ಕಾಂಗ್ರೆಸ್‌ನಿಂದ ಬ್ಲ್ಯಾಕ್‍ಮೇಲ್ ರಾಜಕಾರಣ: ತೇಲ್ಕೂರ್‌

| Published : Feb 01 2024, 02:02 AM IST

ಕಾಂಗ್ರೆಸ್‌ನಿಂದ ಬ್ಲ್ಯಾಕ್‍ಮೇಲ್ ರಾಜಕಾರಣ: ತೇಲ್ಕೂರ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟರೆ ಗ್ಯಾರಂಟಿಗಳು ಮುಂದುವರೆಯುತ್ತವೆ. ಇಲ್ಲವಾದರೆ ಅದು ಬಂದ್ ಆಗಲಿದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಯನ್ನು ಗಮನಿಸಿದರೆ ಕಾಂಗ್ರೆಸ್ ಬ್ಲ್ಯಾಕ್‍ಮೇಲ್ ರಾಜಕಾರಣ ಮಾಡುವುದು ಗೊತ್ತಾಗುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ/ಸೇಡಂ

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟರೆ ಗ್ಯಾರಂಟಿಗಳು ಮುಂದುವರೆಯುತ್ತವೆ. ಇಲ್ಲವಾದರೆ ಅದು ಬಂದ್ ಆಗಲಿದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಯನ್ನು ಗಮನಿಸಿದರೆ ಕಾಂಗ್ರೆಸ್ ಬ್ಲ್ಯಾಕ್‍ಮೇಲ್ ರಾಜಕಾರಣ ಮಾಡುವುದು ಗೊತ್ತಾಗುತ್ತದೆ ಎಂದು ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ತೇಲ್ಕೂರ್‌ ಅವರು, ಕಾಂಗ್ರೆಸ್ ಪಕ್ಷದ್ದು ಬೋಗಸ್ ಗ್ಯಾರಂಟಿ ಎಂದು ಬಿಜೆಪಿ ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡಿದೆ, ಇದೀಗ ಶಾಸಕರೇ ಹೇಳಿಕೆ ನೀಡುತ್ತಿದ್ದು ಇದು ಸಂವಿಧಾನ ವಿರೋಧಿ. ಅವರು ಕೊಟ್ಟ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿವೆಯೇ? ಎಷ್ಟು ಜನ ಬಿಪಿಎಲ್ ಕಾರ್ಡ್‍ದಾರರನ್ನು ಇವತ್ತು ಎಪಿಎಲ್ ಮಾಡಿದ್ದಾರೆ? ಪ್ರತಿದಿನ ಫುಡ್ ಇನ್ಸ್‌ಪೆಕ್ಟರ್‌ಗಳು, ಫುಡ್ ಶಿರಸ್ತೇದಾರರು ಎಪಿಎಲ್ ಕಾರ್ಡ್‍ದಾರರನ್ನು ಎಪಿಎಲ್ ಕಾರ್ಡ್‍ದಾರರನ್ನಾಗಿ ಮಾಡುತ್ತಿದ್ದಾರೆಂದು ತೇಲ್ಕೂರ್‌ ದೂರಿದ್ದಾರೆ.

ಇವತ್ತು ರಾಜ್ಯ, ದೇಶದಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ಕಾಂಗ್ರೆಸ್ಸಿಗರಿಗೆ ಗೊತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಅದಕ್ಕಾಗಿ ಬಾಲಕೃಷ್ಣರವರು ಅಲ್ಲಿ ಹೋಗಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆಂದು ತೇಲ್ಕೂರ್‌ ತಿವಿದಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ರೈತರು 2 ಸಾವಿರವನ್ನು ಹಿಂತಿರುಗಿಸಲು ಮುಂದಾಗಿದ್ದಾರೆ. ಇವತ್ತು ಒಂದು ಎಕರೆ ಕಟಾವು ಮಾಡಲು 4,500 ರು. ಬೇಕು. ಇವರು 2 ಸಾವಿರ ಬರ ಪರಿಹಾರ ಕೊಟ್ಟಿದ್ದಾರೆ. ಬರಕ್ಕೂ ಪರಿಹಾರ ಇಲ್ಲ. ಅಭಿವೃದ್ಧಿಗೂ ಅನುದಾನ ಇಲ್ಲ. ಅವಶ್ಯಕತೆ ಇರುವ ಕಾಮಗಾರಿಗಳಿಗೆ ದುಡ್ಡು ಬಿಡುಗಡೆ ಮಾಡುತ್ತಿಲ್ಲವೆಂದ ತೇಲ್ಕೂರ್‌ ದೂರಿದ್ದಾರೆ.

ರಾಜ್ಯದಲ್ಲಿ ಸರಕಾರ ಇದ್ದರೂ ಇಲ್ಲದಂತಹ ಸ್ಥಿತಿ ಇದೆ. ಕಾಂಗ್ರೆಸ್ ತನ್ನ ಶಾಸಕರ ಹೇಳಿಕೆ ಮೂಲಕ ಸೋಲನ್ನು ಒಪ್ಪಿಕೊಂಡಂತಾಗಿದೆ. ಈ ರೀತಿ ಬ್ಲ್ಯಾಕ್‍ಮೇಲ್ ರಾಜಕಾರಣ, ಜನರನ್ನು ಹೆದರಿಸುವ ಕಾರ್ಯ ನಡೆಯೋದಿಲ್ಲ. ಈ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂದು ರಾಜಕುಮಾರ್‌ ತೇಲ್ಕೂರ್‌ ಭವಿಷ್ಯ ನುಡಿದಿದ್ದಾರೆ.