ಕನ್ನಡಪ್ರಭ ವಾರ್ತೆ ಪಾಂಡವಪುರ/ ಶ್ರೀರಂಗಪಟ್ಟಣ
ಕೆಆರ್ ಎಸ್ ಹಿನ್ನೀರಿನಲ್ಲಿ ಬೋಟಿಂಗ್ ಮಾಡುವ ವೇಳೆ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಬೋಟ್ ಮೊಗಚಿ ನೀರಿನಲ್ಲಿ ಮುಳಗಿ ಇಬ್ಬರು ಮೃತಪಟ್ಟು, ಮಗು ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿ ಬಳಿ ನಡೆದಿದೆ.ಕೇರಳದ ಕೊಚ್ಚಿನ್ ನಿವಾಸಿಗಳಾದ ಮಂಜುನಾಥ್ (72), ಸಜ್ವಿ ಮಂಜುನಾಥ್(70) ಮೃತ ವೃದ್ಧ ದಂಪತಿ. ಮೃತರ ಮಗಳು ಶ್ವೇತ, ಅಳಿಯ ಜಸ್ವಿನ್ ಹಾಗೂ ಪುತ್ರ ಅಯ್ಯನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಲತಃ ಕೇರಳದ ಕೊಚ್ಚಿ ನಿವಾಸಿಗಳಾದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿ- ಅಂತನಹಳ್ಳಿ ಸಮೀಪ ಇರುವ ಆರ್ ಎಂಎಸ್ ಸಿ ರೆಸಾರ್ಟ್ ಹಾಗೂ ಬೋಟಿಂಗ್ ಟ್ರೈನಿಂಗ್ ಗೆ ಆಗಮಿಸಿ ಶುಕ್ರವಾರ ಸಂಜೆ ಕೆಆರ್ ಎಸ್ ಹಿನ್ನೀರಿನಲ್ಲಿ ಕುಟುಂಬ ಸಮೇತವಾಗಿ ಬೋಟಿಂಗ್ ಮಾಡುತ್ತಿದ್ದರು.ಈ ವೇಳೆ ಆಕಸ್ಮಿಕವಾಗಿ ಜರುಗಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬೋಟ್ ಮೊಗಚಿ ಐವರು ನೀರಿನಲ್ಲಿ ಮುಳುಗಿದ್ದಾರೆ. ಐವರೂ ಸಹ ಸೇಪ್ಟಿ ಜಾಕೇಟ್ ಹಾಕಿದ್ದರು ಎನ್ನಲಾಗಿದೆ. ಬೋಟ್ ನೀರಿನಲ್ಲಿ ಮುಳುಗುತ್ತಿದ್ದಂತೆಯೇ ತಕ್ಷಣ ಮತ್ತೊಂದು ಬೋಟ್ ನಲ್ಲಿ ಕಾರ್ಯಾಚರಣೆ ನಡೆಸಿ ಶ್ವೇತಾ, ಪತಿ ಜಸ್ವಿನ್ ಹಾಗೂ ಪುತ್ರ ಅಯ್ಯನ್ ಅವರನ್ನು ರಕ್ಷಣೆ ಮಾಡಿದರು.
ಮೃತ ವಿ.ಮಂಜುನಾಥ್, ಪತ್ನಿ ಜಸ್ವಿ ಅವರನ್ನು ರಕ್ಷಣೆ ಮಾಡುವ ವೇಳೆಗೆ ಇಬ್ಬರು ತುಂಬಾ ತುರ್ತು ಪರಿಸ್ಥಿತಿಯಲ್ಲಿದ್ದರು. ಇಬ್ಬರನ್ನೂ ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಬಳಿಕ ಮೃತ ದೇಹಗಳನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಮೃತರ ಮಗಳು ಶ್ವೇತಾ ಅವರು ನೀಡಿದ ದೂರಿನ ಮೇರೆಗೆ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
-------------ಮೀನಿಗೆ ಮೇವು ಹಾಕಲು ಹೋಗಿ ಯುವಕ ಸಾವು:
ಪಾಂಡವಪುರ: ಮೀನಿಗೆ ಮೇವು ಹಾಕಲು ಹೋಗಿದ್ದ ಯುವಕ ದೋಣಿ ಮೊಗಚಿ ಮೃತಪಟ್ಟಿರುವ ಘಟನೆ ತಾಲೂಕಿನ ಗಿರಿಯಾರಹಳ್ಳಿಯ ಕೆಆರ್ ಎಸ್ ಹಿನ್ನೀರಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಗ್ರಾಮದ ಈಶ್ವರ ಅವರ ಪುತ್ರ ಮಧು(25) ಮೃತ ಯುವಕ. ಶುಕ್ರವಾರ ಸಂಜೆ ಕೆಆರ್ ಎಸ್ ಹಿನ್ನೀರಿನಲ್ಲಿ ಮೀನು ಹಿಡಿಯಲು ಬಲೆ ಬೀಸಿದ್ದ ಮಧು ಮೀನಿಗೆ ಮೇವು ಹಾಕಲು ದೋಣಿಯ ಮೂಲಕ ನದಿಗೆ ಇಳಿದಿದ್ದಾನೆ. ಆಕಸ್ಮಿಕವಾಗಿ ಬೀಸಿದ ಬಿರುಗಾಳಿ ಸಹಿತ ಮಳೆಯಿಂದ ದೋಣಿ ಮೊಗಚಿ ನದಿಯಲ್ಲಿ ಸಾವನ್ನಪ್ಪಿದ್ದಾನೆ.
ಈತನಿಗಾಗಿ ಆಗ್ನಿಶಾಮಕದಳ, ಸ್ಥಳೀಯ ಮೀನುಗಾರರು, ಈಜುಗಾರು, ಆರ್.ಎಂ.ಎಸ್.ಸಿ ಸೇಲಿಂಗ್ ಸಿಬ್ಬಂದಿ, ಶುಕ್ರವಾರ ರಾತ್ರಿ, ಶನಿವಾರ ಬೆಳಗ್ಗಿನಿಂದ ಸಂಜೆ ತನಕ ಹಿನ್ನೀರಿನಲ್ಲಿ ಹುಡುಕಾಟ ನಡೆಸಿದ್ದರೂ ಆತ ಪತ್ತೆಯಾಗಿಲ್ಲ. ಶನಿವಾರ ಮಧ್ಯಾಹ್ನವಾದರೂ ಮೃತ ಕಂಡು ಬರಲಿಲ್ಲ. ಈತನ ದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.