ಹಾನಗಲ್ಲ: ಹಾನಗಲ್ಲ ಶಾಸಕ ಶ್ರೀನಿವಾಸ್ ಮಾನೆ ಅವರ ೫೨ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಆ.6 ರಂದು ತಾಲೂಕಿನ ೭ ಕಡೆಗೆ ರಕ್ತದಾನ ಶಿಬಿರ, ೩ ಧರ್ಮ ಗುರುಗಳಿಗೆ ಭಾವೈಕ್ಯ ರಕ್ತ ತುಲಾಭಾರ ಹಾಗೂ ಆ. ೯ರಂದು ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.
ಹಾವೇರಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ ಶನಿವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಹಾನಗಲ್ಲ ತಾಲೂಕಿನ ಇತಿಹಾಸದಲ್ಲಿ ಸಮಾಜ ಸೇವೆಯಲ್ಲಿ ಅತ್ಯಂತ ಗಟ್ಟಿ ಹೆಜ್ಜೆ ಹಾಕಿ ಆರೋಗ್ಯ ಶಿಕ್ಷಣ ಸಮಾಜಮುಖಿ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಶಾಸಕ ಶ್ರೀನಿವಾಸ್ ಮಾನೆ ಅವರು, ತಮಗೆ ಹಾರ ತುರಾಯಿ ಬಹುಪರಾಕುಗಳಿಗೆ ಮನ್ನಣೆ ನೀಡದೇ ಸಮಾಜದ ಹಿತಕ್ಕಾಗಿ ಎಲ್ಲವನ್ನೂ ವಿನಿಯೋಗಿಸುವ ಸಂಕಲ್ಪದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷವೂ ಒಂದೇ ಕಡೆ ರಕ್ತದಾನ ಶಿಬಿರ ನಡೆಸಲಾಗಿತ್ತು. ಈ ಬಾರಿ ತಾಲೂಕಿನ ಹಾನಗಲ್ಲ ಪಟ್ಟಣ, ಅಕ್ಕಿಆಲೂರು, ಆಡೂರು, ಬೆಳಗಾಲಪೇಟೆ, ಬಮ್ಮನಹಳ್ಳಿ, ಹಿರೂರು, ತಿಳವಳ್ಳಿಯಲ್ಲಿ ಬೆಳಗ್ಗೆಯಿಂದಲೇ ರಕ್ತದಾನ ಶಿಬಿರಗಳು ನಡೆಯಲಿವೆ. ೭೦೦ ಯುನಿಟ್ ರಕ್ತ ದಾನ ಪಡೆಯುವ ಸಿದ್ಧತೆ ನಡೆದಿದ್ದು, ಸಂಗ್ರಹಿಸಿದ ರಕ್ತವನ್ನು ಹಾವೇರಿ, ಹುಬ್ಬಳ್ಳಿ, ರಾಣಿಬೆನ್ನೂರು, ದಾವಣಗೆರೆಯ ರಕ್ತ ಸಂಗ್ರಹಣಾ ಕೇಂದ್ರಗಳಿಗೆ ಕಳಿಸಲಾಗುತ್ತದೆ ಎಂದರು.ಸಂಜೆ ೬ ಗಂಟೆಗೆ ಪಟ್ಟಣದ ಸದಾಶಿವ ಮಂಗಲ ಭವನದಲ್ಲಿ ೩ ಧರ್ಮಗಳ ಗುರುಗಳಾದ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಕ್ರಿಶ್ಚಿಯನ್ ಧರ್ಮಗುರು ಬೆಂಗಳೂರಿನ ಫಾದರ್ ದೀಪಕ್ ಜೋಸೆಫ್, ಮುಸ್ಲಿಂ ಧರ್ಮಗುರು ಕರ್ನಾಟಕ ಸ್ಟೇಟ್ ಉಲಮಾ ಸೊಸೈಟಿ ಕಾರ್ಯದರ್ಶಿ ಹಫೀಜ್ ಹಜರತ್ಅಲಿ ಸುಳ್ಳಳ್ಳಿ ಅವರಿಗೆ ಒಂದೇ ವೇದಿಕೆಯಲ್ಲಿ ಏಕ ಕಾಲಕ್ಕೆ ಭಾವೈಕ್ಯ ರಕ್ತತುಲಾಭಾರವನ್ನು ಆಯೋಜಿಸಲಾಗಿದೆ.
ಆ. ೯ರಂದು ಇಲ್ಲಿನ ಶಾಸಕರ ಮಾದರಿ ಶಾಲೆ ಆವರಣದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಎಸ್ಡಿಎಂ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು ಹೃದ್ರೋಗ, ನರರೋಗ, ಮೆದುಳು, ಸ್ತ್ರೀರೋಗ, ಮಕ್ಕಳ ರೋಗ, ಚರ್ಮ, ದಂತ, ಎಲುಬು ಕೀಲು, ನೇತ್ರ ರೋಗ ತಪಾಸಣೆಯಲ್ಲದೆ, ಜನರಲ್ ಮೆಡಿಸಿನ್, ಸರ್ಜನ್ ವೈದ್ಯರು ಕೂಡ ವಿವಿಧ ರೋಗಗಳ ತಪಾಸಣೆ ಮಾಡುವರು ಎಂದು ಹನುಮಂತಪ್ಪ ಮರಗಡಿ ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜು ಗುರಣ್ಣನವರ, ಬಸನಗೌಡ ಪಾಟೀಲ, ನಗರ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಬಾಳೂರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ ಜಮಾದಾರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಈರಪ್ಪ ಬೈಲವಾಳ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಬಗರ್ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್ಲ, ಶಿವಣ್ಣ ಗೊಲ್ಲರ, ಆದರ್ಶ ಶೆಟ್ಟಿ, ರವಿ ದೇಶಪಾಂಡೆ, ಸಂತೋಷ ದುಂಡಣ್ಣನವರ, ಬಸಣ್ಣ ವಾಲೀಕಾರ, ಲಕ್ಷ್ಮಣ ವರ್ದಿ, ಅಬ್ದುಲ್ ಹಳ್ಳೂರ, ಅರುಣ ಮಣ್ಣಮ್ಮನವರ ಇದ್ದರು.
ಲಾಂಛನ ಬಿಡುಗಡೆ: ಇದೇ ಸಂದರ್ಭದಲ್ಲಿ ಜನನಾಯಕ ಶ್ರೀನಿವಾಸ ಮಾನೆ ೫೨ನೇ ಜನ್ಮ ದಿನ ಲಾಂಛನವನ್ನು ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಬಿಡುಗಡೆಗೊಳಿಸಿದರು.