ಬಿಎಲ್‌ಒ ಕೆಲಸದಿಂದ ವಿನಾಯಿತಿ ನೀಡಿ

| Published : Jun 18 2025, 11:49 PM IST

ಸಾರಾಂಶ

ಚುನಾವಣಾ ಕಾರ್ಯ ಮತ್ತು ಗುರುತಿನ ಚೀಟಿಗಳ ದಾಖಲಾತಿ ಕೆಲಸಕ್ಕೆ ಶಿಕ್ಷಕರನ್ನು ಬಿಎಲ್‌ಒಗಳನ್ನಾಡಿ ನೇಮಕ ಮಾಡಲಾಗಿದೆ. ಇದರಿಂದ ಶೈಕ್ಷಣಿಕ ಶಾಲಾ ಚಟುವಟಿಕೆಗಳಲ್ಲಿ ಕರ್ತವ್ಯ ಮಾಡಲು ಕಷ್ಟವಾಗುತ್ತಿದೆ.

ಕಾರಟಗಿ:

ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಕೆಲಸದಿಂದ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಕಾರಟಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸಿ ಬುಧವಾರ ಉಪ ತಹಸೀಲ್ದಾರ್ ಜಗದೀಶಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿಠ್ಠಲ್ ಜೀರಗಾಳಿ, ಚುನಾವಣಾ ಕಾರ್ಯ ಮತ್ತು ಗುರುತಿನ ಚೀಟಿಗಳ ದಾಖಲಾತಿ ಕೆಲಸಕ್ಕೆ ಶಿಕ್ಷಕರನ್ನು ಬಿಎಲ್‌ಒಗಳನ್ನಾಡಿ ನೇಮಕ ಮಾಡಲಾಗಿದೆ. ಇದರಿಂದ ಶೈಕ್ಷಣಿಕ ಶಾಲಾ ಚಟುವಟಿಕೆಗಳಲ್ಲಿ ಕರ್ತವ್ಯ ಮಾಡಲು ಕಷ್ಟವಾಗುತ್ತಿದೆ. ಮಕ್ಕಳ ಶಿಕ್ಷಣ ಪ್ರಗತಿ ಕುಂಠಿತವಾಗುತ್ತಿದೆ. ಕೂಡಲೇ ಬಿಎಲ್‌ಒ ಸೇವಾ ಕಾರ್ಯದಿಂದ ನಿಯೋಜಿತ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ್ ರ‍್ಯಾವಳದ್ ಹಾಗೂ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ವಕ್ಕಳದ ಮಾತನಾಡಿ, ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಪ್ರತಿ ಮತಗಟ್ಟೆಗೆ ಅಧಿಕಾರಿಗಳಾಗಿ ಶಿಕ್ಷಕರನ್ನು ನೇಮಕಾತಿ ಮಾಡುತ್ತಿದ್ದು, ಸೇವಾನಿವೃತ್ತಿ ಅಂಚಿನಲ್ಲಿರುವ ೫೫ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಶಿಕ್ಷಕರನ್ನು ಬಿಎಲ್‌ಒ ಕಾರ್ಯದಿಂದ ವಿನಾಯಿತಿ ನೀಡಬೇಕು. ಈಗಾಗಲೇ ಸಾಕಷ್ಟು ಬೋಧನೇತರ ಕಾರ್ಯ ಮಾಡುತ್ತಿದ್ದು, ಮಕ್ಕಳ ಕಲಿಕೆಯ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಕಾರ್ಯವನ್ನು ಬೇರೆ ಇಲಾಖೆಯ ಸಿ ದರ್ಜೆಯ ನೌಕರರಿಗೆ ಒಪ್ಪಿಸಿ ಶಿಕ್ಷಕರನ್ನು ಬೋಧನಾ ಕಾರ್ಯ ಹಾಗೂ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಮಾತನಾಡಿ, ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಳಕಳಿಯಿಂದ ನೌಕರರ ಸಂಘ ನೈತಿಕ ಬೆಂಬಲ ನೀಡುತ್ತಿದೆ. ಶಿಕ್ಷಕರ ಬದಲಿಗೆ ಪರ್ಯಾಯ ನೌಕರರನ್ನು ಈ ಕೆಲಸಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಶಾಲಾ ಶಿಕ್ಷಕರ ಸಂಘದ ದ್ಯಾಮಣ್ಣ ಬೆನಕಟ್ಟಿ, ಹೋಮಣ್ಣ, ಅನುಸೂಯ ಕಂಚಿಮಠ, ಮಹಾಂತಮ್ಮ ಮೇಟಿ, ಭೀಮಣ್ಣ ಕರಡಿ, ಸುಮಾ ನಾಯಕ, ಮಹಮ್ಮದ್ ಅಲಿ, ಜಟಿಂಗರಾಯ ದಳವಾಯಿ, ತಿಮ್ಮಣ್ಣ ನಾಯಕ, ಮಂಗಳಾ ಹೊಸಮನಿ, ಅನುಸೂಯ ಹಂಚಿನಾಳ, ಸಣ್ಣ ಯಮನಪ್ಪ, ಜಂಬುನಾಥ್ ತುರಾಯದ, ಹನುಮೇಶ, ಯೂಸೂಫ್‌, ಯಂಕಪ್ಪ, ಕರಿಯಪ್ಪ, ಗಂಗಮ್ಮ, ನಿರ್ಮಲಾ, ಚೈತ್ರಾಂಜಲಿ ಇದ್ದರು.