ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಎಸ್ಸೆಸ್ಸೆಲ್ಸಿ ಗಣಿತ ವಿಷಯದಲ್ಲಿ 37 ಅಂಕ ಗಳಿಸಿರುವ ವಿದ್ಯಾರ್ಥಿನಿಗೆ ಕೇವಲ 7 ಅಂಕ ನೀಡಿ ಅನುತ್ತೀರ್ಣ ಮಾಡುವ ಮೂಲಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್ಇಎಬಿ) ಎಡವಟ್ಟು ಮಾಡಿದೆ.

ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಕಾಳಗಿ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ 80 ಅಂಕಗಳಿಗೆ ಕೇವಲ 7 ಅಂಕ ದಾಖಲಾಗಿದ್ದು, ಫಲಿತಾಂಶ ಫೇಲಾಗಿತ್ತು.

ಆದರೆ ತನಗೆ ಇನ್ನೂ ಹೆಚ್ಚು ಅಂಕ ಬರಬೇಕು ಎಂದು ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ತರಿಸಿಕೊಂಡಾಗ ಮೌಲ್ಯಮಾಪಕರು 80ಕ್ಕೆ 37 ಅಂಕ ನೀಡಿರುವುದು ಕಂಡು ಬಂದಿದ್ದು, ಫೇಲಾದ ಆತಂಕದಲ್ಲಿದ್ದ ವಿದ್ಯಾರ್ಥಿನಿ ಹಾಗೂ ತಂದೆ ತಾಯಿಗೆ ಆತಂಕ ದೂರವಾಗಿದೆ.

ಉತ್ತಮವಾಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಐಶ್ವರ್ಯ ಕಾಳಗಿ ಫಲಿತಾಂಶ ಬಂದಾಗ ಅಂಕಪಟ್ಟಿಯಲ್ಲಿ ತೋರಿಸಿದ ಅಂಕಗಳು 443 ಆದರೆ, ಈಗ 473 ಅಂಕಗಳಾಗಿವೆ.


ಕನ್ನಡ 115, ಇಂಗ್ಲೀಷ 67, ಹಿಂದಿ 80, ವಿಜ್ಞಾನ 71, ಸಮಾಜ ವಿಜ್ಞಾನ 83, ಗಣಿತದಲ್ಲಿ 37 ಬಂದಿದ್ದು, (ಇಂಟರ್‌ನಲ್‌ ಅಂಕ 20) ಒಟ್ಟು 57 ಅಂಕಗಳು ಬಂದಿವೆ.

ಗಣಿತ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಐಶ್ವರ್ಯ ಕಾಳಗಿ 7 ಅಂಕಗಳು ಬಂದಿರುವುದನ್ನು ನೋಡಿ ಆತಂಕಕ್ಕೆ ಒಳಗಾಗಿದ್ದಳು. ತನಗೆ ಇನ್ನೂ ಹೆಚ್ಚು ಅಂಕ ಬರಬೇಕು ಎಂದು ಪಾಲಕರು ಹಾಗೂ ಶಿಕ್ಷಕರ ಬಳಿ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಪಾಲಕರು ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಗೆ ಅರ್ಜಿ ಸಲ್ಲಿಸಿ ಮೌಲ್ಯಮಾಪನದ ಉತ್ತರ ಪತ್ರಿಕೆಯಲ್ಲಿ 37 ಅಂಕ ಎಂದು ನಮೂದಾಗಿದೆ. ಆನ್‌ಲೈನ್ ಎಂಟ್ರಿ ಮಾಡುವಾಗಿನ ನಿರ್ಲಕ್ಷ್ಯದಿಂದ ಬಾಲಕಿಗೆ 30 ಅಂಕ ಕಡಿಮೆ ಬಂದಿವೆ.

ಗಣಿತ ವಿಷಯಕ್ಕೆ ಕೇವಲ 7 ಅಂಕಗಳು ಬಂದಿರುವದು ನೋಡಿ ಆತಂಕವಾಗಿತ್ತು. ನನಗೆ ಹೆಚ್ಚಿನ ಅಂಕ ಬರಬೇಕೆನ್ನುವ ಭರವಸೆಯಿತ್ತು, ಆದ್ದರಿಂದ ಉತ್ತರ ಪತ್ರಿಕೆ ತರಿಸಲಾಗಿದ್ದು ಈಗ 7 ಅಂಕಗಳ ಬದಲಿಗೆ 37 ಅಂಕಗಳು ಬಂದಿವೆ ಎಂದು ವಿದ್ಯಾರ್ಥಿ ಐಶ್ವರ್ಯ ಕಾಳಗಿ ತಿಳಿಸಿದ್ದಾರೆ.