ಸಭೆಯ ಆರಂಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಕಾರ್ಯದರ್ಶಿ ಪೂರ್ಣಿಮಾರವರು, ಜಿಲ್ಲೆಯ ಪಕ್ಷದ ಕಾರ್ಯಕರ್ತರು ತಮ್ಮ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಬಿಜೆಪಿ ಜಿಲ್ಲಾ ಘಟಕದ ಕಾರ್ಯಕಾರಣಿ ಸಭೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ಇದರಿಂದ ಕಮಲ ಪಾಳಯದಲ್ಲಿನ ಮುಸುಕಿನ ಗುದ್ದಾಟ ಬಹಿರಂಗಗೊಂಡಂತಾಗಿದೆ.ನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಮಂಡಲವಾರು ಸಭೆಯಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಸಂಜಯ್ ಜೈನ್ ಆಡಿದ ಮಾತಿನಿಂದ ಕೆರಳಿದ ಮುಖಂಡ ಗೌತಮ್ ಗೌಡ ಅವರ ಬೆಂಬಲಿಗರು ಅವರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿದರು. ಈ ಗಲಾಟೆ ದೃಶ್ಯ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಸಭೆಯ ಆರಂಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಕಾರ್ಯದರ್ಶಿ ಪೂರ್ಣಿಮಾರವರು, ಜಿಲ್ಲೆಯ ಪಕ್ಷದ ಕಾರ್ಯಕರ್ತರು ತಮ್ಮ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಸಂಜಯ್ ಜೈನ್ , ಪಕ್ಷದ ರಾಜ್ಯ ನಾಯಕರು ಜಿಲ್ಲಾ ಕಚೇರಿಗೆ ಭೇಟಿ ನೀಡುವುದಾಗಲಿ ಅಥವಾ ಸುದ್ದಿಗೋಷ್ಠಿ ನಡೆಸುವುದಾಗಲಿ ಮಾಹಿತಿ ನೀಡುವುದಿಲ್ಲ. ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗುವ ಬೆಂಗಳೂರಿನ ವ್ಯಕ್ತಿಗಳು ಚುನಾವಣೆ ಮುಗಿದ ಮೇಲೆ ಬರುವುದೇ ಇಲ್ಲ. ಕಾರ್ಯಕರ್ತರ ಕಷ್ಟ ಸುಖ ಕೇಳುವವರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕೆಲ ಕಾರ್ಯಕರ್ತರು, ನಾಯಕರ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಜಿಲ್ಲೆಯಲ್ಲಿಯೇ ಪಕ್ಷ ಕಟ್ಟುವ ನಾಯಕರು ಸದೃಢವಾಗಿದ್ದಾರೆ. ಅವರಿಗೆ ಜವಾಬ್ದಾರಿ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಮುಖ ತೋರಿಸುವವರು ಬೇಡ ಎಂದು ಸಲಹೆ ನೀಡಿದರು.ಈ ವೇಳೆ ಸಂಜಯ್ ಜೈನ್ ಆಡಿದ ಮಾತಿಗೆ ಮುಖಂಡರಾದ ಎಂ.ಗೌತಮ್ ಗೌಡ ಮತ್ತು ಅವರ ಬೆಂಬಲಿಗ ಕಿಶನ್ ರವರು ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದರು. ಅಲ್ಲದೆ, ಸಂಜಯ್ ಜೈನ್ ಮೇಲೆ ಹಲ್ಲೆ ಮಾಡಿ ಅವರ ಬಟ್ಟೆ ಹರಿದಿದ್ದಾರೆ.
ಸಭೆಯಲ್ಲಿದ್ದ ಮುಖಂಡರು ಗೌತಮ್ ಗೌಡ ಬೆಂಬಲಿಗರನ್ನು ಸಮಾಧಾನ ಪಡಿಸಿ ಗಲಾಟೆ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.ಮುಖಂಡ ಗೌತಮ್ ಗೌಡ ಮತ್ತು ಅವರ ಬೆಂಬಲಿಗ ಕಿಶನ್ ಇಬ್ಬರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದಿದ್ದು ನಿಜ. ಆ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತು ಮುಂದಾಗುವ ಅನಾಹುತವನ್ನು ತಪ್ಪಿಸಿದರು ಎಂದು ಸಂಜಯ್ ಜೈನ್ ಪ್ರತಿಕ್ರಿಯೆ ನೀಡಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಎಸ್.ಆರ್.ನಾಗರಾಜು, ಪ್ರಸಾದ್ ಗೌಡ, ಬಿ.ನಾಗೇಶ್, ಆರ್.ವಿ.ಸುರೇಶ್, ಪಿ.ಶಿವಾನಂದ, ಬಿ.ಅಶೋಕ್, ದರ್ಶನ್ ರೆಡ್ಡಿ, ಚಂದನ್ ಮೋರೆ, ರುದ್ರದೇವರು, ಭೂಪತಿ ಮತ್ತಿತರರು ಹಾಜರಿದ್ದರು.--
....ಕೋಟ್ ...ಬಿಜೆಪಿ ಮುಖಂಡ ಗೌತಮ್ ಗೌಡ ಬೆಂಬಲಿಗ ಕಿಶನ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ದರ್ಪ ತೋರುತ್ತಿರುವುದು ಹೊಸದೇನಲ್ಲ. ಈ ಹಿಂದೆ ನನ್ನ ಮತ್ತು ಪಕ್ಷದ ಹಿರಿಯ ಕಾರ್ಯಕರ್ತರ ಬಿಜೆಪಿ ಮಂಜು ಮೇಲೂ ಹಲ್ಲೆ ನಡೆಸಿದ್ದರು. ನನ್ನ ಮೇಲಿನ ಹಲ್ಲೆ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ.
- ಸಂಜಯ್ ಜೈನ್, ಪ್ರಧಾನ ಕಾರ್ಯದರ್ಶಿ, ನಗರ ಘಟಕ, ಬಿಜೆಪಿ.-----
19ಕೆಆರ್ ಎಂಎನ್ 2.ಜೆಪಿಜಿಬಿಜೆಪಿ ಮಂಡಲವಾರು ಸಭೆಯಲ್ಲಿ ಕಾರ್ಯಕರ್ತರ ಗದ್ದಲ
---