ಸಾರಾಂಶ
ಕೊಪ್ಪಳ: ರಕ್ತದಾನದ ಮಹತ್ವ ಪ್ರತಿಯೊಬ್ಬರು ಅರಿಯಬೇಕಾಗಿದೆ. ಇದರಿಂದ ಆರೋಗ್ಯ ವೃದ್ಧಿಯೂ ಆಗಲಿದೆ ಎಂದು ರೋಗ ನಿಧಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅನಿರುದ್ಧ ವಸಂತ ಕುಷ್ಟಗಿ ಹೇಳಿದರು.
ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಯೋಧ್ಯನ್ಸ್ ಬ್ಯಾಚ್ 2022 ರ ವೈದ್ಯ ವಿದ್ಯಾರ್ಥಿಗಳು ರೋಗ ನಿಧಾನಶಾಸ್ತ್ರ ವಿಭಾಗ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಶಿಬಿರವನ್ನು ಆಪರೇಷನ್ ಸಿಂದೂರ ಪ್ರಹಾರಕ್ಕೆ,ಪೆಹಲ್ಗಾಂ ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ, ಬೆಂಗಳೂರು ಕಾಲ ತುಳಿತದಲ್ಲಿ ಬಲಿಯಾದ ಜೀವಿಗಳಿಗೆ ಹಾಗೂ ಅಹಮದಾಬಾದ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ನಾವೆಲ್ಲರೂ ಕೂಡಿ ಸಮರ್ಪಣೆ ಮಾಡೋಣ, ರಕ್ತದಾನ ಇದೊಂದು ಸೇವೆ ಇದರಿಂದ ಕೊಟ್ಟವರಿಗೂ ಪಡೆದುಕೊಂಡವರಿಗೂ ಆರೋಗ್ಯ ಭಾಗ್ಯ ಎಂದರು.
ಶಿಬಿರದಲ್ಲಿ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವೈಜಾನಾಥ್ ಇಟಗಿ ಮಾತನಾಡಿ, ರಕ್ತದಾನ ಮಹಾದಾನ ಇದನ್ನು ಪ್ರತಿ ವರ್ಷ ನಮ್ಮ ಕಿಮ್ಸ್ ರೋಗ ನಿಧಾನಶಾಸ್ತ್ರ ವಿಭಾಗ, ವಿದ್ಯಾರ್ಥಿ ಗಳು ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಪ್ರತಿ ವರ್ಷ ನಡೆಸುತ್ತಿದ್ದೇವೆ. ಎಲ್ಲರಿಗೂ ಆರೋಗ್ಯ ಭಾಗ್ಯವಿರಲಿ ಎಂದರು.ಪ್ರಾಂಶುಪಾಲ ಡಾ.ಬಿ.ಎಸ್.ನಾರಾಯಣಿ, ಅಂಗ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಚನ್ನಬಸನ ಗೌಡಾ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ಪರಿವೀಕ್ಷಣೆಗೆ ಬಂದ ಡಾ. ಪಂಪಾ ರೆಡ್ಡಿ ಕೊಲ್ಲೂರು, ರೋಗ ನಿಧಾನ ಶಾಸ್ತ್ರ ವಿಭಾಗದ ಡಾ.ಹನುಮಂತ, ಬೋಧಕ ಬೋಧಕೇತರ ಸಿಬ್ಬಂದಿ, ಎಂಬಿಬಿಎಸ್, ಸ್ನಾತಕೋತ್ತರ, ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಿಮ್ಸ್ ಆಸ್ಪತ್ರೆಯಲ್ಲಿರುವ ರೆಡ್ ಕ್ರಾಸ್ ಸಂಸ್ಥೆ ರಕ್ತ ಭಂಡಾರದ ವೆಂಕಟೇಶ, ದೇವೇಂದ್ರಪ್ಪ, ವಿಜಯಕುಮಾರ, ಪರಶುರಾಮ್ ಹಾಗೂ ಇನ್ನೂ ಅನೇಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಶಿಬಿರದಲ್ಲಿ ಸುಮಾರು 82 ಮಹನೀಯರು ರಕ್ತ ದಾನ ಮಾಡಿ ಮಾನವೀಯತೆ ಮೆರೆದರು, ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಪ್ರಾರ್ಥನೆ ಹಾಡಿದರು.