ಸಾರಾಂಶ
ತೋಟದ ಅಂಚಿನ ಬರೆಯಲ್ಲಿ ಉರುಳಿಗೆ ಸಿಕ್ಕಿ ಮೃತಪಟ್ಟ ಚಿರತೆಯೊಂದರ ಶವ ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ತೋಟದ ಅಂಚಿನ ಬರೆಯಲ್ಲಿ ಉರುಳಿಗೆ ಸಿಕ್ಕಿ ಮೃತ ಪಟ್ಟ ಚಿರತೆಯೊಂದರ ಶವ ಪತ್ತೆಯಾಗಿದೆ.ಹಂಡ್ಲಿ ಗ್ರಾ.ಪಂ.ಗೆ ಸೇರಿದ ಹುಲುಕೋಡು ಗ್ರಾಮದ ಮಂಜುನಾಥ್ ಎಂಬುವರಿಗೆ ಸೇರಿದ ಗದ್ದೆಯ ಮೇಲ್ಭಾಗದಲ್ಲಿರುವ ತೋಟದ ಬರೆಯಲ್ಲಿ ಉರುಳಿಗೆ ಸುಮಾರು 12 ವರ್ಷ ಪ್ರಾಯದ ಚಿರತೆಯೊಂದು ಸಿಕ್ಕಿ ಮೃತಪಟ್ಟಿದೆ. ಚಿರತೆ ಐದಾರು ದಿನಗಳ ಹಿಂದೆ ಉರುಳಿಗೆ ಸಿಕ್ಕಿ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಚಿರತೆಯ ಶವ ಇರುವುದನ್ನು ಗಮನಿಸಿದ ಗ್ರಾಮಸ್ಥರು ಸೋಮವಾರ ಮಧ್ಯಾಹ್ನ ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಶನಿವಾರಸಂತೆ ಆರ್ಎಫ್ಒ ಪೂಜಶ್ರೀ, ಇಲಾಖೆ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ.ಸತೀಶ್ ಚಿರತೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಅಧಿಕಾರಿಗಳು ಚಿರತೆಯ ಶವವನ್ನು ಸುಟ್ಟು ಹಾಕುವ ಮೂಲಕ ಅಂತ್ಯ ಸಂಸ್ಕಾರ ನಡೆಸಿದರು.
----------------------------ರಜೆಯಲ್ಲಿ ಬಂದಿದ್ದ ಯೋಧ ಅಪಘಾತದಲ್ಲಿ ಮೃತ್ಯು
ಪೊನ್ನಂಪೇಟೆ : ರಜೆಯಲ್ಲಿ ಮನೆಗೆ ಬಂದಿದ್ದ ಯೋಧರೊಬ್ಬರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಅಸು ನೀಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲಿನ ಚೆನ್ನಂಗೊಲ್ಲಿ ಬಳಿ ನಡೆದಿದೆ.ಪೊನ್ನಪ್ಪಸಂತೆಯ ಬಿದ್ದಮಾಡ ಬಿಪಿನ್ ಭೀಮಯ್ಯ (36) ಎಂಬುವವರು ಮೃತಪಟ್ಟ ಯೋಧ. ಮದುವೆ ಸಮಾರಂಭಕ್ಕೆ ಬಂದಿದ್ದ ಬಿಪಿನ್ ಭೀಮಯ್ಯ ಹಿಂತಿರುಗಿ ತಮ್ಮ ಮನೆಗೆ ತೆರಳುತ್ತಿದ್ದಾಗ ಇವರಿದ್ದ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯೋಧನನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ.