ಕಾಪು: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಾಪು ಹೊಸ ಮಾರಿಗುಡಿಯ ಮಾರಿಯಮ್ಮನ ಪರಮಭಕ್ತರಾಗಿದ್ದು, ಅವರ ಯಶಸ್ಸಿಗೆ ಕಾಪು ಅಮ್ಮನ ಆಶೀರ್ವಾದವೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಸೂರ್ಯ ಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಇಲ್ಲಿನ ಕಾಪುವಿನಲ್ಲಿ ಜನಿಸಿದವರು. ಮುಂಬೈಯಲ್ಲಿ ಸೂರ್ಯ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ದೇವಿಶಾ ಮನೆಯವರು ಕಾಪು ಅಮ್ಮನ ಪರಮಭಕ್ತರು, ದೇವಿಶಾ ಮತ್ತು ಸೂರ್ಯಕುಮಾರ್ ಮದುವೆಯಾದ ಮೇಲೆ ಕಾಪುವಿಗೆ 2 ಬಾರಿ ಬಂದು ಅಮ್ಮನ ದರ್ಶನ ಪಡೆದಿದ್ದರು. 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ, ಸೂರ್ಯಕುಮಾರ್ ಮತ್ತು ದೇವಿಶಾ ಆಗ ಜೀರ್ಣೋದ್ಧಾರಗೊಳ್ಳುತ್ತಿದ್ದ ಮಾರಿಯಮ್ಮನ ಗುಡಿಗೆ ಭೇಟಿ ನೀಡಿದ್ದು, ಕಲಾತ್ಮಕ ಕಂಬದ ವೆಚ್ಚ 25 ಲಕ್ಷ ರು. ದೇಣಿಗೆಯಾಗಿ ನೀಡಿದ್ದರು.ಈ ವೇಳೆ ಅವರ ಪರವಾಗಿ ಪ್ರಾರ್ಥನೆ ಮಾಡಿದ್ದ ಗುಡಿಯ ಅರ್ಚಕರು ಸೂರ್ಯಕುಮಾರ್ ಭಾರತ ಕ್ರಿಕೆಟ್ ತಂಡದ ನಾಯಕನಾಗಲಿ ಹಾರೈಸಿದ್ದರು. ಅದಾಗಿ ಕೇವಲ 9 ದಿನಗಳಲ್ಲಿ, ಜು.18 ರಂದು ಸೂರ್ಯಕುಮಾರ್ ಭಾರತ ತಂಡದ ಕ್ಯಾಪ್ಟನ್ ಆಗಿ ಘೋಷಣೆಯಾಗಿದ್ದರು.ನಂತರ 2025ರ ಮಾ. 1ರಂದು ಪುನಃ ಬಂದು ಮಾರಿಗುಡಿಯ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಗದ್ದುಗೆ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ನಾಯಕನಾದ ನಂತರ ತಂಡದ ಅತ್ಯುತ್ತಮ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಅವರ ವೈಯುಕ್ತಿಕ ಆಟದಲ್ಲಿ ಏರುಪೇರಾಗಿತ್ತು, ಅವರಿಂದ ನಿರೀಕ್ಷಿತ ಆಟ ಸಾಧ್ಯವಾಗಿರಲಿಲ್ಲ, ಈ ಹಿನ್ನೆಲೆಯಲ್ಲಿ ದೇವಿಶಾ ಮತ್ತೆ ಕಾಪು ಮಾರಿ ಗುಡಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದದ್ದರು. ಇದಾದ ಬಳಿಕ, ಸೂರ್ಯಕುಮಾರ್ ಅವರ ಆಟ ಸಾಕಷ್ಟು ಉತ್ತಮಗೊಂಡಿತ್ತು. ದೇವಿಶಾ ಅವರು ಟಿ20 ಟೂರ್ನಿ ಆರಂಭಕ್ಕೆ ಮೊದಲು ಬಂದಿದ್ದ ದೇವಿಶಾ ಅವರಲ್ಲಿ, ಗುಡಿಯ ಪ್ರಮುಖರು ಕಪ್ ಗೆದ್ದ ನಂತರ ಪುನಃ ಗಂಡನ ಜೊತೆ ಕ್ಷೇತ್ರಕ್ಕೆ ಬರಬೇಕೆಂದು ಸಲಹೆ ಮಾಡಿದ್ದರು, ದೇವಿಶಾ ಅವರು ದೇವಿಯ ಸಮ್ಮುಖದಲ್ಲಿ ಬೆಲ್ಲ ಮತ್ತು ಸಕ್ಕರೆ ತುಲಾಭಾರ ನಡೆಸುವುದಾಗಿ ಸಂಕಲ್ಪಿಸಿದ್ದರು.ಅವರ ಪೂಜೆ ಪ್ರಾರ್ಥನೆಯ ಫಲವೊ ಎಂಬಂತೆ ಸೂರ್ಯಕುಮಾರ್ ನೇತೃತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದೆ. ಸದ್ಯದಲ್ಲಿಯೇ ಸೂರ್ಯಕುಮಾರ್ - ದೇವಿಶಾ ಅವರು ಕಾಪು ಮಾರಿ ಗುಡಿಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.