ಸಾರಾಂಶ
ಗಂಗಾವತಿ: ಬಿಜೆಪಿ ನಗರ ಘಟಕ ಯುವ ಮೋರ್ಚಾದ ಅಧ್ಯಕ್ಷ ವೆಂಕಟೇಶ (31) ಅವರನ್ನು ಮಂಗಳವಾರ ತಡ ರಾತ್ರಿ 1.30 ರ ಹೊತ್ತಿಗೆ ನಗರದ ಎಪಿಎಂಸಿ ರಸ್ತೆಯ ರಿಲಯನ್ಸ್ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬರ್ಬರವಾಗಿ ಹತ್ಯೆಗೈದಿದ್ದು, ಈ ಘಟನೆಗೆ ಸಂಬಂಧಿಸಿದಂಯೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬೈಕ್ ಮೇಲೆ ಮನೆಗೆ ತೆರುಳುತ್ತಿದ್ದ ವೆಂಕಟೇಶನಿಗೆ ಎಪಿಎಂಸಿ ಮಾರ್ಗದಲ್ಲಿ ಹಿಂದಿನಿಂದ ಕಾರು ಡಿಕ್ಕಿ ಹೊಡಿಸಿದ್ದಾರೆ. ಆಗ ವೆಂಕಟೇಶ ಕೆಳಗೆ ಬೀಳುತ್ತಿದ್ದಂತೆ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದು ವೆಂಕಟೇಶನಿಗೆ ಮಚ್ಚು, ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.ಹಂತಕರು ತಾವು ತಂದಿದ್ದ ಕಾರು ಕೆಟ್ಟಿದ್ದರಿಂದ ಆನೆಗೊಂದಿ ಮಾರ್ಗದ ವಿವೇಕಾನಂದ ಕಾಲನಿ ಬಳಿ ಅದನ್ನು ಬಿಟ್ಟು ಪರಾರಿಯಾಗಿದ್ದಾರೆ. ವೆಂಕಟೇಶ ಬೈಕ್ ಹಿಂದೆ ಬರುತ್ತಿದ್ದ ಆತ್ಮೀಯರು ಈ ಕೃತ್ಯ ಕಂಡು ಭಯಭೀತರಾಗಿ ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಗಾಯಾಳು ವೆಂಕಟೇಶ್ ಕೊನೆಯುಸಿರು ಎಳೆದಿದ್ದಾನೆ.
ಕಾರಿನಲ್ಲಿ ಇದ್ದ ಮದ್ಯದ ಬಾಟಲಿ, ಪ್ಯಾಂಟ್- ಶರ್ಟ್ ಮತ್ತು ತೆಲಗು ಪತ್ರಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಳೇ ದ್ವೇಷ:
2023ರಲ್ಲಿ ರಾಯಚೂರು ರಸ್ತೆಯ ರೈಲ್ವೆ ಸೇತುವೆ ಕೆಳಗೆ ಮಾರುತಿ ಎನ್ನುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿತ್ತು. ಈ ಹಲ್ಲೆಕೋರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂಬ ಕಾರಣಕ್ಕೆ ಆ ಗ್ಯಾಂಗ್ ವೆಂಕಟೇಶ ಕೊಲೆಗೆ ಸಂಚು ರೂಪಿಸಿತ್ತು. ಇಂದು ನಾಲ್ವರು ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆಹಂತಕರು ವಶಕ್ಕೆ:
ಈ ಹತ್ಯೆ ಸುದ್ದಿ ತಿಳಿಯುದ್ದಂತೆ ಎಸ್ಪಿ ರಾಮ್ ಎಲ್ ಅರಸಿದ್ದಿ 4 ತಂಡ ರಚಿಸಿದರು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಆಧಾರದ ಮೇಲೆ ಪತ್ತೆ ಹಚ್ಚಲಾಗಿದ್ದು, ಗಂಗಾವತಿಯ ಸಲೀಂ, ಬೆಳಗಾವಿಯ ಧನರಾಜ್ ಸೋಲಂಕಿ, ಬೆಂಗಳೂರು ಮೂಲದ ಭೀಮಾ, ಮಾರತಹಳ್ಳಿಯ ವಿಜಯ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಿಜೆಪಿ ನಗರ ಘಟಕ ಯುವ ಮೋರ್ಚಾದ ಅಧ್ಯಕ್ಷ ವೆಂಕಟೇಶ ಹತ್ಯೆ ಪ್ರಕರಣದಲ್ಲಿ ಗಂಗಾವತಿಯ ರವಿ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದೆ. ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಮಾಡಿ, ಬಂಧಿಸಿದ್ದೇವೆ. ತನಿಖೆ ಮುಂದುವರೆದಿದೆ ಎಂದು ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ತಿಳಿಸಿದ್ದಾರೆ.