೊತ್ತಿದೆ. ಈ ಬಾರಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ೨೮ ಸ್ಥಾನಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ ಎಂದು ಮಾಜಿ ಸಿಎಂ, ಹಾವೇರಿ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ೨೦೧೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಸಹ ಬಿಜೆಪಿಗೆ ೧೮ ಸ್ಥಾನಗಳು ಗೆಲುವು ಸಾಧಿಸಿದ್ದೇವು. ೨೦೧೮ರ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ನಾವು ಸ್ವಲ್ಪದರಲ್ಲಿ ವಿಫಲರಾದರೂ ಸಹ ೨೦೧೯ರ ಚುನಾವಣೆಯಲ್ಲಿ ೨೬ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಈ ಸಾರಿ ೨೮ಕ್ಕೆ ೨೮ ಸ್ಥಾನಗಳನ್ನೂ ಸಹ ನಾವು ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ ಎಂದರು.ಕಳೆದ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಸಾಕಷ್ಟು ನಿರೀಕ್ಷೆ, ಆಸೆಗಳನ್ನು ಹೊತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಅನೇಕರಿಗೆ ಭ್ರಮನಿರಸನ ಆಗಿದೆ. ಆ ಕಾರಣಕ್ಕಾಗಿ ಸಾಮಾಜಿಕವಾಗಿ, ರಾಜಕೀಯವಾಗಿ ಬದಲಾವಣೆ ಆಗಿದೆ. ಮತದಾರರಮಟ್ಟದಲ್ಲೂ ಬದಲಾವಣೆ ಆಗಿರುವುದನ್ನು ಗಮನಿಸಬಹುದು ಎಂದರು. ನಾವು ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಪ್ರಮುಖ ಗ್ರಾಮಗಳಿಗೆ ಭೇಟಿ ಕೊಡಲು ತೀರ್ಮಾನಿಸಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು. ಎಲ್ಲರೂ ಸಹ ತಾವೇ ಅಭ್ಯರ್ಥಿ ಎಂದು ಭಾವಿಸಿ ತಮ್ಮ ಬೂತ್ಗಳಲ್ಲಿ ಅತಿಹೆಚ್ಚು ಮತಗಳನ್ನು ಬರುವಂತೆ ನೋಡಿಕೊಳ್ಳಬೇಕು. ಪಕ್ಷದ ಮುಖಂಡರು ಅನೇಕ ಚುನಾವಣೆಗಳನ್ನು ಎದುರಿಸಿದ್ದೀರಿ. ಕೆಲ ಚುನಾವಣೆಯಲ್ಲಿ ಸೋತಿದ್ದೀರಿ. ಕೆಲ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೀರಿ. ಸೋಲಿನಿಂದ ಪಾಠ ಕಲಿಯಬೇಕು. ಗೆಲುವಿನಿಂದ ಇನ್ನಷ್ಟು ಸೇವೆ ಮಾಡುವ ಬುದ್ಧಿ ಕಲಿಯಬೇಕು ಎಂದರು.ನಾವು ಎಂದಿಗೂ ಬೇಧ-ಭಾವ ಮಾಡಿಲ್ಲ, ಎಲ್ಲರನ್ನೂ ಗೌರವದಿಂದ ಕಾಣುತ್ತೇನೆ. ಹಾವೇರಿ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ಈ ಕ್ಷೇತ್ರದ ಶಾಸಕನಾಗಿಯೂ ಕೆಲಸ ಮಾಡಲು ನಾವು ಸಿದ್ಧನಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಾಯಕತ್ವ ವಹಿಸಿ ಮನೆ-ಮನೆಗೆ ಹೋಗಿ ಮತಗಿಟ್ಟಿಸಿಕೊಳ್ಳಲು ಶ್ರಮಿಸಬೇಕು. ನಾನು ಎಂದಿಗೂ ಮಾಜಿ ಮುಖ್ಯಮಂತ್ರಿ ಎಂದು ಕೆಲಸ ಮಾಡಿಲ್ಲ, ನಾನು ನಿಮ್ಮಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಜಗದೀಶ ಬಸೇಗಣ್ಣಿ, ಕೆ.ಸಿ. ಕೋರಿ ಇತರರಿದ್ದರು.