ಸಾರಾಂಶ
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭ ವಾರ್ತೆ ಕುಷ್ಟಗಿಬಿಜೆಪಿಯವರು ಕೇವಲ ಸುಳ್ಳು ಹೇಳುವ ಮೂಲಕ ಚುನಾವಣೆ ನಡೆಸುತ್ತಿದ್ದಾರೆ. ದೇಶದಲ್ಲಿ ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹಾಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಚಳಗೇರಾ ಗ್ರಾಮದಲ್ಲಿ ನಡೆದ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿಯವರು ಕೇವಲ ಸುಳ್ಳು ಭರವಸೆ ನೀಡುವ ಮೂಲಕ ಮತದಾರರಿಗೆ ವಂಚನೆ ಮಾಡುತ್ತಿದ್ದು, ದುಡ್ಡಿನ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ಈ ಚುನಾವಣೆಯಲ್ಲಿ ಅವರು ದುಡ್ಡು ಕೊಟ್ಟರೆ ಪಡೆದುಕೊಂಡು ಕಾಂಗ್ರೆಸ್ಗೆ ಮತ ಹಾಕಬೇಕು ಎಂದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಕಪ್ಪು ಹಣ ತಂದು ₹15 ಲಕ್ಷ ನೀಡುತ್ತೇವೆ ಎಂದು ಮತ ಹಾಕಿಸಿಕೊಂಡು ಹದಿನೈದು ಪೈಸೆಯೂ ನೀಡಲಿಲ್ಲ. ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದಾರೆ ಹೊರತು, ಉದ್ಯೋಗ ಸೃಷ್ಟಿಸಿಲ್ಲ. ದೇಶದಲ್ಲಿ ಶೇ. 83ರಷ್ಟು ನಿರುದ್ಯೋಗ ತಾಂಡವವಾಡುತ್ತಿದೆ ಎಂಬ ವರದಿ ಇದೆ. 100 ಸ್ಮಾರ್ಟ್ಸಿಟಿ ಮಾಡುವುದಾಗಿ ಹೇಳಿ ಒಂದೂ ಸರಿಯಾಗಿ ಮಾಡಿಲ್ಲ. ದೇಶದಲ್ಲಿ ಒಂದು ಡ್ಯಾಂ ಕಟ್ಟಲಿಲ್ಲ, ಬಡವರಿಗೆ ಆಶ್ರಯ ಮನೆ ನೀಡಲಿಲ್ಲ. ಕೇವಲ ಅಧಿಕಾರಕ್ಕಾಗಿ ಧರ್ಮಗಳ ನಡುವೆ ಕಲಹ ಉಂಟು ಮಾಡುವುದೇ ಇವರ ಕೆಲಸವಾಗಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ನಮ್ಮ ದೇಶದ ಸಾಲವು ಹೆಚ್ಚಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ನಮ್ಮ ಭಾಗಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯ. ನಮ್ಮ ಕುಷ್ಟಗಿಗೆ ರೈಲ್ವೆ ಬಂದಿದೆ ಎಂದರೆ ಅದಕ್ಕೆ ಕಾರಣ ನಾನು ಮತ್ತು ಬಸವರಾಜ ರಾಯರೆಡ್ಡಿ ಎಂಬ ಹೆಮ್ಮೆ ನಮಗಿದೆ. ನಾನು ಶಾಸಕನಾದ ಸಮಯದಲ್ಲಿ 17 ಕೆರೆ ತುಂಬಿಸುವ ಕಾರ್ಯ ಮಾಡಿದ್ದೇನೆ. ಕುಷ್ಟಗಿಯ ಶಾಸಕರು ಅಭಿವೃದ್ಧಿಯ ವಿಚಾರ ಇಟ್ಟುಕೊಂಡು ಮತ ಕೇಳಲಿ ಎಂದರು.ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಾನು ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ನನಗೆ ಆಶೀರ್ವಾದ ಮಾಡಿ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪರ ಉತ್ತಮ ವಾತಾವರಣ ಇದೆ. ಅದರಂತೆ ಕೆಂದ್ರದಲ್ಲಿ ನಮ್ಮ ಸರ್ಕಾರ ಬಂದ ಕೂಡಲೇ ಗ್ಯಾರಂಟಿಗಳನ್ನು ಜಾರಿ ಮಾಡುವುದು ಶತಸಿದ್ಧ. ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸಿಗರಿಗೆ ಇಲ್ಲ. ಬಿಜೆಪಿಗರು ಸಹ ಹೆಚ್ಚು ಅನುಕೂಲ ಪಡೆದಿದ್ದಾರೆ. ಆದ್ದರಿಂದ ಮತದಾರರ ಮನವೊಲಿಸಿ ಕಾಂಗ್ರೆಸ್ಗೆ ಮತ ಹಾಕಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ, ಜಿಪಂ ಮಾಜಿ ಸದಸ್ಯ ಹನಮಗೌಡ ಪಾಟೀಲ, ದೊಡ್ಡಬಸವನಗೌಡ ಬಯ್ಯಾಪುರ, ಲಾಡ್ಲೇಮಷಾಕ ದೋಟಿಹಾಳ, ಅಮರೇಗೌಡ ವಕೀಲ, ಶಂಕರಗೌಡ ವಕೀಲ, ನಿರ್ಮಲಾ ಕರಡಿ, ವಿಶ್ವನಾಥ ಕನ್ನೂರ, ಯಂಕಪ್ಪ ಚವ್ಹಾಣ, ವಸಂತ ಮೇಲಿನಮನಿ ಸೇರಿದಂತೆ ಇತರರಿದ್ದರು.